ಮುಂದುವರಿದ ಎಚ್ ಡಿ ಕುಮಾರಸ್ವಾಮಿ ಕಣ್ಣೀರಧಾರೆ
ಬೆಂಗಳೂರು, ಮೇ 10-ಚುನಾವಣೆಗೆ ಮುನ್ನ ಮತದಾರನ ಎದುರು ಕಣ್ಣೀರು ಹಾಕುವುದು ಕೆಲ ರಾಜಕಾರಣಿಗಳಿಗೆ ಒಲಿದುಬಂದ ವಿದ್ಯೆ. ಆದರೆ ಮತದಾನ ಮುಗಿದು ಫಲಿತಾಂಶ ಹೊರಬಿದ್ದನಂತರವೂ ಅಳುವಿನಾಟ ಮುಂದುವರಿದರೆ ಏನನ್ನೋಣ.
ಚುನಾವಣೆಗೆ ಮೊದಲು ಕಣ್ಣೀರು ಹಾಕಿದವರು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು. ಬಳಿಕ, ಯಥಾ ಪಿತಾ ತಥಾ ಸುತಾ ಎಂಬಂತೆ ಅಪ್ಪನನ್ನು ನೋಡಿ ಪುತ್ರ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದರು.
ಇವೆರಡನ್ನೂ ನೆನೆದು ದೇವೇಗೌಡರ ಸೊಸೆ, ಕುಮಾರಸ್ವಾಮಿ ಅವರ ಪತ್ನಿ, ಚನ್ನಪಟ್ಟಣದ ಜೆಡಿಎಸ್ ಶಾಸಕ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರೂ ಕಣ್ಣೀರು ಹಾಕಿ, ಮತದಾರ ತೋಯ್ದುತೊಪ್ಪೆಯಾಗುವಂತೆ ಮಾಡಿದರು.
ಆದರೆ ಈ ಕಣ್ಣೀರಧಾರೆಗಳು ನಿಷ್ಫಲವಾಗಿದ್ದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿತ್ತು. ಮತ್ತು ಎಚ್ ಡಿ ಕುಮಾರಸ್ವಾಮಿ ಕಣ್ಣೀರಧಾರೆ ಮುಂದುವರಿಸುವುದಕ್ಕೆ ಅದೇ ಕಾರಣವೂ ಆಯಿತು.
ಪಕ್ಷದ ಸಾಧನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಅದನ್ನು ಸುದ್ದಿಗೋಷ್ಠಿಯಲ್ಲಿ ಹೊರಹಾಕಲು ಮುಂದಾದ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಗದ್ಗದಿರತಾಗಿ ಕಣ್ಣೀರು ಸುರಿಸಿದರು. ಪಕ್ಷದ ಕಳಪೆ ಪ್ರದರ್ಶನದ ನೆನಪಿಸಿಕೊಂಡು ಕಣ್ಣೀರು ಹಾಕಿದರು. ಅತ್ತ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕಚೇರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದ ಸಂದರ್ಭದಲ್ಲೇ ಕುಮಾರಸ್ವಾಮಿ ಅವರು ಕಣ್ಣಿರು ಹಾಕಿದ್ದು ಕಾಕತಾಳೀಯವಾಗಿತ್ತು.
ಸೋತ ನೆಪ ಹೇಳಿ ಕೈಕಟ್ಟಿಕೊಂಡು ಕುಳಿತುಕೊಳ್ಳದೆ, ಆತ್ಮಸ್ಥೈರ್ಯದಿಂದ ಪಕ್ಷವನ್ನು ಸಂಘಟಿಸಲು ತೀರ್ಮಾನಿಸಿದ್ದು ಎಲ್ಲರಿಗೂ ಜವಾಬ್ದಾರಿ ನೀಡಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕಾವಲು ನಾಯಿಯಂತೆ ಕಾರ್ಯ ನಿರ್ವಹಿಸುವುದಾಗಿ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ಆದರೆ ಎಚ್ ಡಿ ಕುಮಾರಸ್ವಾಮಿ ಅವರು ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇನ್ನೂ 25 ಸ್ಥಾನ ಗಳಿಸಬಹುದಿತ್ತು ಎಂದು ಹೇಳಿದ್ದು ಇಂಟರೆಸ್ಟಿಂಗ್ ಆಗಿತ್ತು. ಅಲ್ಲಿಗೆ ಈಗಾಗಲೇ ಗೆದ್ದಿರುವ 40 ಸ್ಥಾನಗಳ ಜತೆಗೆ ಈ 25ನ್ನೂ ಸೇರಿಸಿದರೆ ಒಟ್ಟು 65 ಸ್ಥಾನಗಳಾಗುತ್ತವೆ. ಅಲ್ಲಿಗೆ ಜೆಡಿಎಸ್ ನಿರೀಕ್ಷಿಸಿದ್ದು ಕೇವಲ 65 ಸ್ಥಾನಗಳಷ್ಟೇನಾ? ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತನನ್ನು ಗೊಂದಲದಲ್ಲಿ ತಳ್ಳುವುದು ಖಚಿತ.
ಇದಕ್ಕೆ ಕುಮಾರಸ್ವಾಮಿ ಅವರು ನೀಡಿದ ಕಾರಣಗಳೂ ಇಂಟರೆಸ್ಟಿಂಗ್ ಆಗಿವೆ: ನಮ್ಮದೇ ಪಕ್ಷದ ಅನೇಕ ಕಾರ್ಯಕರ್ತರು ಬಂಡಾಯವೆದ್ದಿದ್ದು, ಅಭ್ಯರ್ಥಿಗಳು ಎಚ್ಚೆತ್ತು ಕೆಲಸ ಮಾಡದಿರುವುದರಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಗದ್ಗದಿತರಾದರು.
ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ದಿ ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿ ಕೆಲಸ ಮಾಡಿದ್ದರು. ಈಗಲೂ ಅಷ್ಟೇ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಆಳುವ ಪಕ್ಷ ಕೆಲಸ ಮಾಡಿದರೆ ಪ್ರತಿಪಕ್ಷದ ನಾಯಕನಾಗಿ ಸಹಕಾರ ನೀಡುವುದಾಗಿ ಕುಮಾರಸ್ವಾಮಿ ವಾಗ್ದಾನ ನೀಡಿದರು.
ಆಗಿನ ಅವರ ಕಾರ್ಯವೈಖರಿ ಈಗ ನಮಗೆ ದಾರಿ ದೀಪವಾಗಲಿದೆ. ಗೋಪಾಲಗೌಡ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಿದ್ಧರಾಮಯ್ಯ ಮೊದಲಾದವರು ವಿರೋಧ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ ಎಂದರು.
ಸೇಡಿನ ರಾಜಕಾರಣ ಮಾಡಿದರೆ ಸಹಿಸುವುದಿಲ್ಲ. ಹಿರಿಯರು ಹಾಕಿಕೊಟ್ಟಿರು ಮೇಲ್ಪಂಕ್ತಿ, ಮಾರ್ಗದರ್ಶನ, ಘನತೆಯಡಿಯಲ್ಲಿ ಕೆಲಸ ಮಾಡಲಾಗುವುದು. ಶೇಕಡವಾರು ಮತದಲ್ಲಿ ಜೆಡಿಎಸ್ 2ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಶೇ. 1ರಷ್ಟು ಹೆಚ್ಚು ಮತ ಪಡೆದಿದ್ದೇವೆ ಎಂದೂ ಅವರು ತಿಳಿಸಿದರು. [ಗಳಗಳನೆ ಅಳುವ ಮುಖ್ಯಮಂತ್ರಿಗಳು]