ಬೆಂಗಳೂರು,ಆ.1: ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ವಿಕಾಸ್ ಗೌಡಗೆ 25 ಲಕ್ಷ ಮತ್ತು ಶೂಟಿಂಗ್ನಲ್ಲಿ ಬೆಳ್ಳಿ ಪದಕಗಳಿಸಿದ ಪ್ರಕಾಶ್ ನಂಜಪ್ಪ ಅವರಿಗೆ 15 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.
ಕ್ರೀಡಾ ಕ್ಷೇತ್ರದಲ್ಲಿ ಮಹಾನ್ ಸಾಧನೆಗೈದ ಇವರಿಗೆ ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಕಾಸ್ ಗೌಡ ಮತ್ತು ಪ್ರಕಾಶ್ ನಂಜಪ್ಪ ಅವರಿಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಿ ಬಹುಮಾನ ನೀಡಲಿದ್ದಾರೆ ಎಂದು ಅಭಯ್ಚಂದ್ರ ಜೈನ್ ಹೇಳಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯದ ಕ್ರೀಡಾಪಟುಗಳು ಪದಕಗಳಿಸಿದ್ದಕ್ಕೆ ರಾಜ್ಯ ಸರ್ಕಾರಗಳು ಬಹುಮಾನ ಪ್ರಕಟಿಸಿದ್ದರೂ, ಕರ್ನಾಟಕ ಸರ್ಕಾರ ಇನ್ನೂ ಬಹುಮಾನ ಘೋಷಣೆ ಮಾಡದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಪ್ರತಿಯೊಬ್ಬ ತಮಿಳುನಾಡು ಕ್ರೀಡಾಪಟುಗಳಿಗೆ 50 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.