ಸೇನೆ ಬೇಕೆನ್ನುವ ಬೋಪಯ್ಯ ರಾಜೀನಾಮೆ ನೀಡಲಿ
ಸ್ಪೀಕರ್ ಸ್ಥಾನವನ್ನು ಅಲಕಂರಿಸಲು ಬೋಪಯ್ಯ ಅವರು ಅನರ್ಹರು ಮತ್ತು ಆ ಸ್ಥಾನಕ್ಕೆ ಅವರು ಅಪವಾದವಾಗಿದ್ದಾರೆ. ವಿಶ್ವದಲ್ಲಿನ ಸೇನಾಡಳಿತವಿರುವ ಯಾವುದೇ ದೇಶ ನೋಡಿದರೂ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಇವರಿಗೆ ಗೊತ್ತಿಲ್ಲವೆ? ಈ ಹಿಂದೆ, ಅವರೇ ನೈತಿಕ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ.
ಯಾರದೋ ಒತ್ತಡಕ್ಕೆ ಮಣಿದು, ಸ್ವತಂತ್ರ ಶಾಸಕರನ್ನು ರಾತ್ರೋ ರಾತ್ರಿ ಅನರ್ಹಗೊಳಿಸಿದ ಇವರು, ಶಾಸಕ ವಿಶ್ವನಾಥ್ ಅವರ ಅಕ್ರಮ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಅನುಮತಿ ನೀಡಲು ಹಿಂದೆ ಮುಂದೆ ನೋಡುತ್ತಿರುವುದು ಭ್ರಷ್ಟಾಚಾರವಲ್ಲವೆ?
ಮೂವರು ಶಾಸಕರು, ವಿಧಾನ ಸಭೆಯಲ್ಲೇ ಕುಳಿತು ತಮ್ಮ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿರುವಾಗ, ಸೂಕ್ತ ಕ್ರಮ ಕೈಗೊಳ್ಳಬೇಕಾದ ಇವರು ಏನು ಮಾಡುತ್ತಿದ್ದರು? ಆ ತಕ್ಷಣವೇ ಪೋಲಿಸರಿಗೆ ತನಿಖೆ ಮಾಡಬೇಕೆಂದು ಆದೇಶಿಸಬಹುದಿತ್ತಲ್ಲವೇ? ಆ ಕೆಲಸವನ್ನು ಮಾಡದೆ, ಶಾಸನ ಸಭೆಯ ಸಮಿತಿ ರಚಿಸಿ, ಕೇವಲ ಎಚ್ಚರಿಕೆ ನೀಡಿ, ಪ್ರಕರಣವನ್ನು ಮುಚ್ಚಿಹಾಕಲಾಗಿದೆ.
ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನಿಸುವ ಇವರು, ಈ ತಮ್ಮ ಹೇಳಿಕೆಯಿಂದ ಜನರು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಬೀತುಪಡಿಸದಂತಾಗುತ್ತದೆ. ಆದ್ದರಿಂದ ತಕ್ಷಣವೇ ತಮ್ಮ ಶಾಸಕ ಸ್ಥಾನಕ್ಕೆ ಬೋಪಯ್ಯ ರಾಜಿನಾಮೆ ನೀಡಬೇಕು.
ಕೇವಲ ಸೇನೆ ಬಂದರೆ ಭ್ರಷ್ಟಾಚಾರ ಕೊನೆಗೊಳ್ಳುವುದಿಲ್ಲ, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಿರ್ಮಿಸಬೇಕು. ಲೋಕಾಯುಕ್ತರನ್ನು ನೇಮಿಸಿ ಮತ್ತು ಅವರಿಗೆ ಹೆಚ್ಚಿನ ಅಧಿಕಾರ ನೀಡಿ ಎಂದು ಜನತೆ ಆಗ್ರಹಿಸುತ್ತಿದ್ದಾರೆ. ಪೋಲಿಸರಿಗೆ ಅವರ ಕರ್ತವ್ಯದಲ್ಲಿ ಇತರರು ಮಧ್ಯಪ್ರವೇಶಿಸದಂತೆ ಅಗತ್ಯವಾಗಿ ಆಗಬೇಕಾಗಿರುವ ಪೋಲಿಸ್ ಸುಧಾರಣೆಗಳು ನೆನೆಗುದಿಗೆ ಬಿದ್ದಿವೆ. ಆದರೆ ಆ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಇವರು ಪ್ರಜಾಪ್ರಭುತ್ವದಲ್ಲಿನ ನಂಬಿಕೆಯನ್ನೇ ಅಲ್ಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.