ಬಿಜೆಪಿ ಮುಖಂಡ ವಿಜಯ್ ಹತ್ಯೆ, ನೋಯ್ಡಾ ಉದ್ವಿಗ್ನ
ಗ್ರೇಟರ್ ನೋಯ್ಡಾ, ಜೂ.8 : ದೆಹಲಿಯ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಅವರನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಆಲ್ಲಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿರುವುದು ವರದಿಯಾಗಿದೆ.
ಇತ್ತೀಚಿನ ವರದಿ ಪ್ರಕಾರ, ದೆಹಲಿಯ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಹತ್ಯೆ ಮಾಡಿದ ಆರೋಪದ ಮೇಲೆ ನಾಲ್ವರು ಶಂಕಿತರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವಿಜಯ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೆಹಲಿ ಬಿಜೆಪಿ ಘಟಕ ಆಗ್ರಹಿಸಿದೆ.
ಉತ್ತರ ಪ್ರದೇಶಕ್ಕೆ ಸೇರುವ ಗ್ರೇಟರ್ ನೋಯ್ಡಾ ಪ್ರದೇಶದ ಗೌತಮ್ ಬುದ್ಧ ಜಿಲ್ಲೆಯ ದಾದ್ರಿ ನಗರದಲ್ಲಿ ಶನಿವಾರ ರಾತ್ರಿ 37 ವರ್ಷದ ವಿಜಯ್ ಪಂಡಿತ್ ಅವರ ಮೇಲೆ ದುಷ್ಕರ್ಮಿಗಳು ಐದು ಸುತ್ತಿನ ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದರು. ಶನಿವಾರ ರಾತ್ರಿ ಸುಮಾರು 8.30 ಗಂಟೆಗೆ ಘಟನೆ ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡಿದ್ದ ವಿಜಯ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆ ನಂತರ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ದಾದ್ರಿನಗರ, ಜಿಟಿ ರಸ್ತೆ ಮುಂತಾದೆಡೆ ಸುಮಾರು 16ಕ್ಕೂ ಅಧಿಕ ವಾಹನಗಳನ್ನು ಸುಟ್ಟು ಹಾಕಿದ್ದರು. ಬಸ್, ಇನ್ನಿತರ ವಾಹನಗಳಿಗೆ ಕಲ್ಲು ಎಸೆದಿದ್ದರು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಪೊಲೀಸರು
ಹಾಗೂ
ಉದ್ರಿಕ್ತರ
ನಡುವೆ
ಘರ್ಷಣೆ
ನಡೆದು,
ಇಬ್ಬರು
ಪೊಲೀಸ್
ಅಧಿಕಾರಿಗೆ
ತೀವ್ರ
ಗಾಯವಾಗಿತ್ತು.
ಸ್ಥಳದಲ್ಲಿ
ಉದ್ವಿಗ್ನ
ವಾತಾವರಣ
ಮುಂದುವರೆದಿದೆ.
ಕ್ಷಿಪ್ರ
ಕಾರ್ಯಪಡೆ
ಸೇರಿದಂತೆ
ಹೆಚ್ಚುವರಿ
ಭದ್ರತಾ
ಸಿಬ್ಬಂದಿಯನ್ನು
ಘಟನಾ
ಸ್ಥಳಕ್ಕೆ
ಕಳುಹಿಸಲಾಗಿದೆ
ಎಂದು
ಜಿಲ್ಲಾ
ಮ್ಯಾಜಿಸ್ಟ್ರೇಟ್
ಎ.ವಿ
ರಾಜಮೌಳಿ
ಹೇಳಿದ್ದಾರೆ.
ಘಟನೆ ವಿವರ: ದಾದ್ರಿ ನಗರ ಪಂಚಾಯತ್ ಚೇರ್ಮನ್ ಗೀತಾ ಪಂಡಿತ್ ಅವರ ಪತಿ ವಿಜಯ್ ಅವರು ಕಳೆದ ರಾತ್ರಿ ದೇಗುಲಕ್ಕೆ ತೆರಳಿದ್ದಾರೆ. ಈ ಬಗ್ಗೆ ಸುಳಿವು ಪಡೆದುಕೊಂಡಿದ್ದ ದುಷ್ಕರ್ಮಿಗಳು ವಿಜಯ್ ಅವರಿಗೆ ಗನ್ ತೋರಿಸಿ ಬೆದರಿಸಿದ್ದಾರೆ. ಆದರೆ, ಬೆದರಿಕೆಗೆ ಪಂಡಿತ್ ಜಗ್ಗದೆ ಮುಂದುವರೆದಾಗ ವಿಜಯ್ ಪಂಡಿತ್ ಮೇಲೆ ಹಲವಾರು ಸುತ್ತಿನ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿದೆ. ಅಲ್ಲಿಂದ ಪರಾರಿಯಾಗುವ ಯತ್ನದಲ್ಲಿ ದುಷ್ಕರ್ಮಿಯೊಬ್ಬರ ಬೈಕ್ ಸ್ಕಿಡ್ ಆದ ಕಾರಣ ಅಲ್ಲೇ ಬಿಟ್ಟು ತೆರಳಲಾಗಿದೆ.
ವೈದ್ಯಕೀಯ ವರದಿ ಪ್ರಕಾರ ವಿಜಯ್ ಪಂಡಿತ್ ಅವರ ಬಾಯಿ, ಎದೆ, ಕಿವಿ ಹಿಂಭಾಗಕ್ಕೆ ಗುಂಡು ತಗುಲಿದೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಮಲಗಿದ್ದ ವಿಜಯ್ ಅವರನ್ನು ದಾದ್ರಿಯ ಮೋಹನ್ ಸ್ವರೂಪ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ನಂತರ ಗಾಜಿಯಾಬಾದಿನ ಯಶೋದಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ವೈದ್ಯರು ವಿಜಯ್ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ವಿಜಯ್ ಪಂಡಿತ್ ಅವರು ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು.