ಹೈದ್ರಾಬಾದ್,ಸೆ.19: ಚಾಂಪಿಯನ್ಸ್ ಲೀಗ್ ಟಿ20 ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋಲು ಕಂಡಿದ್ದು ನಿರ್ಭಾವುಕ ಮುಖದ ಧೋನಿಗೂ ಉರಿ ಉಂಟು ಮಾಡಿತ್ತಂತೆ. ಪಂದ್ಯದ ನಂತರ ನೆಚ್ಚಿನ ಬಿರಿಯಾನಿ ತಿನ್ನಲು ಚೆನೈ ತಂಡದೊಡನೆ ಹೋಟೆಲಿಗೆ ಬಂದ ಧೋನಿಗೆ ಮತ್ತೊಂದು ಶಾಕ್ ಕಾದಿತ್ತು. ಫೈವ್ ಸ್ಟಾರ್ ಹೋಟೆಲಿನಲ್ಲಿ ಹೈದರಾಬಾದಿನ ಫೇಮಸ್ ಬಿರಿಯಾನಿ ತಿನ್ನಲು ಬಿಡಲಿಲ್ಲವಂತೆ.
ಇದರಿಂದ ಸಿಟ್ಟಿಗೆದ್ದ ಧೋನಿ ಒಂದು ಬಿರಿಯಾನಿಗೊಸ್ಕರ ತಮ್ಮ ತಂಡವನ್ನು ಫೈವ್ ಸ್ಟಾರ್ ಹೋಟೆಲಿನಿಂದ ನಗರದ ಹೊರ ವಲಯದ ತಾಜ್ ಕೃಷ್ಣ ಹೊಟೇಲ್ಗೆ ಕರೆದೊಯ್ದರಂತೆ. ಬಿರಿಯಾನಿಯಾಗಿ ಚೆನ್ನೈ ತಂಡ ಹೋಟೆಲಿನಿಂದ ಹೋಟೆಲಿಗೆ ಶಿಫ್ಟ್ ಆದ ಸುದ್ದಿಯನ್ನು ಮುಂಬೈ ಮಿರರ್ ಮೊದಲಿಗೆ ಪ್ರಕಟಿಸಿದೆ.
ಧೋನಿ ಅವರು ಬಿರಿಯಾನಿ ಸಿಗದ ಕಾರಣ ಸಿಟ್ಟಾಗಿ ಹೋಟೆಲ್ ಗ್ರ್ಯಾಂಡ್ ಕಾಕಾತಿಯಾದಿಂದ ನಗರದ ಹೊರವಲಯಕ್ಕೆ ತಂಡವನ್ನು ಕರೆದೊಯ್ದರಂತೆ. ಟೀಂ ಇಂಡಿಯಾದ ಆಟಗಾರ ಅಂಬಟಿ ರಾಯುಡು ಅವರು ತಮ್ಮ ಮನೆಯಿಂದ ವಿಶೇಷವಾಗಿ ಬಿರಿಯಾನಿ ತಯಾರಿಸಿ ಧೋನಿ ಅವರಿದ್ದ ಹೋಟೆಲಿಗೆ ಕಳಿಸಿದ್ದಾರೆ. [ಸಿಎಲ್ಟಿ20ವೇಳಾಪಟ್ಟಿ]
ಆದರೆ, ಧೋನಿಗಾಗಿ ಹೋಟೆಲ್ ನವರು ನಿಯಮ ಮೀರಿ ಮನೆ ಬಿರಿಯಾನಿಯನ್ನು ನಿಮ್ಮ ನಿಮ್ಮ ರೂಮಿನಲ್ಲಿ ತಿಂದುಕೊಳ್ಳಿ ಎಂದು ಧೋನಿಗೆ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಧೋನಿ ಬೋರ್ಡ್ ರೂಮಿನಲ್ಲೇ ನಾನು ಬಿರಿಯಾನಿ ತಿನ್ನಬೇಕು ಎಂದು ಹಠ ಹಿಡಿದಿದ್ದಾರೆ. ಹೋಟೆಲ್ ನವರು ಇದಕ್ಕೆ ಒಪ್ಪದ ಕಾರಣ ತಮ್ಮ ತಂಡದ ಇತರೆ ಸದಸ್ಯರನ್ನು ಕರೆದುಕೊಂಡು ಮತ್ತೊಂದು ಹೋಟೆಲ್ ಗೆ ಶಿಫ್ಟ್ ಆಗಿದ್ದಾರೆ.
ತಮಾಷೆ ಎಂದರೆ, ಚೆನ್ನೈ ತಂಡ ಶಿಫ್ಟ್ ಆದ ಬೆನ್ನಲ್ಲೇ ಬಿಸಿಸಿಐ ಅಧಿಕಾರಿಗಳು ಕೂಡಾ ಧೋನಿ ಇದ್ದ ತಾಜ್ ಕೃಷ್ಣಗೆ ಬಂದಿಳಿದಿದ್ದಾರೆ. ಹೋಟೆಲ್ ಕೃಷ್ಣದಲ್ಲಿ ಬಿರಿಯಾನಿ ತಿಂದು ತೇಗಿ ಗಡದ್ದಾಗಿ ನಿದ್ದೆ ಮಾಡಿದ ಧೋನಿ ಅವರ ತಂಡ ನಂತರ ಬೆಂಗಳೂರಿಗೆ ಬಂದಿಳಿದಿದೆ. ಚೆನ್ನೈನ ಮುಂದಿನ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿ ಧೋನಿಗೆ ಇಲ್ಲಿನ ಬಿಸಿಬೇಳೆ ಬಾತ್ ಬೇಕು ಎನಿಸಿದರೆ ನೀಡುವುದಕ್ಕೆ ಸ್ಥಳೀಯ ಆಟಗಾರರು ಅವರ ಸಮೀಪವಂತೂ ಇಲ್ಲ.