ಕೇವಲ ಹಣ ನೀಡಿದರೆ ಪೆಟ್ರೋಲ್ ಸಿಗದು!
ನವದೆಹಲಿ, ಆ, 21 : ಇಷ್ಟು ದಿನ ಕೇವಲ ಹಣ ನೀಡಿದರೇ ಸಾಕು ಮನಸಿಗೆ ಬಂದಷ್ಟು ಪೆಟ್ರೋಲ್ ತುಂಬಿಸಿಕೊಂಡು ಕಂಡ ಕಂಡಲ್ಲಿ ರೈಡ್ ಮಾಡಬಹುದಿತ್ತು. ಆದರೆ ದೆಹಲಿ ಸರ್ಕಾರ ಇದಕ್ಕೆಲ್ಲ ಬ್ರೇಕ್ ಹಾಕಲು ಮುಂದಾಗಿದೆ. ಪೆಟ್ರೋಲ್ ಅಥವಾ ಡಿಸೇಲ್ ತುಂಬಿಸಲು ನಿರ್ದಿಷ್ಟ ಪ್ರಮಾಣ ಪತ್ರ ಹಾಜರುಪಡಿಸಬೇಕು ಎಂದು ತಿಳಿಸಿದೆ.
ಚಾಲನಾ ಪರವಾನಗಿ, ವಾಹನದ ಪ್ರಮಾಣ ಪತ್ರದ ಜತೆ ಈ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವೂ ಕಡ್ಡಾಯವಾಗಲಿದೆ. ಹೌದು... ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಹೊಸ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ವಾಹನ ಮಾಲೀಕರು ಇನ್ನು ಮುಂದೆ ಬಂಕ್ಗಳಲ್ಲಿ ಇಂಧನ ತುಂಬಿಸಲು ಪ್ರಮಾಣ ಪತ್ರ ಹಾಜರುಪಡಿಸಬೇಕಾಗುತ್ತದೆ.
ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಶ್ರೀವಾತ್ಸವ ನೇತೃತ್ವದಲ್ಲಿ ನಡೆದ ಸಭೆ ಹೆಚ್ಚುತ್ತಿರುವ ವಾಯುಮಾಲಿನ್ಯದ ಕುರಿತು ಗಹನ ಚರ್ಚೆ ನಡೆಸಿತು.
ತಜ್ಞರ ಸಮಿತಿಯೊಂದು ವಾಹನಗಳನ್ನು ತಪಾಸಣೆ ಮಾಡಲಿದ್ದು ಮಾಲಿನ್ಯದ ಪ್ರಮಾಣ ನಿರ್ದಿಷ್ಟಪಡಿಸಲಿದೆ. ಈ ಸಮಿತಿ ನೀಡಿದ ಪ್ರಮಾಣ ಪತ್ರ ಉಳ್ಳವರು ಮಾತ್ರ ಇಂಧನ ತುಂಬಿಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಸಭೆ ತೀರ್ಮಾನ ತೆಗೆದುಕೊಂಡಿದೆ.
ಈ ಅಂಶಗಳು ಜಾರಿಯಾಗಲು ಒಂದೆರಡು ತಿಂಗಳುಗಳು ಹಿಡಿಯಬಹುದು. ಮೊದಲು ದೆಹಲಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕೆಲವು ಜನರು ಸ್ವಯಂಪ್ರೇರಣೆಯಿಂದಲೇ ತಮ್ಮ ವಾಹನಗಳನ್ನು ನಿಯಮಿತ ತಪಾಸಣೆಗೆ ಒಳಪಡಿಸಲಿದ್ದಾರೆ. ಕೆಲ ಪೆಟ್ರೊಲ್ ಬಂಕ್ಗಳಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಪಡೆಯಬಹುದಾಗಿದೆ ಎಂದು ಶ್ರೀವಾತ್ಸವ ತಿಳಿಸಿದರು.
ಯೋಜನೆ ಕಾರ್ಯಗತವಾದ ನಂತರ ಇಂಧನ ತುಂಬಿಸಲು ನಿರ್ದಿಷ್ಟಪಡಿಸಿದ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.