ಅರುಣ್ ಜೇಟ್ಲಿ ಕೇಂದ್ರ ಬಜೆಟ್ ನಿರೀಕ್ಷೆಗಳೇನು?
ನವದೆಹಲಿ, ಜು.7: ಅರುಣ್ ಜೇಟ್ಲಿ ಅವರ ಬಜೆಟ್ ಇದಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿ ನಿರೂಪಣೆಯಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಆರ್ಥಿಕ ಉತ್ತೇಜನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಾಧ್ಯತೆ ಇದೆ. ಹತ್ತು ಹಲವು ಸಮಸ್ಯೆಗಳ ನಡುವೆ ಜನ ಮೆಚ್ಚುವ ಬಜೆಟ್ ನೀಡುವ ಒತ್ತಡ ಎನ್ಡಿಎ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್ ನ ನಿರೀಕ್ಷೆಗಳತ್ತ ಇಣುಕು ನೋಟ ಇಲ್ಲಿದೆ
ಜೇಟ್ಲಿ ಅವರ ಬಜೆಟ್ ಸಿದ್ಧತೆ ಕಾರ್ಯ ಪೂರ್ಣಗೊಂಡಿದ್ದು, ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಚರ್ಚಿಸಿದ್ದಾರೆ. ಬೆಲೆ ಏರಿಕೆ ನಿಯಂತ್ರಣ, ಆಡಳಿತ ನಿರ್ವಹಣಾ ವೆಚ್ಚ ಕಡಿವಾಣ, ಸಬ್ಸಿಡಿಗಳ ಮೇಲೆ ನಿಯಂತ್ರಣ ಸೇರಿದಂತೆ ಜೇಟ್ಲಿ ಮುಂದೆ ಹಲವು ಸವಾಲುಗಳಿವೆ.[ಡಿವಿಎಸ್ ರಿಂದ ಏನು ನಿರೀಕ್ಷೆಯಿದೆ?]
ಜು.7 ರಿಂದ ಆ.14ರ ವರೆಗೆ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಜು.8ರಂದು ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜು.10ರಂದು ಸಾಮಾನ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರ ಬಜೆಟ್ 2014-15ರ ಟಾಪ್ 10 ನಿರೀಕ್ಷೆಗಳ ಬಗ್ಗೆ ಮುಂದೆ ಓದಿ...
ಬೆಲೆ ಏರಿಕೆ ನಿಯಂತ್ರಣ ಸಾಧ್ಯತೆ
ಆಹಾರ ದುಬ್ಬರ, ಹಣ ದುಬ್ಬರ, ಬೆಲೆ ಏರಿಕೆ ಬಿಸಿ ಅನುಭವಿಸಿದ ಯುಪಿಎ ಸರ್ಕಾರ ಪತನಗೊಂಡಿರುವುದನ್ನು ಈಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಕಣ್ಣಾರೆ ಕಂಡಿದ್ದಾರೆ. ಆದರೆ, ಹಣದುಬ್ಬರ ದರ ಮೇ ತಿಂಗಳಿನಲ್ಲಿ ಶೇ 8ರಷ್ಟು ಏರಿಕೆ ಕಂಡಿದೆ.
ಈರುಳ್ಳಿ ಕಳೆದ ಮೂರ್ನಾಲ್ಕು ವಾರಗಳಲ್ಲಿ ಶೇ 40ರಷ್ಟು ಏರಿಕೆ ಕಾಣುತ್ತಿದೆ. ಆಹಾರ ದುಬ್ಬರ ಇಳಿಕೆಗೆ ಮಾರುಕಟ್ಟೆ ಮೇಲೆ ಹೇಗೆ ನಿಯಂತ್ರಣ ಸಾಧಿಸಲಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿವಾಣಕ್ಕೆ ಯಾವ ಹೊಸ ಕ್ರಮ ಸಾಧಿಸಲಾಗುತ್ತದೆ. ಬಜೆಟ್ ನಂತರದ ರಫ್ತು ನಿಯಂತ್ರಣದ ಬಗ್ಗೆ ಆರ್ ಬಿಐ ಕೈಗೊಳ್ಳಲಿರುವ ಕ್ರಮ ಕುತೂಹಲಕಾರಿಯಾಗಿದೆ.
