ಕೈದಿಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಾಧ್ಯತೆ
ಗೃಹ ಸಚಿವ ಕೆಜೆ ಜಾರ್ಜ್ ಕೈದಿಗಳಿಗೆ ಈ ಬಿಡುಗಡೆಯ ಭಾಗ್ಯ ಕಲ್ಪಿಸುವ ಭರವಸೆ ನೀಡಲಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಹಿಂಪಡೆದರು.
ನಾನಾ ಬೇಡಿಕೆಗಳನ್ನು ಮುಂದಿಟ್ಟು ಜೈಲಿನಲ್ಲಿರುವ ಮೂರು ಬ್ಯಾರಕ್ ಗಳ 600 ಕೈದಿಗಳು ಬುಧವಾರದಿಂದ ಉಪವಾಸ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ವಿಷಯ ಗೃಹ ಸಚಿವ ಜಾರ್ಜ್ ಅವರ ಗಮನಕ್ಕೆ ಬಂದ ಬಳಿಕ ಶುಕ್ರವಾರ ಬೆಳಿಗ್ಗೆ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳ ಸಮಸ್ಯೆಗಳನ್ನು ಆಲಿಸಿದರು.
'ಸರಿಯಾದ ಮಾರ್ಗಸೂಚಿಗಳಿಲ್ಲದೆ ಅನೇಕ ಕೈದಿಗಳು 14 ವರ್ಷಗಳಿಂದಲೂ ಸಜೆ ಅನುಭವಿಸುತ್ತಿದ್ದಾರೆ. ಅಂತಹ ಸಜಾ ಬಂಧಿಗಳ ವಿವರ ನೀಡುವಂತೆ ಗೃಹ ಸಚಿವ ಕೆಜೆ ಜಾರ್ಜ್ ಸೂಚಿಸಿದ್ದಾರೆ. ಹೀಗಾಗಿ ಎಡಿಜಿಪಿ ನೇತೃತ್ವದ ತಂಡ ಅಂತಹ ಕೈದಿಗಳ ಹೆಸರು, ವಿವರ ಹಾಗೂ ಅವರ ನಡತೆಯನ್ನೊಳಗೊಂಡ ಪಟ್ಟಿಯನ್ನು ಸಿದ್ಧಪಡಿಸಲಿದೆ. ಉತ್ತಮ ನಡತೆಯುಳ್ಳ ಕೈದಿಗಳು ಈ ಬಾರಿ ಆಗಸ್ಟ್ 15ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ' ಗೃಹ ಸಚಿವ ಕೆಜೆ ಜಾರ್ಜ್ ಸಮ್ಮುಖದಲ್ಲಿ ರಾಜ್ಯ ಕಾರಾಗೃಹಗಳ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ವಿಎಸ್ ರಾಜ ತಿಳಿಸಿದ್ದಾರೆ.
'ಜೈಲಿನ ಹಿರಿಯ ಅಧಿಕಾರಿಗಳು ಕೈದಿಗಳ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಗೃಹ ಸಚಿವರೇ ಸ್ಥಳಕ್ಕೆ ಬರಬೇಕು ಎಂದು ಅವರು ಪಟ್ಟು ಹಿಡಿದಿದ್ದರು. ಈ ಕಾರಣದಿಂದ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು' ಎಂದು ವಿಎಸ್ ರಾಜ ತಿಳಿಸಿದ್ದಾರೆ.
'ಸೈಕೊ ಶಂಕರ್ ಜೈಲಿನಿಂದ ತಪ್ಪಿಸಿಕೊಂಡ ನಂತರ ಕಾರಾಗೃಹದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ಕೈದಿಗಳು ಮನೆಯಿಂದ ಊಟ ತರಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಣಾಧೀನ ಕೈದಿಗಳು ಮನೆ ಊಟ ತಿನ್ನಲು ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ' ಅವರು ತಿಳಿಸಿದ್ದಾರೆ.
'ಕೈದಿಗಳನ್ನು ನೋಡಲು ಅವರ ಕುಟುಂಬ ಸದಸ್ಯರು ದೂರದ ಊರುಗಳಿಂದ ಬರುತ್ತಿರುತ್ತಾರೆ. ಈ ವೇಳೆ ಆಸೆಯಿಂದ ಊಟವನ್ನೂ ಹೊತ್ತು ತಂದಿರುತ್ತಾರೆ. ಅದನ್ನು ಒಳಗೆ ಕೊಂಡೊಯ್ಯಲು ಅವಕಾಶ ನೀಡದೆ ವಾಪಸ್ ಕಳುಹಿಸಿದರೆ ಅವರ ಮನಸಿಗೆ ನೋವುಂಟಾಗುತ್ತದೆ. ಹಾಗಾಗಿ ಮಾನವೀಯತೆ ಆಧಾರದಲ್ಲಿ ಮನೆ ಊಟಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಭದ್ರತೆ ಹೆಚ್ಚಸುವ ಉದ್ದೇಶದಿಂದ ಜೈಲಿನ ಪ್ರವೇಶ ದ್ವಾರದಲ್ಲಿ ಹೊಸ ಸ್ಕ್ಯಾನರ್ ಉಪಕರಣಗಳನ್ನು ಇತ್ತೀಚೆಗೆ ಅಳವಡಿಸಲಾಗಿದೆ' ಎಂದು ವಿಎಸ್ ರಾಜ ಹೇಳಿದ್ದಾರೆ.