ಮೋದಿ ಸಂಪುಟದಲ್ಲಿ ಯಾರಿಗೆ ಸಿಗಲಿದೆ ಸ್ಥಾನ?
ನವದೆಹಲಿ, ಮೇ.20: ಕೇಂದ್ರ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ? ಕರ್ನಾಟಕದಿಂದ ಎಷ್ಟು ಮಂದಿ ಸಂಸದರು ಕ್ಯಾಬಿನೆಟ್ ಸೇರಬಹುದು? ಪ್ರಮುಖ ಖಾತೆಗಳು ರಾಜ್ಯಕ್ಕೆ ಸಿಗುತ್ತದೆಯೇ? ಎಂಬ ಪ್ರಶ್ನೆಗಳು ಕರ್ನಾಟಕದ ಭವನದ್ದಲ್ಲಷ್ಟೇ ಅಲ್ಲ ಎಲ್ಲೆಡೆ ಗಿರಕಿ ಹೊಡೆಯುತ್ತಿದೆ. ಅದರೆ, ಯಾವುದೇ ಸಂಸದರು ಕೂಡಾ ಸಚಿವ ಸ್ಥಾನ ಬೇಕು ಎಂದು ಲಾಬಿ ನಡೆಸಲು ಮುಂದಾಗಿಲ್ಲ ಎಂಬ ಸುದ್ದಿ ಬಂದಿದೆ.
ಸಂಪುಟದಲ್ಲಿ ತಮ್ಮ ರಾಜ್ಯಕ್ಕೆ ಪ್ರಾತಿನಿಧ್ಯ ಬೇಕು ಎಂದು ಎಂದು ಮನವಿ ಪತ್ರ ಹಿಡಿದುಕೊಂಡು ಬರುವ ಸಂಸದರಿಗೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ದೇಶದ ಜನತೆ ಅಪಾರ ನಿರೀಕ್ಷೆಯಿಟ್ಟುಕೊಂಡು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿ ಅಧಿಕಾರಕ್ಕಿಂತ ಜನಸೇವೆ ಮುಖ್ಯ ಎಂಬುದು ಎಲ್ಲರ ನಿತ್ಯ ಮಂತ್ರವಾಗಬೇಕಿದೆ, ಸಂಪುಟ ಸ್ಥಾನಕ್ಕಾಗಿ ಯಾರೂ ಒತ್ತಡ ಹೇರಬಾರದು ಎಂದು ಮೋದಿ ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ಮಹಾರಾಷ್ಟ್ರ, ಹಿಮಾಚಲಪ್ರದೇಶ, ಅಸ್ಸಾಂ, ಜಾರ್ಖಂಡ್, ಸಮಾಜವಾದಿ ಪಕ್ಷ ಆಡಳಿತವಿರುವ ಉತ್ತರಪ್ರದೇಶ, ಜೆಡಿಯು ಆಡಳಿತವಿರುವ ಬಿಹಾರ ಹಾಗೂ ಬಿಜೆಪಿ ಆಡಳಿತವಿರುವ ರಾಜಸ್ಥಾನಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಮೋದಿ, ರಾಜನಾಥ್, ಅಮಿತ್ ಶಾ ಹಾಗೂ ಅರುಣ್ ಜೇಟ್ಲಿ ಮಾತ್ರ ಸಚಿವ ಸಂಪುಟದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಾಜಪೇಯಿ ಆಡಳಿತದಲ್ಲಿ ಕಾರ್ಯನಿರ್ವಹಿಸಿರುವ ದಾರ್ಜಲಿಂಗ್ ಸಂಸದ ಎಸ್ ಎಸ್ ಅಹ್ಲುವಲಿಯಾ, ಪಾಟ್ನಾ ಸಾಹೀಬ್ ಸಂಸದ ಶತ್ರುಘ್ನ ಸಿನ್ಹಾ, ಗುರ್ದಾಸ್ಪುರ ಸಂಸದ ವಿನೋದ್ ಖನ್ನಾ, ಸರನ್ ಸಂಸದ ರಾಜೀವ್ ಪ್ರತಾಪ್ ರೂಡಿ, ಕಾನ್ಪುರ ಸಂಸದ ಮುರಳಿ ಮನೋಹರ್ ಜೋಶಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ಮೋದಿ ಅವರ ಮೊದಲ ಆದ್ಯತೆ ಎನ್ನಲಾಗಿದೆ.
ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್
ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಮೊದಲ ಹಂತದಲ್ಲೇ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ. ಆದರೆ, ಯಾವ ಖಾತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎಲ್.ಕೆ. ಆಡ್ವಾಣಿ - ಸ್ಪೀಕರ್
ವಾಜಪೇಯಿ ಸಂಪುಟದಲ್ಲಿ ಗೃಹಸಚಿವ ಹಾಗೂ ಉಪ ಪ್ರಧಾನಿಯಾಗಿ ಅನುಭವವಿರುವ ಲಾಲಕೃಷ್ಣ ಆಡ್ವಾಣಿಯವರು ಈ ಬಾರಿ ಲೋಕಸಭೆ ಸ್ಪೀಕರ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಉಳಿದಂತೆ ಎನ್ಡಿಎ ಸಂಚಾಲಕ ಹುದ್ದೆ ಆಫರ್ ಕೂಡಾ ನೀಡಲಾಗಿದೆ.
ಸುಷ್ಮಾ ಸ್ವರಾಜ್ ಗೆ ಯಾವ ಖಾತೆ?
ಚುನಾವಣೆಗೆ ಮೊದಲು ಮೋದಿ ಜೊತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ ಸುಷ್ಮಾ ಸ್ವರಾಜ್ ಅವರು ಈಗಲೂ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಮೋದಿ ಸರ್ಕಾರದ ಸಂಪುಟದಲ್ಲಿ ಇರಲು ಇಚ್ಛಿಸುತ್ತಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆದರೆ, ಬಿಜೆಪಿ ಮೂಲಗಳ ಪ್ರಕಾರ ಸುಷ್ಮಾ ಸ್ವರಾಜ್ ಅವರಿಗೆ ಎಚ್ ಆರ್ ಡಿ ಅಥವಾ ವಿದೇಶಾಂಗ ಖಾತೆ ಲಭಿಸುವ ಸಾಧ್ಯತೆಯಿದೆ.
ಅರುಣ್ ಜೇಟ್ಲಿ - ಹಣಕಾಸು ಸಚಿವ?
ಚುನಾವಣೆಯಲ್ಲಿ ಸೋಲುಂಡಿರುವ ಅರುಣ್ ಜೇಟ್ಲಿಅವರನ್ನು ಹೇಗಾದರೂ ಸಂಪುಟ ಸೇರಿಸಿಕೊಳ್ಳಲು ಬಿಜೆಪಿ ಯತ್ನಿಸಲಿದೆ. ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರು ಜೇಟ್ಲಿಯನ್ನ ಹಣಕಾಸು ಸಚಿವರನ್ನಾಗಿ ಮಾಡಲು ಉತ್ಸುಕರಾಗಿದ್ದಾರೆ. ಕ್ಯಾಬಿನೆಟ್ ಸಚಿವ ಸ್ಥಾನವಲ್ಲದೆ ಜೇಟ್ಲಿ ಅವರಿಗೆ ಬೇರೆ ಉನ್ನತ ಹುದ್ದೆ ನೀಡಿದರೂ ಅಚ್ಚರಿಪಡಬೇಕಾಗಿಲ್ಲ.
ಮುರಳಿ ಮನೋಹರ್ ಜೋಶಿ
ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ತಮ್ಮ ವಾರಾಣಾಸಿ ಸ್ಥಾನವನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದರು. ಕಾನ್ಪುರದಿಂದ ಈ ಬಾರಿ ಆಯ್ಕೆಯಾಗಿದ್ದು, ವಾಜಪೇಯಿ ಆಡಳಿತದಲ್ಲಿ ಎಚ್ ಆರ್ ಡಿ ಖಾತೆ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅದೇ ಖಾತೆ ಸಿಕ್ಕರೂ ಸಿಗಬಹುದು.
ಬಿ.ಎಸ್ ಯಡಿಯೂರಪ್ಪ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಪ್ರಬಲ ಲಿಂಗಾಯತ ಮುಖಂಡ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಇನ್ನೂ ಭೂ ಹಗರಣ ಕೇಸ್ ಗಳಿವೆ. ಹೀಗಾಗಿ ಮೊದಲ ಹಂತದಲ್ಲಿ ಸಂಪುಟದ ಸೇರ್ಪಡೆ ಕಷ್ಟ ಎಂಬ ಮಾತುಗಳು ಕೇಳಿ ಬಂದಿದೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರಿಗೆ ಕೃಷಿ ಖಾತೆ ಒಲಿಯಬಹುದು ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ.