ದೇಶದೆಲ್ಲೆಡೆ ಮುಂಗಾರು ಕೈಕೊಟ್ಟಿರುವುದರಿಂದ ಅರುಣ್ ಜೇಟ್ಲಿ ಅವರು ಅತ್ಯಂತ ಜಾಣ್ಮೆಯಿಂದ ಬೆಲೆ ಏರಿಕೆ ಕ್ರಮ ಕೈಗೊಳ್ಳಬೇಕಾಗುತ್ತದೆ.
ವಿದೇಶಿ ನೇರ ಬಂಡವಾಳ ಹೂಡಿಕೆ
ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಸಾಕಷ್ಟು ಗೊಂದಲವಿದ್ದರೂ ಎನ್ಡಿಎ ಸರ್ಕಾರ, ರೀಟೈಲ್, ರಕ್ಷಣಾ ಕ್ಷೇತ್ರ, ರೈಲ್ವೆ, ಮೂಲ ಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಎಫ್ ಡಿಐ ತರಲಿದೆ. ಆದರೆ, ರೀಟೈಲ್ ನಲ್ಲಿ ಎಫ್ ಡಿಐ ಸಾಧ್ಯತೆ ಕಡಿಮೆ. ರಕ್ಷಣೆ ಮುಂತಾದ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮೂಲಕ ದೇಶದ ಭದ್ರತೆಗೆ ಕುತ್ತುಂಟಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಎಫ್ ಡಿಐ ತಡೆಗಟ್ಟಲು ಸಾಧ್ಯವಿಲ್ಲ. ಜತೆಗೆ ಅದರ ಸದ್ಬಳಕೆ ಮಾಡದಿದ್ದರೆ ಎನ್ಡಿಎಗೆ ಮುಳುವಾಗುವುದರಲ್ಲಿ ಸಂಶಯವೇ ಇಲ್ಲ
ಕಪ್ಪು ಹಣ ಹಿಂಪಡೆಯುವುದು ಬಳಕೆ?
ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ಹಿಂಪಡೆಯುವುದಕ್ಕೆ ಮೋದಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ. ಸ್ವಿಸ್ ಸರ್ಕಾರ ಖಾತೆದಾರರ ಪಟ್ಟಿಯನ್ನು ಘೋಷಿಸಿದರೆ ಮುಂದಿನ ಕ್ರಮವೇನು? ಕಪ್ಪು ಹಣವನ್ನು ಬಳಸಿಕೊಂಡು ಭಾರತದ ಮೇಲಿರುವ ಸಾಲದ ಹೊರೆಯನ್ನು ಕಡಿಮೆ ಮಾಡಲು ಬಳಸುವುದು ಮುಂತಾದ ಕ್ರಮದ ಬಗ್ಗೆ ಗಮನ ಹರಿಸಲಾಗುತ್ತದೆ. ವಿಶೇಷ ತನಿಖಾ ದಳ ತನ್ನ ಕಾರ್ಯಾಚರಣೆ ಮುಂದುವರೆಸಿದ್ದು, ಇದು ಎನ್ ಡಿಎ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
ಮೂಲ ಸೌಕರ್ಯ ಅಭಿವೃದ್ಧಿ
ಜಾಗತಿಕ ಮಾರುಕಟ್ಟೆಗೆ ಅನ್ವಯವಾಗುವಂತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಬಂಡವಾಳ ಹೂಡಿಕೆ ತರಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಯೋಜನೆ(PPP ಮಾದರಿ) ಇನ್ನಷ್ಟು ಹೆಚ್ಚಾಗಲಿದ್ದು, ಹಾಲಿ ಯೋಜನೆಗಳು ಸೇರಿದಂತೆ ಹೊಸ ಯೋಜನೆಗಳಿಗೂ ಪಿಪಿಪಿ ಮಾದರಿ ಅನುಷ್ಠಾನಕ್ಕಾಗಿ ಟ್ರಸ್ಟ್ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಈ ಟ್ರಸ್ಟ್ ಗಳು ಸೆಬಿಯಲ್ಲಿ ನೋಂದಣಿಯಾಗಲಿದ್ದು, ತೆರಿಗೆ ಸಬ್ಸಿಡಿ ಪಡೆಯಲಿವೆ.
