ಅಟ್ಲಾಂಟಾ ಸಮ್ಮೇಳನಕ್ಕೆ ಸುಧಾ ಮೂರ್ತಿ-ಕಂಬಾರ
ಕರ್ನಾಟಕದ ಮುಖ್ಯಮಂತ್ರಿ ಸದಾನಂದ ಗೌಡ ಅವರು ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಅವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಗೋವಿಂದ ಎಂ. ಕಾರಜೋಳ, ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಅವರು ಹಾಗು ಲೋಕೋಪಯೋಗಿ ಇಲಾಖೆಯ ಮಂತ್ರಿ ಸಿ.ಎಂ. ಉದಾಸಿ ಅವರು ಸಮ್ಮೇಳನದಲ್ಲಿ ಭಾಗವಹಿಸಲು ಆಮಂತ್ರಣವನ್ನು ಸ್ವೀಕರಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಡಾ. ಚಂದ್ರಶೇಖರ ಕಂಬಾರ ಹಾಗು ಸಾಹಿತಿ ಮತ್ತು Infosys Foundation ಅಧ್ಯಕ್ಷೆ ಸುಧಾ ಮೂರ್ತಿ ಆಗಮಿಸಲಿರುವ ಗಣ್ಯ ವ್ಯಕ್ತಿಗಳು.
ಮಿನುಗಲಿರುವ ತಾರೆಗಳು : ಕನ್ನಡ ಸಿನಿಮಾ ಲೋಕದಿಂದ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ದಿಗಂತ್, ಯೋಗಿ, ಯಶ್, ರಾಧಿಕಾ ಪಂಡಿತ್, ನಿಧಿ ಸುಬ್ಬಯ್ಯ, ಪ್ರಿಯಾ ಮಣಿ ಇನ್ನು ಮುಂತಾದವರು ಮನೋರಂಜನೆ ಕಾಯಕ್ರಮ ನೀಡಲು ಆಗಮಿಸಲಿದ್ದಾರೆ. ಅವರೊಂದಿಗೆ ಹಾಸ್ಯ ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲ, ಸಂಗೀತ ನಿರ್ದೇಶಕರಾದ ಗುರುಕಿರಣ್ ಮತ್ತು ಹರಿಕೃಷ್ಣ, ನೃತ್ಯ ನಿರ್ದೇಶಕರಾದ ಇಮ್ರಾನ್ ಇನ್ನೂ ಮುಂತಾದವರು ರಂಜಿಸಲು ಆಮಂತ್ರಣವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ರಘು ದೀಕ್ಷಿತ್ ಪ್ರಾಜೆಕ್ಟ್ ಅವರ ಮನರಂಜನಾ ಕಾರ್ಯಕ್ರಮಕ್ಕೆ ಕಾತುರತೆಯಿಂದ ಕನ್ನಡಿಗರು ಎದುರು ನೋಡುತ್ತಿದ್ದಾರೆ.
ಅಧ್ಯಾತ್ಮ ವೇದಿಕೆಗೆ ಗದಗ ಮತ್ತು ಬಿಜಾಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮತ್ತು ತರಳಬಾಳು ಜಗದ್ಗುರು ಬೃಹನ್ಮಠ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳು ಕಾರ್ಯಕ್ರಮಗಳನ್ನು ನಡೆಸಿಕೊಡಲು ಒಪ್ಪಿಗೆ ಸೂಚಿಸಿ ಆಮಂತ್ರಣವನ್ನು ಸ್ವೀಕರಿಸಿದ್ದಾರೆ.
