ಅಡ್ವಾಣಿ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ ಮೋದಿ
ಗಾಂಧಿನಗರ, ಏ. 5: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಪಕ್ಷದ ಭೀಷ್ಮ ಪಿತಾಮಹ ಎಲ್ ಕೆ ಅಡ್ವಾಣಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರ ಮಧ್ಯೆ ಎಲ್ಲವೂ ಸುಗಮವಾಗಿದೆ ಎಂಬುದು ಇಂದು ಮತ್ತೊಮ್ಮೆ ಸಾಬೀತಾಗಿದೆ.
ಇತ್ತ 'ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತಮ ಪ್ರಧಾನಿಯಾಗಬಲ್ಲರು' ಎಂದು ಆಡ್ವಾಣಿ ಸರ್ಟಿಫಿಕೇಟ್ ನೀಡಿದರೆ ಅತ್ತ ನರೇಂದ್ರ ಮೋದಿ ಅವರು ಅಡ್ವಾಣಿ ಜತೆ ತೆರಳಿ, ನಾಮಪತ್ರ ಸಲ್ಲಿಕೆಗೆ ಅಡ್ವಾಣಿಗೆ ಸಾಥ್ ನೀಡಿದರು. ಇದರಿಂದ 'ನಾವಿಬ್ಬರೂ ಚೆನ್ನಾಗಿದ್ದೇವೆ' ಎಂದು ರುಜುವಾತು ಪಡಿಸಿದಂತಿತ್ತು.
ಲೋಕಸಭಾ ಚುನಾವಣೆಗೆ ಗುಜರಾತಿನ ರಾಜಧಾನಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಡ್ವಾಣಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ನರೇಂದ್ರ ಮೋದಿ, ಬಿಜೆಪಿ ನಾಯಕರು ಹಾಗೂ ಸಾವಿರಾರು ಬೆಂಬಲಿಗರು ಅವರಿಗೆ ಸಾಥ್ ನೀಡಿದರು. 1998 ಸತತ 5 ಬಾರಿ ಗಾಂಧಿನಗರ ಕ್ಷೇತ್ರದಿಂದ ಸಂಸದರರಾಗಿ ಆಯ್ಕೆಯಾಗಿರುವ 86 ವರ್ಷದ ಆಡ್ವಾಣಿ ಅವರು ಆರನೇ ಬಾರಿಗೂ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಆಡ್ವಾಣಿ, ಗಾಂಧಿನಗರದಿಂದ ಪುನಃ ಸ್ಪರ್ಧಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಬಾರಿಯ ಸಮೀಕ್ಷೆಗಳ ಪ್ರಕಾರ ಚುನಾವಣೆಯಲ್ಲಿ ಕಾಂಗ್ರೆಸ್ ಮಖಾಡೆ ಮಲಗಲಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೋದಿ ಅಥವಾ ಇತರೆ ಯಾವ ನಾಯಕರನ್ನು ಹೋಲಿಕೆ ಮಾಡಲು ಇಚ್ಚಿಸಲ್ಲ. ಅವರವರಿಗೆ ಅವರದೇ ಆದ ಚಿಂತನೆಗಳಿವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಉತ್ತಮ ಸಂಘಟಕ, ಅವರು ದೇಶಕ್ಕೆ ಉತ್ತಮ ಪ್ರಧಾನಿಯಾಗಬಲ್ಲರು ಎಂದು ಅಡ್ವಾಣಿ ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಳೆದ ಸೆಪ್ಟೆಂಬರಿನಲ್ಲಿ ಬೇಸರಗೊಂಡಿದ್ದ ಅಡ್ವಾಣಿ, ಈ ಬಾರಿ ಲೋಕಸಭಾ ಚುನಾವಣೆಗೆ ಮಧ್ಯಪ್ರದೇಶದ ಭೂಪಾಲಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಬಿಜೆಪಿ ಹಿರಿಯ ನಾಯಕರ ಮನವೊಲಿಕೆಯಾಗಿ, ಅಡ್ವಾಣಿ ಪುನಃ ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದಕ್ಕೆ ಸಮ್ಮತಿಸಿದರು.
ಈ ಮಧ್ಯೆ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಲಖನೌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ತಮ್ಮ ಉಮೇದುವಾರಿಗೆ ಸಲ್ಲಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]