ನರೇಂದ್ರ ಮೋದಿಯ ಆಪ್ತ- ಅಮಿತ್ ಶಾ
ಅದ್ಭುತ ಕಾರ್ಯತಂತ್ರ ರೂಪಿಸುವ ಮತ್ತು ಖಡಕ್ ನಿರ್ಧಾರಗಳ ಮೂಲಕ ಮೋದಿ ಅವರ ಪ್ರಚಾರದ ಹೊಣೆ ಹೊತ್ತಿದ್ದ ಅಮಿತ್ ಶಾ ಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆಯಾದರೂ ಯಾವ ಖಾತೆ ಎಂಬುದು ಕುತೂಹಲಕಾರಿ, ರಕ್ಷಣಾ ಖಾತೆ ಸೇರಿ ಹಲವು ಖಾತೆಗಳಿಗೆ ಅಮಿತ್ ಶಾ ಹೆಸರು ಕೇಳಿ ಬಂದಿದೆ.
ಡಿವಿ ಸದಾನಂದ ಗೌಡ
ಯಡಿಯೂರಪ್ಪ ಅವರಂತೆ ಡಿವಿ ಸದಾನಂದ ಗೌಡ ಅವರಿಗೂ ಮೊದಲ ಹಂತದಲ್ಲಿ ಚಾನ್ಸ್ ಸಿಗುವುದು ಕಷ್ಟ. ಮಾಹಿತಿ ಮತ್ತು ತಂತಜ್ಞಾನ, ವಾರ್ತಾ ಮತ್ತು ಪ್ರಸಾರ ಖಾತೆ ಬಗ್ಗೆ ಸದಾನಂದ ಗೌಡರಿಗೆ ಒಲವಿದೆ ಎಂಬ ಸುದ್ದಿಯಿದೆ.
ಅನಂತ್ ಕುಮಾರ್ ಗೆ ಯೋಗ
ಆರು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಅನಂತಕುಮಾರ್ ಅವರಿಗೆ ವಿದೇಶಾಂಗ, ನಗರಾಭಿವೃದ್ಧಿ ಖಾತೆ ಸಿಗುವ ಸಾಧ್ಯತೆ ಕಂಡು ಬಂದಿದೆ.
ಪ್ರತಾಪ್ ಸಿಂಹಗೆ ಅವಕಾಶ
ಮೋದಿ ಅವರ ಆಪ್ತ ವಲಯದ ಅಭ್ಯರ್ಥಿಯಾಗಿ ಲೋಕಸಭೆ ಕಣಕ್ಕಿಳಿದು ಕಾಂಗ್ರೆಸ್ಸಿನ ಹಳೆ ಹುಲಿ ಎಚ್ ವಿಶ್ವನಾಥ್ ಅವರನ್ನು ಸೋಲಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ರಾಜ್ಯ ಖಾತೆ ಅಥವಾ ಕ್ಯಾಬಿನೆಟ್ ದರ್ಜೆಗೆ ಸಮಾನಂತರ ಹುದ್ದೆ ಸಿಗುವ ನಿರೀಕ್ಷೆಗಳಿವೆ
ರಾಜ್ಯಕ್ಕೆ ಎಷ್ಟು ಸ್ಥಾನ ಸಿಗಲಿದೆ?
ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜಾಪುರದ ಸಂಸದ ರಮೇಶ್ ಜಿಗಜಿಣಗಿ ಅವರ ಹೆಸರು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಟ್ಟು ನಾಲ್ಕು ಕ್ಯಾಬಿನೆಟ್ ದರ್ಜೆ ಹಾಗೂ ಎರಡು ರಾಜ್ಯ ಖಾತೆ(MoS) ಸ್ಥಾನಕ್ಕಾಗಿ ಮೋದಿ ಅವರಲ್ಲಿ ರಾಜ್ಯ ನಿಯೋಗ ಬೇಡಿಕೆ ಇಟ್ಟಿದೆ.