ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ಶಶಿ ತರೂರ್
ನವದೆಹಲಿ, ಜೂನ್ 4: ಲೋಕಸಭಾ ಚುನಾವಣೆ ವೇಳೆ ಹಾವುಮುಂಗಿಸಿಯಂತೆ ಕಿತ್ತಾಡುತ್ತಿದ್ದ ಮಂದಿ ಫಲಿತಾಂಶಗಳು ಹೊರಬೀಳುತ್ತಿದ್ದಂತೆ ಯಾರ ಯಾರ ಬಂಡವಾಳ ಏನೆಂಬುದು ಬಟಾಬಯಲಾಗಿದ್ದು, ಅದನ್ನು ಅನುಸರಿಸಿ ರಾಜಕಾರಣಿಗಳ ಮನಸ್ಥಿತಿಯೂ ಬದಲಾದಂತಿದೆ.
ರಾಜಕೀಯದಲ್ಲಿ ಏಕಾಂಗಿ ಹೋರಾಟ, ಯಶಸ್ಸಿಗೆ ಹೊಸ ಭಾಷ್ಯ ಬರೆದಿರುವ ನೂತನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಹಾಡಿಹೊಗಳಿದ್ದಾರೆ.
ಜನರಲ್ಲಿ ಮನೆ ಮಾಡಿದ್ದ ಸಂಶಯ ಅನುಮಾನಗಳನ್ನು ಹೋಗಲಾಡಿಸಿ, ನಕಾರಾತ್ಮಕ ಭಾವನೆಯನ್ನು ದೂರಮಾಡುತ್ತಾ, ಗುಜರಾತಿನ ಅಭಿವೃದ್ಧಿಯನ್ನು ಬೊಟ್ಟು ಮಾಡಿ, ತಮ್ಮನ್ನು ತಾವೇ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಿಕೊಳ್ಳುತ್ತಾ ಮುನ್ನುಗ್ಗಿದ ನರೇಂದ್ರ ಮೋದಿ ಮತ್ತು ಅವರ ಪಕ್ಷ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿತು ಎಂದು ಸಂಸದ ಶಶಿ ತರೂರ್ ಬಣ್ಣಿಸಿದ್ದಾರೆ.
Modi 2.0 ಬ್ರ್ಯಾಂಡ್ ಅನ್ನು ಮೆಚ್ಚಿ ಶಶಿ ತರೂರ್ ಅವರು 'ಹಫ್ಫಿಂಗ್ಟನ್ ಪೋಸ್ಟ್' ನಲ್ಲಿ ಸುದೀರ್ಘವಾದ ಲೇಖನ ಬರೆದಿದ್ದಾರೆ. ಚುನಾವಣೆ ಸಮಯದಲ್ಲಿ ಎಲ್ಲ ವಿರೋಧಿಗಳಂತೆ ಶಶಿ ಸಹ ಮೋದಿಯನ್ನು ತೀವ್ರವಾಗಿ ಲೇವಡಿ ಮಾಡುತ್ತಿದ್ದರು.
ಇದೀಗ, 'ಮೋದಿ ಚುನಾವಣಾ ತಯಾರಿ ಭರ್ಜರಿಯಾಗಿತ್ತು. ಅದ್ಭುತವಾಗಿ ಸಂಘಟನೆಯಾಗಿತ್ತು. ಮೋದಿ ಮತ್ತು ಬಿಜೆಪಿ ಹಿಂದುತ್ವವನ್ನು ಪಕ್ಕಕ್ಕಿಟ್ಟು ಮುನ್ನುಗ್ಗಿದರು' ಎಂದು ಶಶಿ ತರೂರ್ ವರ್ಣಿಸಿದ್ದಾರೆ. (ಶಶಿ ತರೂರ್ ಲೇಖನಕ್ಕೆ ಇಲ್ಲಿನ ಕ್ಲಿಕ್ಕಿಸಿ)
ಇಷ್ಟೆಲ್ಲಾ ಜಯ ಸಾಧಿಸಿದ ನಂತರ ಎಲ್ಲರೂ ಮಾಡುವಂತೆ ಮೋದಿ ಮತ್ತು ಅವರ ಪಾರ್ಟಿ ವಿಜಯೋತ್ಸವದಲ್ಲಿ ಮುಳುಗಲಿಲ್ಲ. ಪ್ರಧಾನಿ ಮೋದಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ನಾನು ತಿರುವನಂತಪುರ ಕ್ಷೇತ್ರದಿಂದ ಜಯ ಸಾಧಿಸುತ್ತಿದ್ದಂತೆ ಸ್ವತಃ ಮೋದಿ ಅವರೇ ನನ್ನನ್ನು ಅಭಿನಂದಿಸಿದರು. ತಾನು ಎಲ್ಲ ಭಾರತೀಯರಿಗೂ ಪ್ರಧಾನಿಯಾಗಿದ್ದಾನೆ; ನನಗೆ ಮತ ಹಾಕದಿರುವ ಜನರಿಗೂ ನಾನು ಪ್ರಧಾನಿ ಎಂಬುದನ್ನು ಮರೆಯಬಾರದು ಎಂದು ಮೋದಿ ಹೇಳಿದರು. ಅದು ಆತನ ದೊಡ್ಡ ಗುಣ ಎಂದು ಶಶಿ ಕೊಂಡಾಡಿದ್ದಾರೆ.