ಉತ್ತರಾಖಂಡ್ : ಬಿಜೆಪಿ ಮುಖಂಡ ನಿಗೂಢ ಸಾವು
ಉತ್ತರಾಖಂಡ್, ಜೂ.15: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಸ್ಥಳೀಯ ಬಿಜೆಪಿಯ ಮುಖಂಡರಾದ ರಾಕೇಶ್ ಕುಮಾರ್ ರಾಸ್ತೋಗಿ ಎಂಬುವರ ಶವ ಭಾನುವಾರ ಪತ್ತೆಯಾಗಿದೆ. ಶುಕ್ರವಾರದಿಂದ ರಾಕೇಶ್ ನಾಪತ್ತೆಯಾಗಿದ್ದರು.
40 ವರ್ಷ ಪ್ರಾಯದ ರಾಸ್ತೋಗಿ ಅವರನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಬಹೇರಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ರಸ್ತೋಗಿ ಅವರ ಕಾರು ಪತ್ತೆಯಾಗಿತ್ತು. ಕಾರಿನ ಬಳಿಯಲ್ಲೇ ರಸ್ತೋಗಿ ಅವರ ಶವ ಪತ್ತೆಯಾಗಿದೆ. ರಸ್ತೋಗಿ ನೈನಿತಾಲ್ನ ಬಿಜೆಪಿಯ ಸ್ಥಳೀಯ ನಾಯಕರಾಗಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಕೇಶ್ ಅವರ ಶವವನ್ನು ಪರೀಕ್ಷಿಸಿದಾಗ ತಲೆ ಹಾಗೂ ಕೈಯ ಮೇಲೆ ಗಾಯದ ಗುರುತು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸಾವಿನ ಬಗ್ಗೆ ನಿಖರವಾಗಿ ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡ್ ನ ಉಧಮ್ ಸಿಂಗ್ ನಗರ್ ಜಿಲ್ಲೆಯ ಕಿಚ್ಚ ನಗರ ಮೂಲದವರಾದ ರಾಕೇಶ್ ಅವರು ಉಧಮ್ ಸಿಂಗ್ ನಗರ್ ನ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದರು.
ಬಿಜೆಪಿ ಸಂಸದೆ ಮೇಲೆ ಹಲ್ಲೆ : ಫತೇಪುರ್ ನಲ್ಲಿ ಬಿಜೆಪಿ ಸಂಸದೆ ಸಾಧ್ವಿ ನಿರಂಜನ್ ಜ್ಯೋತಿ ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಭಾನುವಾರ ದಾಳಿ ನಡೆಸಿದ ಘಟನೆ ಜರುಗಿದೆ.
ಉತ್ತರಪ್ರದೇಶದ ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆಯಾಗಿದ್ದು, ಭಾನುವಾರ ಬೆಳಗ್ಗೆ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸಾಧ್ವಿ ಅವರ ಕಾರನ್ನು ತಡೆದು ಅವರ ಜತೆ ನಾಲ್ವರು ದುಷ್ಕರ್ಮಿಗಳು ವಾಗ್ವಾದ ನಡೆಸಿದ್ದಾರೆ.
ಅಲ್ಲದೆ, ಸಾಧ್ವಿ ನಿರಂಜನ್ ಅವರ ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಾಧ್ವಿ ನಿರಂಜನ್ ಅವರ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕಳೆದ ವಾರ 40 ವರ್ಷ ವಯಸ್ಸಿನ ಮೀರ್ ಪುರ ನಗರ ಬಿಜೆಪಿ ಘಟಕ ಅಧ್ಯಕ್ಷ ಓಂವೀರ್ ಎಂಬುವವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಮುಜಾಫರ್ ನಗರದಲ್ಲಿ ನಡೆದಿತ್ತು. ಇದಕ್ಕೂ ಮುನ್ನ ಜೂ.7 ರಂದು ಗ್ರೇಟರ್ ನೋಯ್ಡಾದಲ್ಲಿ ಬಿಜೆಪಿ ಮುಖಂಡ ವಿಜಯ್ ಪಂಡಿತ್ ಹತ್ಯೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.[ಬಿಜೆಪಿ ಮುಖಂಡ ವಿಜಯ್ ಹತ್ಯೆ, ನೋಯ್ಡಾ ಉದ್ವಿಗ್ನ]