ಮಹಿಳೆಯರ ಸುರಕ್ಷತೆ, ಭದ್ರತಾ ನಿಧಿ
ನಿರ್ಭಯಾ ನಿಧಿಗಾಗಿ 1,000 ಕೋಟಿ ರು ಕಳೆದ ಮಧ್ಯಂತರ ಬಜೆಟ್ ನಲ್ಲಿ ಯುಪಿಎ ಸರ್ಕಾರ ಘೋಷಿಸಿತ್ತು. ನಿರ್ಭಯಾ ನಿಧಿ ದುರ್ಬಳಕೆ ಬಗ್ಗೆ ವ್ಯಂಗ್ಯವಾಡಿದ್ದ ಮೋದಿ ಅವರು ಈಗ ಮಹಿಳೆಯರ ಸುರಕ್ಷತೆ ಬಗ್ಗೆ ಯಾವ ಕ್ರಮ ಜರುಗಿಸುತ್ತಾರೆ ಎಷ್ಟು ಅನುದಾನ ನೀಡಲಿದ್ದಾರೆ ಎಂಬುದು ಕುತೂಹಲಕಾರಿ.
ಉತ್ತರಪ್ರದೇಶದಲ್ಲಿ ನಡೆದಿರುವ ಸರಣಿ ಅತ್ಯಾಚಾರ ಪ್ರಕರಣಗಳು ವಿಶ್ವಸಂಸ್ಥೆಯಿಂದ ಖಂಡನೆಗೆ ಒಳಪಟ್ಟಿದೆ. ಹೀಗಾಗಿ ಬಜೆಟ್ ನಲ್ಲಿ ಮಹಿಳಾ ಸುರಕ್ಷತೆ, ಭದ್ರತಾ ನಿಧಿ ಬಗ್ಗೆ ಮೋದಿ ಸರ್ಕಾರ ಕೈಗೊಳ್ಳುವ ಯೋಜನೆ ಮೇಲೆ ಇಡೀ ವಿಶ್ವದ ಕಣ್ಣಿದೆ.
ಕೃಷಿ ಕ್ಷೇತ್ರಕ್ಕೆ ಏನು ಸಿಗಲಿದೆ?
ಎಲ್ ನಿನೋ ಪರಿಣಾಮ, ವಿಜ್ಞಾನಿಗಳು, ಹವಾಮಾನ ಇಲಾಖೆ ಎಚ್ಚರಿಕೆಯ ಗಂಟೆ ಜತೆಗೆ ದೇಶದೆಲ್ಲೆಡೆ ಮುಂಗಾರು ಕೈಕೊಟ್ಟಿರುವುದರಿಂದ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ದೇಶದ ಭವಿಷ್ಯ ರೂಪಿಸಲಿದೆ. ರೈತರ ಆತ್ಮಹತ್ಯೆ, ಸೂಕ್ತ ಬೆಂಬಲ ಬೆಲೆ ರಾಜ್ಯಗಳಿಗೆ ಸಿಗಬೇಕಾಗಿರುವ ಅನುದಾನ, ರಸಗೊಬ್ಬರ ಕೊರತೆ, ಕೃಷಿಗೆ ಪೂರಕವಾದ ಜಲ ಸಂಪನ್ಮೂಲ, ತಂತ್ರಜ್ಞಾನ ಬಳಕೆ ಬಗ್ಗೆ ಎಲ್ಲಾ ರಾಜ್ಯಗಳು ಕಾದು ನೋಡುತ್ತಿವೆ
ದೇಶದ ರಕ್ಷಣೆ, ಭದ್ರತಾ ಪಡೆ ಮೇಲ್ದರ್ಜೆ
ಮೊದಲೇ ಹೇಳಿದಂತೆ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಅನಿವಾರ್ಯವಾದರೂ ಹೂಡಿಕೆ ಪ್ರಮಾಣದ ಬಗ್ಗೆ ತಕರಾರು ಇದ್ದೇ ಇದೆ. ದೇಶದ ಭದ್ರತೆ, ಗೌಪ್ಯತೆಯ ಗಡಿ ಮೀರಿ ಮೋದಿ ಸರ್ಕಾರ ವಿದೇಶಿಗಳ ಕೈಲಿ ರಕ್ಷಣಾ ಕ್ಷೇತ್ರದ ಹಿಡಿತ ನೀಡಿದರೆ ಕಷ್ಟ ಎಂದು ವಿಪಕ್ಷಗಳು ದೂರುತ್ತಿವೆ. ಎಫ್ ಡಿಐ ಪ್ರಮಾಣ, ಅಗತ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.
ಗಂಗಾ ನದಿ ಸ್ವಚ್ಛತೆ, ನದಿ ಜೋಡಣೆ
ಗಂಗಾ ಯಮುನಾ ನದಿ ಸ್ವಚ್ಛತೆ ಬಗ್ಗೆ ವಾರಣಾಸಿ ಸಂಸದ ಪ್ರಧಾನಿ ಮೋದಿ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಅಂದಿನ ಕನಸಾದ ನದಿ ಜೋಡಣೆ ಮೂಲಕ ದೇಶದ ಬರಗಾಲ ಪೀಡಿತ ಪ್ರದೇಶಗಳಿಗೆ ನೀರುಣಿಸುವ ಕಾರ್ಯಕ್ಕೆ ಮೋದಿ ಕೈ ಹಾಕುವರೇ ಎಂಬ ಕುತೂಹಲ ಮನೆ ಮಾಡಿದೆ. ಗಂಗಾ ನದಿಯಂತೆ ಇತರೆ ಪ್ರಮುಖ ನದಿಗಳ ಸ್ವಚ್ಛತೆ ಹಾಗೂ ಬಳಕೆ ಬಗ್ಗೆ ಕ್ರಮ ಅಗತ್ಯವಿದೆ.
ಆರೋಗ್ಯ ಹಾಗೂ ವಿಮೆ ಕ್ಷೇತ್ರ
ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾತನ್ನು ಆಧಾರವಾಗಿಟ್ಟುಕೊಂಡರೆ ಒಬಾಮಾ ಕೇರ್ ನಂತೆ ಮೋದಿ ಕೇರ್ ಆರೋಗ್ಯ ವಿಮೆ ಜಾರಿಗೆ ಬಂದರೆ ವಿಶ್ವಕ್ಕೆ ಮಾದರಿಯಾಗಬಲ್ಲ ವಿಮಾ ಯೋಜನೆ ಕೊಟ್ಟ ಕೊಡುಗೆ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಪ್ರತಿ ರಾಜ್ಯದಲ್ಲೂ ಏಮ್ಸ್ ಸ್ಥಾಪನೆ. ಅಗತ್ಯ ಔಷಧಿಗಳ ಮೇಲೆ ಸಬ್ಸಿಡಿ, ಜನತಾ ಔಷಧಾಲಯಗಳ ಹೆಚ್ಚಳ, ಸಂಶೋಧನೆಗೆ ಹೆಚ್ಚಿನ ಮಹತ್ವ, ವಿದೇಶದಲ್ಲಿರುವ ಎನ್ನಾರೈ ವೈದ್ಯರ ನೆರವು ಮುಂತಾದ ವಿಷಯಗಳ ಮೇಲೆ ಜೇಟ್ಲಿ ಗಮನ ಹರಿಸುವ ಸಾಧ್ಯತೆಯಿದೆ.
ತೆರಿಗೆದಾರರು, ಹೂಡಿಕೆದಾರರು
ಯುಪಿಎ
ಸರ್ಕಾರದಲ್ಲಿ
ನಂಬಿಕೆ
ಕಳೆದುಕೊಂಡಿದ್ದ
ಹೂಡಿಕೆದಾರರನ್ನು
ಮತ್ತೆ
ಬಂಡವಾಳ
ಹಾಕಲು
ಪ್ರೋತ್ಸಾಹಿಸುವುದು,
ಗುಡಿ
ಕೈಗಾರಿಕೆ
ಹಾಗೂ
ಬೃಹತ್
ಉದ್ದಿಮೆಗಳ
ನಡುವೆ
ಸಮತೋಲನ
ಕಾಯುವಿಕೆ.
*
ವೈಯಕ್ತಿಕ
ತೆರಿಗೆ
ಮಿತಿ
ಕನಿಷ್ಠ
3
ಲಕ್ಷಕ್ಕೇರಿಸುವುದು,
80
ಸಿ
ಉಳಿತಾಯದಲ್ಲಿ
ವ್ಯತ್ಯಯ.
*
ಕೈಗಾರಿಕಾ
ಕ್ಷೇತ್ರಕ್ಕೆ
ವಿಶೇಷ
ತೆರಿಗೆ
ಅನುದಾನ
ಮೂಲಕ
ಹೂಡಿಕೆ
ಹೆಚ್ಚಿಸುವುದು.
*
ಅಬಕಾರಿ
ಹಾಗೂ
ಕಸ್ಟಮ್ಸ್
ನಲ್ಲಿ
ನೇರ
ಹಾಗೂ
ಪರೋಕ್ಷ
ತೆರಿಗೆಯಲ್ಲಿ
ಹೆಚ್ಚಿನ
ಬದಲಾವಣೆ
ನಿರೀಕ್ಷೆಯಿಲ್ಲ