ಸ್ವಾಮಿನಿಷ್ಠೆಯ ಪ್ರತೀಕ ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ
ಚೆನ್ನೈ, ಸೆ.29: ತಮಿಳುನಾಡಿನ 'ಅಮ್ಮ' ಜಯಲಲಿತಾ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾದ ಮೇಲೆ ಎಐಎಡಿಎಂಕೆ ಪಕ್ಷಕ್ಕೆ ದಿಕ್ಕು ತೋಚದಂತಾಗಿದೆ.. ಸ್ವಾಮಿನಿಷ್ಠೆ ಪಾಲಕರಾಗಿರುವ ಪನ್ನೀರ್ ಸೆಲ್ವಂ ಅವರು ಸಹಜವಾಗೇ ಸಿಎಂ ಸ್ಥಾನಕ್ಕೆ ಆಯ್ಕೆಯಾದರು. ಸೋಮವಾರ ಕಣ್ಣೀರಿಡುತ್ತಾ ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸೆಲ್ವಂರಂತೆ ಕ್ಯಾಬಿನೆಟ್ ನ ಇತರೆ ಸದಸ್ಯರು ಕಣ್ಣೀರ ಕೋಡಿ ಹರಿಸಿದರು.
ವರಹಾ ನದಿ ತೀರದಲ್ಲಿ ತೋಟ, ಗದ್ದೆ, ಚಹಾ ಅಂಗಡಿ ಎಂದು ಹಳ್ಳಿಯಲ್ಲೇ ಉಳಿದಿದ್ದ ಓ ಪನ್ನೀರ್ ಸೆಲ್ವಂರನ್ನು ಜಯಲಲಿತಾ ಅವರು ಚೆನ್ನೈಗೆ ಕರೆಸಿಕೊಂಡು ಅಧಿಕಾರ ನೀಡಿದರು. ಆದರೆ ಉನ್ನತ ಅಧಿಕಾರ ಪಡೆದರೂ ಅಮ್ಮನ ಆಜ್ಞೆ ಮೀರದೆ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಸೆಲ್ವಂ ಸಲಾಂ ಹೊಡೆಯಲಾರಂಭಿಸಿದರು. ಇದರ ಪ್ರತಿಫಲ 2001ರಲ್ಲಿ ಸಿಕ್ಕಿತು.
ಜಯಾ ಅವರು ತಾನ್ಸಿ ಭೂ ಹಗರಣ ಕೇಸಿನಲ್ಲಿ ಜೈಲು ಸೇರಿದರು. ಹಿರಿತನವನ್ನು ಲೆಕ್ಕಿಸಿದೆ ಸೆಲ್ವಂ ಅವರನ್ನು ಜಯಾ ಅವರು ಸಿಎಂ ಮಾಡಿದರು.ಈಗ ಎರಡನೇ ಬಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈಗ ಚೆನ್ನೈನಿಂದ ಹೊರಟಿರುವ ಸೆಲ್ವಂ ಹಾಗೂ ಅವರ ಕ್ಯಾಬಿನೆಟ್ ಸದಸ್ಯರು ಬೆಂಗಳೂರಿಗೆ ಆಗಮಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಮ್ಮನ ಪಾದರವಿಂದಕ್ಕೆ ಎರಗಲಿದ್ದಾರೆ.
ಸೆಲ್ವಂ ಅವರ ರಾಜಕೀಯ ಜೀವನದ ಸಂಕ್ಷಿಪ್ತ ವಿವರ ಇಲ್ಲಿದೆ:
* 1951ರ ಜನವರಿ 14ರಂದು ಜನಿಸಿದ ಓ ಪನ್ನೀರ್ ಸೆಲ್ವಂ ಅವರನ್ನು ಓಪಿಎಸ್ ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ.
* ಬಿ.ಎ ತನಕ ವ್ಯಾಸಂಗ ಮಾಡಿರುವ ಓಪಿಎಸ್ ಅವರ ಪತ್ನಿ ಹೆಸರು ವಿಜಯಲಕ್ಷ್ಮಿ. ಓಪಿಎಸ್ ದಂಪತಿ ಮೂವರು ಮಕ್ಕಳು.
