ಅಕ್ಕ ವಿಶ್ವಕನ್ನಡ ಸಮ್ಮೇಳನಕ್ಕೆ ಕ್ಯಾಲಿಫ್ ಸಜ್ಜು.
ಸ್ಯಾನ್ ಹೋಸೆ, ಆ. 29: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಕ್ಯಾಲಿಫೋರ್ನಿಯಾಗೆ ಬಂದಿಳಿದಿದ್ದಾರೆ, ಈಗಾಗಲೇ ಅಮೆರಿಕಾ ದೇಶದ ಖಾಸಗಿ ಟೂರ್ ನಲ್ಲಿರುವ ಸಾರಿಗೆ ಸಚಿವ ಎಂ. ರಾಮಲಿಂಗಾರೆಡ್ಡಿ ಹಾಗೂ ಕೇಂದ್ರ ನಾಗರಿಕ ವಿಮಾನ ಖಾತೆ ಸಚಿವ ಸಿದ್ದೇಶ್ವರ್ ಅವರುಗಳು ಸಮ್ಮೇಳನಕ್ಕೆ ನಾಳೆ ಅಥವಾ ನಾಡಿದ್ದು ಬಂದು ಸೇರಿಕೊಳ್ಳುತ್ತಾರೆ.
ಸುಮಾರು ಮೂವತ್ತು ಎಂಎಲ್ಎ, ಎಂಎಲ್ಸಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಗುರುವಾರ ರಾತ್ರಿ ಅಥವಾ ಶುಕ್ರವಾರ ಮಧ್ಯಾನ್ಹದ ಫ್ಲೈಟ್ನಲ್ಲಿ ಬರುತ್ತಾರೆ. ಜನಪ್ರತಿನಿಧಿಗಳು ಮಾತ್ರವಲ್ಲದೆ ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಕರ್ನಾಟಕ ಗಣ್ಯರ ಸಮೂಹ ಅಕ್ಕ ಸಮ್ಮೇಳನವನ್ನು ಹುಡುಕಿಕೊಂಡು ಅಮೆರಿಕಾದ ಪಶ್ಚಿಮ ಕರಾವಳಿಯತ್ತ ಧಾವಿಸಿ ಬರುತ್ತಿದೆ. [ಅಮೆರಿಕ 'ಅಕ್ಕ' ನೋಡಲು ಹೊರಟ ಶಾಸಕರು]
ಶ್ರೀನಿವಾಸ್ ಕಪ್ಪಣ್ಣ ನೇತೃತ್ವದಲ್ಲಿ ರಾಜ್ಯ ಸರಕಾರ ಪ್ರಾಯೋಜಿತ 42 ಮಂದಿ ದಲಿತ ಕಲಾವಿದರ ತಂಡಕ್ಕೆ ವೀಸಾ ಸಿಕ್ಕಿದೆ. ಅವರೆಲ್ಲ ಬರ್ತಿದ್ದಾರೆ. ಇವರಲ್ಲದೆ ಸಾಹಿತ್ಯ, ಸಂಗೀತ, ಸಂಗೀತ ರೂಪಕ, ಯಕ್ಷಗಾನ ಹಾಗೂ ಲಲಿತಕಲೆಗಳನ್ನು ಸಾದರಪಡಿಸುವ ಹಲವಾರು ಕಲಾವಿದರೂ ಸೇರಿದಂತೆ ಕರ್ನಾಟಕದಿಂದ ಒಟ್ಟು 120 ಮಂದಿ ಬಂದಿದ್ದಾರೆ, ಕೆಲವರು ಇನ್ನೇನು ಬರಲಿದ್ದಾರೆ. ಅಂತೂ, ಭಾರತದಿಂದ ಹೊರಗಡೆ 2 ವರ್ಷಕ್ಕೊಮ್ಮೆ ಜರಗುವ ಕನ್ನಡ ಕಲರವಕ್ಕೆ ಜನಸಂದಣಿಯಾಗುತ್ತಿದೆ.[ಅಕ್ಕ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು]
ಶುಕ್ರವಾರದಿಂದ
ಇಲ್ಲಿ
ಆರಂಭವಾಗುವ
3
ದಿನಗಳ
ಸಮ್ಮೇಳನಕ್ಕೆ
ನಡೆದಿರುವ