ಕಾರ್ಯಕ್ರಮಗಳು : ಜಗತ್ತಿನ ನಾನಾಕಡೆಗಳಿಂದ ಸಾವಿರಾರು ಜನರನ್ನು ಆಕರ್ಷಿಸುವ ಅಕ್ಕ ಕನ್ನಡ ಸಮ್ಮೇಳನ -2012 ಹಿರಿಯ -ಕಿರಿಯ ಅಭಿಮಾನಿಗಳಿಗೆಲ್ಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಹಿತ್ಯ, ಆಧ್ಯಾತ್ಮಿಕ ವೇದಿಕೆಗಳೊಂದಿಗೆ ವೈದ್ಯಕೀಯ ಶಿಕ್ಷಣ ವೇದಿಕೆ, ಯುವ ವೇದಿಕೆ, ಮಹಿಳಾ ವೇದಿಕೆ, ಉದ್ದಿಮೆಯ ವೇದಿಕೆಗಳಲ್ಲಿ ಆಯಾ ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆದವರಿಂದ ವಿಚಾರ ವಿನಿಮಯ, ಉಪನ್ಯಾಸ, ಚರ್ಚೆ ಇನ್ನೂ ಹತ್ತು-ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನದ ವಿಶಾಲವಾದ ಆವರಣದಲ್ಲೇ ವಸ್ತುಗಳ ಮಾರಾಟಕ್ಕೆ ಅನುಕೂಲಕರವಾಗಿರುವ ಮಳಿಗೆಗಳ ವ್ಯವಸ್ಥೆ ಇದ್ದು, ಮಳಿಗೆಗಳು ಗುತ್ತಿಗೆಗೆ ಲಭ್ಯವಿದೆ.
ಅಟ್ಲಾಂಟಾ ಸಮ್ಮೇಳನದ ಕೇಂದ್ರಬಿಂದು ಮೆರವಣಿಗೆ. ಕರ್ನಾಟಕದ ಜನಪದ ನೃತ್ಯಗಳನ್ನೇ ವಸ್ತುವಾಗಿ ಇಟ್ಟುಕೊಂಡು, ಬೇರೆ ಬೇರೆ ಕಡೆಗಳಿಂದ ಭಾಗವಹಿಸಲು ಬರುವ ಕನ್ನಡ ಕೂಟಗಳ ಸಹಯೋಗದಲ್ಲಿ ಮೆರವಣಿಗೆಯನ್ನು ಅದ್ದೂರಿಯಿಂದ ನಡೆಸಲು ಯೋಜಿಸಲಾಗಿದೆ. ಅದರೊಂದಿಗೆ ಕರ್ನಾಟಕದ ಹೆಗ್ಗುರುತಾಗಿರುವ "ಗಂಡಭೇರುಂಡ"ವನ್ನು ಆಧಾರವಾಗಿರಿಸಿಕೊಂಡು ವೇದಿಕೆ ಮತ್ತು ಆವರಣದ ಅಲಂಕಾರವನ್ನು ವೈಭವಪೂರ್ಣದಿಂದ ಸಜ್ಜು ಮಾಡಲು ಸಿದ್ದತೆಗಳು ಭರದಿಂದ ಸಾಗಿವೆ. ನೊಂದಣಿ ಮಾಡಿದವರಿಗೆಲ್ಲ 3 ದಿನವೂ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗುವುದು.
ಈ 7ನೇ ಕನ್ನಡ ನುಡಿಹಬ್ಬದಲ್ಲಿ ವಿವಿಧ ರೀತಿಯ ಸ್ವರ್ಧೆಗಳನ್ನೂ ಆಯೋಜಿಸಲಾಗಿದೆ. 'ಹಾಡು ಬಾ ಕೋಗಿಲೆ' - AKKA IDOL 2012 - ಸಂಗೀತ ಸ್ಪರ್ಧೆಯಲ್ಲಿ ಭಾಗವಸಿಸಲು ಆಸಕ್ತಿ ಇರುವವರು ಹೆಸರುಗಳನ್ನು ನೊಂದಾಯಿಸಬಹುದು. 'ಶೃಂಗಾರ'- Fashion Show 2012 ಮತ್ತೊಂದು ಆಕರ್ಷಣೆಯಾದರೆ, 'Singles Mingle' ವೇದಿಕೆ ಬಾಳ ಸಂಗಾತಿಯನ್ನು ಕಂಡುಕೊಳ್ಳುವ ಸುವರ್ಣ ಅವಕಾಶ ಒದಗಿಸಲಿದೆ. "ಚಿಗುರು" ಸ್ಮರಣ ಸಂಚಿಕೆಯನ್ನು ನೊಂದಣಿ ಮಾಡಿದ ಪ್ರತಿಯೊಬ್ಬರಿಗೂ ನೀಡಲಾಗುವುದು.