* ಓಪಿಎಸ್ ಅವರ ರಾಜಕೀಯ ಜೀವನ ಆರಂಭವಾಗಿದ್ದು 1996ರ ನಂತರ, ಥೇಣಿ ಜಿಲ್ಲೆಯ ಮ್ಯಾಂಗೋ ಸಿಟಿ ಎಂದೇ ಖ್ಯಾತಿಯಾಗಿರುವ ಪೆರಿಯಾಕುಲಂ ಮುನ್ಸಿಪಾಲಿಟಿಯ ಚೇರ್ಮನ್ ಆಗಿ ಮೊದಲಿಗೆ ಆಯ್ಕೆಯಾದರು.
* ರಾಜಕೀಯ ಪ್ರವೇಶಕ್ಕೂ ಮುನ್ನ ಕೃಷಿಕ, ಚಹಾ ಅಂಗಡಿ ಇಟ್ಟುಕೊಂಡಿದ್ದ ಪನ್ನೀರ್ ಸೆಲ್ವಂ ಈಗಲೂ ಮೂಲ ವೃತ್ತಿ ಮರೆತಿಲ್ಲ.
* 2001ರಲ್ಲಿ ಪೆರಿಯಾಕುಲಂ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ, ಲೋಕೋಪಯೋಗಿ ಸಚಿವರಾಗಿ ಜಯಾ ಸಂಪುಟದಲ್ಲಿ ಸ್ಥಾನ.
* 2001ರಲ್ಲೇ ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಅವರು ಜೈಲುಪಲಾದ ಹಿನ್ನೆಲೆಯಲ್ಲಿ ಓಪಿಎಸ್ ಅವರಿಗೆ ಸಿಎಂ ಆಗುವ ಯೋಗ. ಆರು ತಿಂಗಳು ಅಧಿಕಾರ ನಡೆಸಿದರು.
* ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರು ಕೂರುತ್ತಿದ್ದ ಕುರ್ಚಿಯಲ್ಲಿ ಕೂರಲಿಲ್ಲ. ಸರ್ಕಾರಿ ಕಡತಗಳಿಗೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದರು. ಅಮ್ಮನ ಸಲಹೆ ಇಲ್ಲದೆ ಒಂದಡಿ ಮುಂದಿಡುತ್ತಿರಲಿಲ್ಲ.
* 2002ರ ಮಾರ್ಚ್ ನಲ್ಲಿ ಪನ್ನೀರ್ ಸೆಲ್ವಂ ಅವರು ಸಂತೋಷದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಅವರು ದೋಷಮುಕ್ತರಾಗಿದ್ದರು.
* ಜಯಲಲಿತಾ ಅವರು ಅಧಿಕಾರ ವಹಿಸಿಕೊಂಡ ಮೇಲೆ ಮತ್ತೊಮ್ಮೆ ಲೋಕೋಪಯೋಗಿ ಸಚಿವರಾಗಿ ಪೆನ್ನಿರ್ ಸೆಲ್ವಂ ಮುಂದುವರೆದರು.
* 2006ರ ಮೇ ತಿಂಗಳಿನಲ್ಲಿ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ, ವಿಪಕ್ಷ ನಾಯಕರಾಗಿ ಅಸೆಂಬ್ಲಿಯಲ್ಲಿ ಎರಡು ವಾರಗಳ ಕಾಣಿಸಿಕೊಂಡರು.
* 2011ರಿಂದ ಜಯಲಲಿತಾ ಕ್ಯಾಬಿನೆಟ್ ನಲ್ಲಿ ವಿತ್ತ ಸಚಿವರಾಗಿ ಮಾದರಿ ಬಜೆಟ್ ಮಂಡಿಸಿದ್ದಾರೆ.
* 2014ರ ಸೆ.29ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.