ಮುಂಬೈ, ಆ.19: ಇಂಗ್ಲೆಂಡ್ ಪ್ರವಾಸ ನಿರತ ಟೀಂ ಇಂಡಿಯಾಕ್ಕೆ ಹೊಸ ಬಾಸ್ ನೇಮಕಗೊಂಡಿದ್ದಾರೆ. ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಅವರನ್ನು ಭಾರತ ಕ್ರಿಕೆಟ್ ತಂಡದ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಣೆ ಹೊರಡಿಸಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಸೋತಿರುವ ಭಾರತ ತಂಡಕ್ಕೆ ರವಿಶಾಸ್ತ್ರಿ ಹೊಸ ಬಾಸ್ ಆಗಲಿದ್ದಾರೆ. ಇಂಗ್ಲೆಂಡಿನಲ್ಲಿ ನಡೆಯಲಿರುವ ಏಕದಿನ ಸರಣಿಯಿಂದಲೇ ಶಾಸ್ತ್ರಿ ಅವರ ಹೊಸ ಅಧಿಕಾರ ಅವಧಿ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ.
ಟೀಂ ಇಂಡಿಯಾದ ಹಾಲಿ ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಗಳಾದ ಜೋ ಡಾವೇಸ್, ಟ್ರೆವರ್ ಪೆನ್ನಿ ಅವರಿಗೆ ದೀರ್ಘ ರಜೆ ಮಂಜೂರು ಮಾಡಲಾಗಿದೆ. ಇವರ ಜಾಗಕ್ಕೆ ಮಾಜಿ ಕ್ರಿಕೆಟರ್ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಅವರನ್ನು ನೇಮಿಸಲಾಗಿದೆ. ಆರ್ ಶ್ರೀಧರ್ ಅವರು ನೂತನ ಫೀಲ್ಡಿಂಗ್ ಕೋಚ್ ಆಗಲಿದ್ದಾರೆ. ಈ ಹಿಂದೆ 2007ರಲ್ಲಿ ಬಾಂಗ್ಲಾದೇಶ ಪ್ರವಾಸ ಹೊರಟ ಭಾರತ ತಂಡಕ್ಕೆ ರವಿಶಾಸ್ತ್ರಿ ಅವರು ಟೀಂ ಮ್ಯಾನೇಜರ್ ಆಗಿದ್ದರು.[ಧೋನಿ ಹುಡ್ಗರು 'ಕಟುಕನ ಮುಂದೆ ಕುರಿಯಂತೆ']
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ತನ್ನ ತಂಡಕ್ಕೆ ಪ್ರಮುಖ ಸರ್ಜರಿ ಮಾಡುತ್ತಿದೆ. ಅದರೆ, ಟೀಂ ಇಂಡಿಯಾ ನಾಯಕತ್ವ ಬದಲಾವಣೆ ಕುರಿತು ಬಿಸಿಸಿಐ ತುಟಿ ಬಿಚ್ಚಿಲ್ಲ. ಮಾಜಿ ಕ್ರಿಕೆಟರ್ ಗಳು ಮಾತ್ರ ಎಂಎಸ್ ಧೋನಿ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸ ನಿರತ ಟೀಂ ಇಂಡಿಯಾ ಐದು ಏಕದಿನ ಪಂದ್ಯಗಳು ಹಾಗೂ ಒಂದು ಟಿ20 ಪಂದ್ಯವನ್ನು ಆಡಲಿದ್ದು, ಆ.25 ರಿಂದ ಸರಣಿ ಆರಂಭವಾಗಲಿದೆ. ಆದರೆ, ಡಂಕನ್ ಫ್ಲೆಚರ್ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಅವರು ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದು, ರವಿಶಾಸ್ತ್ರಿ ಅವರು ಏಕದಿನ ಕ್ರಿಕೆಟ್ ಸರಣಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.