ಈ ಬಾರಿ ಚುನಾವಣೆ ಭವಿಷ್ಯ ಹೇಳಿ 10 ಲಕ್ಷ ರೂ ಗೆಲ್ಲಿ!
ಮಂಗಳೂರು, ಏ.28-ಹದಿನಾರನೇ ಲೋಕಸಭೆಗೆ ಚುನಾವಣೆಗಳು ಬಹಿತೇಕ ಅಂತಿಮ ಚರಣ ತಲುಪಿವೆ. ಈ ಸಂದರ್ಭದಲ್ಲಿ ಮಂಗಳೂರಿನಿಂದ ಸುದ್ದಿಯೊಂದು ಕೇಳೀಬಂದಿದೆ. ಏನಪ್ಪಾ ಅಂದರೆ ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ. ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ... ಹೀಗೆ ಚುನಾವಣಾ ಸಂಬಂಧಿ ಭವಿಷ್ಯ ಹೇಳಿದರೆ ಮತ್ತು ಅದು ನಿಜ ಆದರೆ ನಿಮಗೆ 10 ಲಕ್ಷ ರೂ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.
ಜ್ಯೋತಿಷಿಗಳು, ಪ್ರಕಾಂಡ ಪಂಡಿತರೇ ಈ ಭವಿಷ್ಯ ಹೇಳಬೇಕು ಅಂತೇನೂ ಇಲ್ಲ. ಯಾರು ಬೇಕಾದರೂ ಈ ಸರಳ (!?) ಭವಷ್ಯ ಹೇಳಬಹುದು. ಜತೆಗೆ ಹತ್ತು ಲಕ್ಷ ಜೇಬಿಗಿಳಿಸಬಹುದು. Federation of Indian Rationalist Associations (FIRA) ಈ ಆಹ್ವಾನ ನೀಡಿದ್ದು, ನೀವು ಏನೇ ಭವಿಷ್ಯ ನುಡಿಯುವುದಿದ್ದರೂ ಮೇ 12 ರೊಳಗಾಗಿ ಹೇಳಬೇಕು.
FIRA ಅಧ್ಯಕ್ಷ ನರೇಂದ್ರ ನಾಯಕ್ ಈ ಅವಕಾಶ ಕಲ್ಪಿಸಿದ್ದಾರೆ. ಕನ್ನಡಿಗರೇ ಅಂತಲ್ಲ. ದೇಶದ ಯಾವುದೇ ಮೂಲೆಯಲ್ಲಿರುವವರೂ ತಮ್ಮ ರಾಜಕೀಯ ಪಾಂಡಿತ್ಯ/ ಭವಿಷ್ಯವಾಣಿ ಮೇಲಿನ ತಮ್ಮ ಹಿಡಿತವನ್ನು ಸಾಣೆ ಹಿಡಿಯಬಹುದು.
ಮುಂದಿನ ಪ್ರಧಾನಿ ಯಾರು? ಯಾವ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ಮೈತ್ರಿಕೂಟ ಅಂದಮೇಲೆ ಯಾವ ಪಕ್ಷಗಳೆಲ್ಲಾ ಕೈಜೋಡಿಸುತ್ತವೆ ಎಂಬುದನ್ನು ನಿಖರವಾಗಿ ಹೇಳಬೇಕು. (ಹಿಂದಿನ ಭವಿಷ್ಯಗಳ ಹೆಲ್ಪ್ ಬೇಕಾದರೆ ಇಲ್ಲಿ ಕ್ಲಿಕ್ ಮಾಡಿ)
ಹಾಗೆಯೇ ವಾರಣಾಸಿ, ಗಾಂಧಿನಗರ, ಲಖ್ನೋ, ರಾಯ್ ಬರೇಲಿ ಮತ್ತು ಅಮೇಥಿ ಫಲಿತಾಂಶ ಏನಾಗುತ್ತದೆ? ಇನ್ನು, ಸ್ಥಳೀಯ ಸೊಗಡು/ಟಚ್ ಇರಲಿ ಎಂದು ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಗೆಲುವಿನ ಸಾಧ್ಯಾಸಾಧ್ಯತೆ ಹೇಗೆ? ಎಂಬುದರ ಬಗ್ಗೆಯೂ ಭವಿಷ್ಯ ಹೇಳಬೇಕಾಗುತ್ತದೆ.
ಶೇ. 5ರಷ್ಟು ಆಚೀಚೆ ಫಲಿತಾಂಶ ಸರಿಯಾಗಿದ್ದರೆ ಅಂದರೆ 20 ಪ್ರಶ್ನಾವಳಿಯಲ್ಲಿ 19 ಪ್ರಶ್ನೆಗಳಿಗೆ ಉತ್ತರ ಸರಿ ಕಂಡುಬಂದಲ್ಲಿ 10 ಲಕ್ಷ ರೂ ಗೆಲ್ಲುವ ಸರದಿ ನಿಮ್ಮದಾಗಲಿದೆ, ಪ್ರಯತ್ನಿಸಿ ನೋಡಿ. ಆಲ್ ದಿ ಬೆಸ್ಟ್! ಸರಿಯಾದ ಭವಿಷ್ಯ ನುಡಿದವರ ಸಂಖ್ಯೆ ಹೆಚ್ಚಿದ್ದರೆ ಬಹುಮಾನದ ಮೊತ್ತವನ್ನು ಸಮನಾಗಿ ಹಂಚಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ: www.narendranayak.com ಮತ್ತು www.nirmukta.com