ಗೋವಾಕ್ಕೂ ಬೀಸಿತೆ ಜಯಮ್ಮನ ಗಾಳಿ?
ಬೆಂಗಳೂರು: ಆ.19: ಕಾವೇರಿ ಕಾವು ತಣ್ಣಗಾಗಿದ್ದರೂ ರಾಜ್ಯಕ್ಕೆ ಅಂಟಿಕೊಂಡಿರುವ ನೀರಿನ ವಿವಾದಗಳು ಕೊನೆಯಾಗುವಂತೆ ಕಂಡುಬರುತ್ತಿಲ್ಲ. ಈಗ ನೀರಿಗೆ ಸಂಬಂಧಿಸಿ ಕ್ಯಾತೆ ತೆಗೆದಿರುವುದು ಪಕ್ಕದ ಗೋವಾ.
ಕರ್ನಾಟಕ ತನ್ನ ಅಧಿಕಾರ ಬಳಸಿ ಮಹದಾಯಿ ನದಿ ನೀರು ಬಳಸುತ್ತಿದೆ. ಸುಪ್ರೀಂ ಕೋರ್ಟ್ ಮತ್ತು ಮಹದಾಯಿ ನೀರು ಹಂಚಿಕೆ ಸಮಿತಿ ಆದೇಶಗಳನ್ನು ಗಾಳಿಗೆ ತೂರುತ್ತಿದೆ ಎಂದು ಗೋವಾ ಸರ್ಕಾರ ಗಂಭೀರ ಆರೋಪ ಮಾಡಿದೆ.
ಗೋವಾ ವಿಧಾನಸಭೆಯಲ್ಲಿ ರಾಜ್ಯದ ಮೇಲೆ ಆರೋಪಗಳ ಸುರಿಮಳೆಗೈದ ಜಲಸಂಪನ್ಮೂಲ ಸಚಿವ ದಯಾನಂದ್ ಮಂಡ್ರೇಕರ್, ಕರ್ನಾಟಕ ಸರ್ಕಾರ ನಿಯಮಬಾಹಿರವಾಗಿ ಮಹದಾಯಿ ನದಿ ನೀರಿಗೆ ಕೈ ಹಾಕುತ್ತಿದೆ ಎಂದು ಆರೋಪಿಸಿದರು.
ನೀರು ಹಂಚಿಕೆ ಸಂಗತಿಯನ್ನು ಮೊದಲು ಗಮನಕ್ಕೆ ತಂದ ಬಿಜೆಪಿ ಶಾಸಕ ವಿಷ್ಣು ಸೂರ್ಯ ವಾಘ್, ಕರ್ನಾಟಕ ನ್ಯಾಯಾಲಯದ ಆದೇಶ ಮೀರಿ ನಡೆಯುತ್ತಿದೆ. ಗೋವಾ ಮೊದಲಿನಿಂದಲೂ ವಿರೋಧಿಸಿಕೊಂಡು ಬಂದ ಮಹದಾಯಿ ನದಿ ಮೇಲ್ದಂಡೆ ಭಾಗದಲ್ಲಿ ಕರ್ನಾಟಕ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ನೀರು ಹಂಚಿಕೆ ಮಂಡಳಿ ಮೇಲೆ ಒತ್ತಡ ತರುವ ಪ್ರಯತ್ನವನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕಾಲಕ್ಕೆ ತಕ್ಕಂತೆ ನೀರು ಹಂಚಿಕೆ ಮಂಡಳಿಗೆ ವರದಿ ನೀಡುತ್ತಾ ವಾಸ್ತವ ತಿಳಿಸುತ್ತಿದೆ. ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ ಎಂದು ಹೇಳಿದರು. ಮಧ್ಯ ಪ್ರವೇಶಿಸಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕರ್ ಮಾತನಾಡಿ, ಇದಕ್ಕೆಲ್ಲ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ. ಅಂದಿನ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ರಾಜ್ಯ ನೀರು ಹಂಚಿಕೆ ಕುರಿತು ರಾಜ್ಯ ಹಾಕಿದ್ದ ತಕರಾರನ್ನು ಹಿಂಪಡೆದಿತ್ತು. 2002ರ ಸರ್ಕಾರ ಹಾಕಿದ್ದ ತಕರಾರನ್ನು 2007 ರಲ್ಲಿ ಹಿಂಪಡೆದಿದ್ದೇ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಿದರು.
ಈ ಬೆಳವಣಿಗೆ ಕರ್ನಾಟಕಕ್ಕೆ ಲಾಭವಾಗಿದ್ದು ಈಗ ಮತ್ತೇ ನೀರು ಹಂಚಿಕೆ ಕುರಿತು ವಿವಾದ ಏಳುತ್ತಿದೆ. ಇಂಥ ತಪ್ಪುಗಳನ್ನು ನಮ್ಮ ಸರ್ಕಾರ ಸರಿಪಡಿಸಲು ಕ್ರಮ ತೆಗೆದುಕೊಂಡಿದೆ. ರಾಣೆ ಸರ್ಕಾರ ತಕರಾರು ಹಿಂಪಡೆಯಲು ಮುಂದಾದಾಗ ನಾನು ತೀವ್ರವಾಗಿ ವಿರೋಧಿಸಿದ್ದೆ ಎಂದು ಮನೋಹರ್ ಪರೀಕರ್ ಹೇಳಿದರು.
ಗೋವಾ ಸರ್ಕಾರ ಇಷ್ಟೆಲ್ಲಾ ಆರೋಪ ಮಾಡಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯವರೆಗೆ ಯಾವ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.