ಕಾರ್ಡಿಫ್, ಆ.27: ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ವಿಜಯೀತ್ಸವ ಆಚರಿಸಿದೆ. ಸುರೇಶ್ ರೈನಾ ಶತಕ, ಜಡೇಜ ಬೌಲಿಂಗ್ ನೆರವಿನಿಂದ ಆಂಗ್ಲರ ವಿರುದ್ದಹ 133 ರನ್ ಗಳ ಅಮೋಘ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿತ್ತು.
ಕಾರ್ಡಿಫ್ ನಲ್ಲಿ ನಡೆದ ಎರಡನೇ ಪಂದ್ಯಕ್ಕೂ ಮಳೆರಾಯ ಆಗಾಗ ಅಡ್ಡಿಪಡಿಸುತ್ತಿದ್ದ ಕೊನೆಗೆ ಇಂಗ್ಲೆಂಡ್ ಇನ್ನಿಂಗ್ಸ್ ಗೂ ತೊಂದರೆ ಕೊಟ್ಟ. ಮಳೆ ಬಂದ ಕಾರಣ ಡಕ್ ವರ್ತ್ ಲೂಯಿಸ್ ನಿಯಮದಂತೆ ಟಾರ್ಗೆಟ್ ಅನ್ನು 47 ಓವರ್ ಗಳಲ್ಲಿ 295 ರನ್ ಗಳಿಗೆ ನಿಗದಿಪಡಿಸಲಾಯಿತು. ಇಂಗ್ಲೆಂಡ್ ಮೊದಲ ವಿಕೆಟ್ಟಿಗೆ 54ರನ್ ಗಳ ಜೊತೆಯಾಟ ಕಂಡು ಉತ್ತಮ ಪ್ರದರ್ಶನ ನೀಡಿತು.
ಆದರೆ, ಮೊಹಮ್ಮದ್ ಶಮಿ ಆಲಿಸ್ಟರ್ ಕುಕ್ ವಿಕೆಟ್ ಉದುರಿಸಿದರು. ಮೂರು ಎಸೆತಗಳ ಬಳಿಕ ಇಯಾನ್ ಬೆಲ್ ಕೂಡ ಔಟಾದರು. ಭುವನೇಶ್ವರ್ ಕುಮಾರ್ ಜೋ ರೂಟ್ರನ್ನು ಪೆವಿಲಿಯನ್ ಗೆ ಕಳಿಸಿದರು.
ಅಲೆಕ್ಸ್ ಹೇಲ್ಸ್ ಮತ್ತು ಇಯಾನ್ ಮೊರ್ಗಾನ್ ಇಂಗ್ಲೆಂಡ್ ಗೆ ಆಸರೆಯಾದರೂ ಜಡೇಜಾ ಸ್ಪಿನ್ ಜಾದೂಗೆ 40ರನ್ಗಳಿಸಿದ್ದ ಹೇಲ್ಸ್ ಬಲಿಯದರು. ಜೋ ಬಟ್ಲರ್ ಹಾಗೂ 28 ರನ್ಗಳಿಸಿದ್ದ ಮೊರ್ಗಾನ್ ಅಶ್ವಿನ್ ಮೋಡಿಗೆ ಬಲಿಯಾದರು.
.
ಭಾರತದ ಇನ್ನಿಂಗ್ಸ್: ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಲಾಭ ಪಡೆದ ಭಾರತ ಇಂಗ್ಲೆಂಡಿಗೆ ಗೆಲ್ಲಲು 305 ರನ್ ಗಳ ಗುರಿ ನೀಡಿದೆ. ಮಧ್ಯಮ ಕ್ರಮಾಂಕದ ಆಟಗಾರ ಸುರೇಶ್ ರೈನಾ (100) ಅವರ ಆಕರ್ಷಕ ಶತಕದ ನೆರವಿನಿಂದ ಗೌರವಯುತ ಮೊತ್ತ ದಾಖಲಿಸಿದೆ.
ಭಾರತದ ಆರಂಭ ಉತ್ತಮವಾಗಿರಲಿಲ್ಲ. 110 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ತಂಡ ಸಂಕಷ್ಟ ಅನುಭವಿಸುತ್ತಿತ್ತು. ಎಡಗೈ ಬ್ಯಾಟ್ಸ್ಮನ್ 74 ಚೆಂಡುಗಳಲ್ಲಿ ಶತಕ ದಾಖಲಿಸಿ ಹೊಸ ಚೇತನ ತಂದರು. ರೈನಾ ಅವರು 12 ಬೌಂಡರಿ ಮತ್ತು 3 ಸಿಕ್ಸರ್ಗಳನ್ನು ಬಾರಿಸಿದರು.
ಶತಕ ದಾಖಲಿಸಿದೊಡನೆ ರೈನಾ (100) ಅವರು ವೋಕ್ಸ್ ಬೌಲಿಂಗ್ನಲ್ಲಿ ಆಂಡರ್ಸನ್ ಅವರಿಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. 2010ರಲ್ಲಿ ಶತಕ ಬಾರಿಸಿದ್ದ ರೈನಾ ಅಂತೂ ಲಯ ಕಂಡುಕೊಂಡಿರುವುದು ಭಾರತಕ್ಕೆ ಸಮಾಧಾನದ ಸಂಗತಿ.
ಉಳಿದಂತೆ ನಾಯಕ ಧೋನಿ 52, ರೋಹಿತ್ ಶರ್ಮ 52 ರನ್ ನೆರವಿನಿಂದ ಭಾರತ ಉತ್ತಮ ಮೊತ್ತ ತಲುಪಿತು, ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು.