ವಿಶ್ವಕರ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು, ಆ.13 : ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ವೇಳೆ ನೀಡಲಾಗುವ ಪ್ರತಿಷ್ಠಿತ ವಿಶ್ವಕರ್ಮ ಪ್ರಶಸ್ತಿ'ಗೆ ಸಾಧಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಮಾಜದ ಕಸುಬಿನಲ್ಲಿ ನೈಪುಣ್ಯತೆ ಇರುವ ಹಾಗೂ ನಾಡು-ನುಡಿಗಾಗಿ ದುಡಿದ ಸಮಾಜದ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ವಿಶ್ವಕರ್ಮ ಮಹಾಸಭಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವಕರ್ಮ ಪ್ರಶಸ್ತಿ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು, ಬೆಳಗಾವಿಯಲ್ಲಿ ಸೆ.17ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ನಡೆಯಲಿದೆ. ಅಂದು ಸಮಾಜದ ಕಸುಬಿನಲ್ಲಿ ನೈಪುಣ್ಯತೆ ಇರುವ ಹಾಗೂ ನಾಡು-ನುಡಿಗಾಗಿ ದುಡಿದ ಸಮಾಜದ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಆಯ್ಕೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಅರ್ಹ ವ್ಯಕ್ತಿಗಳ ಆಯ್ಕೆಯಾಗಿ ಧಾರವಾಡದ ಶಿವಣ್ಣ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿ ರಚಿಸಲಾಗಿದೆ. ಪ್ರಶಸ್ತಿಯು 24 ಕ್ಯಾರೆಟ್ ನ ವಿಶ್ವಕರ್ಮ ಲಾಂಛನದ ಬಂಗಾರದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. [ಬೆಳಗಾವಿಯಲ್ಲಿ ಸೆ.17ರಂದು ವಿಶ್ವಕರ್ಮ ಜಯಂತಿ]
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸಂಘ-ಸಂಸ್ಥೆಗಳು, ಸಮಾಜ ಬಾಂಧವರು ಅರ್ಹ ವ್ಯಕ್ತಿಯ ವಿವರಗಳನ್ನು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ನಂ. 475, 4ನೇ ಮಹಡಿ, ಮಲ್ಲೇಶ್ವರಂ, ಬೆಂಗಳೂರು-3 ವಿಳಾಸಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ವಿಶ್ವಕರ್ಮ ಸಮುದಾಯದ ಶಕ್ತಿ ಏನೆಂದು ಸಾಬೀತು ಮಾಡಲು ಪ್ರತಿವರ್ಷ ಯಾವುದಾದರೊಂದು ಜಿಲ್ಲೆಯಲ್ಲಿ ರಾಜ್ಯಮಟ್ಟದ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಬೆಳಗಾವಿಯಲ್ಲಿ ಜಯಂತ್ಯೋತ್ಸವ ನಡೆಯಲಿದ್ದು, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.