ವ್ಯಾಪಕ
ಸಿದ್ಧತೆಗಳು
ಮತ್ತು
'ಸಾಧನೆ-ಸಂಭ್ರಮ-ಸಂಕಲ್ಪ'
ಧ್ಯೇಯವಾಕ್ಯದ
ಸಮ್ಮೇಳನದ
ಕಾರ್ಯಕ್ರಮಗಳ
ಸವಿಸ್ತಾರ
ವಿವರಗಳನ್ನು
ಸಮ್ಮೇಳನದ
ಆಯೋಜಕರು
ಗುರುವಾರ
ಸಂಜೆ
ಮಾಧ್ಯಮ
ಪ್ರತಿನಿಧಿಗಳಿಗೆ
ವಿವರಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮ್ಮೇಳನ ಸಂಚಾಲಕ ಸುರೇಶ್, ಪೂರ್ವ ಪ್ರಾಂತ್ಯಗಳಲ್ಲಿ ಮಾತ್ರ ನಡೆಯುತ್ತಿದ್ದ ಅಕ್ಕ ಸಮ್ಮೇಳನ ಪಶ್ಟಿಮ ಕರಾವಳಿ ತೀರಕ್ಕೆ ಬಂದುದಕ್ಕೆ ಹರ್ಷ ವ್ಯಕ್ತಪಡಿಸಿದರು. ಸ್ಥಳೀಯ ಕನ್ನಡ ಕೂಡ ಕೆಕೆಎನ್ಸಿ ಅಕ್ಕ ಸಹಯೋಗದೊಂದಿದೆ ಒಂದು ವರ್ಷದಿಂದ ಸಿದ್ಧತೆಗಳನ್ನು ಮಾಡಿಕೊಂಡು ಬಂದಿದೆ. ಕನ್ನಡ ಕೂಟದ 200 ಸ್ವಯಂಸೇವಕರ ತಂಡ ಹಗಲಿರಳೂ ಶ್ರಮಿಸಿದ್ದು ಸಾರ್ಥಕ ಭಾವವನ್ನು ಅಪ್ಪಿಕೊಳ್ಳುವ ಕ್ಷಣಗಳು ಇದೀಗ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.[ಅತಿಥಿಯಾಗಿ ಎಸ್ಎಲ್ ಭೈರಪ್ಪ 'ಯಾನ']
ಉತ್ತರ ಅಮೆರಿಕಾದ ವಿವಿಧ ರಾಜ್ಯಗಳಿಂದ ಈ ಕ್ಷಣದವರೆಗೆ 3600 ಕ್ಕೂ ಹೆಚ್ಚು ಮಂದಿ ಸಮ್ಮೇಳನಕ್ಕೆ ನೊಂದಾಯಿಸಿಕೊಂಡಿದ್ದಾರೆ. ದೀರ್ಘ ವಾರಾಂತ್ಯ ಮತ್ತು ಗಣೇಶ ಹಬ್ಬದ ಕಾರಣದಿಂದಾಗಿ 149 ಡಾಲರು ಬೆಲೆಯ ಒಂದು ದಿನದ ಪಾಸ್ ಗಳನ್ನು ಬಿಡುಗಡೆಮಾಡಲಾಗಿದೆ, ಅದಕ್ಕೂ ಸಾಕಷ್ಟು ಬೇಡಿಕೆ ವ್ಯಕ್ತವಾಗಿದ್ದು 4000 ಪ್ರತಿನಿಧಿಗಳಿಗೆ ಆದರಾತಿಥ್ಯ ಮಾಡಲು ನಾನಾ ಸಮಿತಿಗಳು ಸಜ್ಜಾಗಿವೆ ಎಂದು ಸುರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೆಕೆನ್ರಿ ಸಮ್ಮೇಳನ ಸಭಾಂಗಣದ ವಿಶಾಲ ಪ್ರಾಂಗಣಗಳಲ್ಲಿ ಅನಾವರಣಗೊಳ್ಳುವ ಮೂರು ದಿನದ ಸಮ್ಮೇಳನದ ಕಾರ್ಯಕಲಾಪಗಳ ಪುಸ್ತಿಕೆ "ಫಲಕ' ವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ಸಾಮೂಹಿಕ ಗಣೇಶ ಪೂಜೆಯಿಂದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಪೂಜಾ ಸಾಮಗ್ರಿ ಸಮೇತ ನೈಸರ್ಗಿಕ ಗಣೇಶ ವಿಗ್ರಹಗಳನ್ನು ಮೈಸೂರಿನ ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ ಪ್ರಾಯೋಜಿಸಿದೆ ಎಂದು ಸುರೇಶ್ ತಿಳಿಸಿದರು. [ಸಮ್ಮೇಳನಕ್ಕೊಂದು ಸುಂದರ ಅಪ್ಲಿಕೇಷನ್]
60 ಪುಟಗಳ event handbook 'ಫಲಕ'ದ ಪ್ರಕಾರ ಒಟ್ಟು 143 ಬಗೆಯ ಕಾರ್ಯಕ್ರಮಗಳು ಸಮ್ಮೇಳನಾಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಮಲ್ಲಿಗೆ, ಸಂಪಿಗೆ, ಕಮಲ ನಾಮಾಂಕಿತ ಸಭಾಂಗಣಗಳಲ್ಲಿ ಕನ್ನಡ ಮಾತು, ಕನ್ನಡ ಸಂಸ್ಕೃತಿ ಚಿಂತನೆ, ಕನ್ನಡ ಊಟ ಹದವಾಗಿ ಮೇಳವಿಸುತ್ತವೆ.
ಶನಿವಾರ ಬೆಳಗ್ಗೆ ನಡೆಯುವ 23 ಕನ್ನಡ ಕೂಟಗಳ ಸಾಂಸ್ಕೃತಿಕ ಮೆರವಣಿಗೆ ಸಮ್ಮೇಳನದ ಪ್ರಧಾನ ಆಕರ್ಷಣೆಗಳಲ್ಲೊಂದು. ಜತೆಗೆ ಕನ್ನಡ ಸಿನಿಮಾದ ನಂಬರ್ 1 ಸ್ಟಾರ್ ಪುನೀತ್ ರಾಜ್ ಕುಮಾರ್, ಸಾಹಿತ್ಯಲೋಕದ ತಾರೆ ಎಸ್ ಎಲ್ ಭೈರಪ್ಪ ಮತ್ತನೇಕರು ಸಾದರಪಡಿಸುವ ಕಾರ್ಯಕ್ರಮಗಳ ಸರಮಾಲೆಯನ್ನು ಆಯೋಜಕರು ವಿವರಿಸಿದರು.
ಸಮ್ಮೇಳನದ ಇನ್ನಿಬ್ಬರು ಸಂಚಾಲಕರಾದ ಬಿ. ರವಿಶಂಕರ್, ರಘು ಹಾಲೂರ್ ಮತ್ತು ಅಕ್ಕ ಅಧ್ಯಕ್ಷ ಡಾ. ಹಳೇಕೋಟೆ ವಿಶ್ವಾಮಿತ್ರ ಮತ್ತು ಅಕ್ಕ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರ್ ನಾಥ್ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನಯಾಗರಾ, ವಾಷಿಂಗ್ಟನ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕರ್ನಾಟಕದಿಂದ ಜನರು ಅಮೆರಿಕಾಗೆ ಬರುತ್ತಿದ್ದರು. ಈಗೀಗ ಅಕ್ಕ ಸಮ್ಮೇಳನ ನೋಡುವುದಕ್ಕೇಂತಲೇ ಅಮೆರಿಕಾಗೆ ಬರುವವರ ಸಂಖ್ಯೆ ವೃದ್ಧಿಸಿದೆ ಎಂದು ಅಮರ್ ನಾಥ್ ಗೌಡ ನುಡಿದರು.[ಊಟತಿಂಡಿ ಸಕ್ಸಸ್ ಆದ್ರೆ, ಸಮ್ಮೇಳನ ಸಕ್ಸಸ್!]