ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಕನ್ನಡಿಗರ ನಡಿಗೆ
ಸ್ಯಾನ್ ಫ್ರಾನ್ಸಿಸ್ಕೋ, ಆ. 20 : 8ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಕೇವಲ 9 ದಿನಗಳು ಮಾತ್ರ ಬಾಕಿ. ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ ಸಹಭಾಗಿತ್ವದಲ್ಲಿ ಸಿದ್ಧತೆಗಳು ಕೂಡ ಭರದಿಂದ ಸಾಗಿವೆ. ಈ ಸಮ್ಮೇಳನದ ಪೂರ್ವಭಾವಿ ಪ್ರಚಾರ ಕಾರ್ಯವನ್ನು ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಪಾದಯಾತ್ರೆ ಮಾಡುವ ಮುಖಾಂತರ ಆ.16ರಂದು ಕೈಗೊಳ್ಳಲಾಯಿತು.
ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಮತ್ತು ಪೆಸಿಫಿಕ್ ಸಮುದ್ರದ ನಡುವೆ 1937ರಲ್ಲಿ ನಿರ್ಮಿಸಲಾಗಿರುವ ಮೂರು ಮೈಲಿ ಉದ್ದವಿರುವ ಐತಿಹಾಸಿಕ ಗೋಲ್ಡನ್ ಬ್ರಿಜ್ ಮೇಲೆ ಕೈಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟ ಹಾರಿಸಿಕೊಂಡು ಕೆಕೆಎನ್ಸಿ ಸಂಸ್ಥೆಯ 150ಕ್ಕೂ ಹೆಚ್ಚು ಕನ್ನಡಿಗರು ಉತ್ಸಾಹದಿಂದ ವಿಶ್ವ ಕನ್ನಡ ಸಮ್ಮೇಳನದ ಪ್ರಚಾರಕಾರ್ಯ ನಡೆಸಿದರು.
ಹಳದಿ ಬಣ್ಣದ ಟಿಶರ್ಟ್ ತೊಟ್ಟಿದ್ದ ಕೆಕೆಎನ್ಸಿ ಕನ್ನಡಿಗರು ಸಂಸ್ಥೆ ಮತ್ತು ಅಕ್ಕ ಬ್ಯಾನರ್ ಹಿಡಿದುಕೊಂಡು ಕನ್ನಡದ ಘೋಷಣೆಗಳನ್ನು ಕೂಗುತ್ತ ಮೂರು ಮೈಲಿ ಉದ್ದವಿರುವ, ಆಧುನಿಕ ಜಗತ್ತಿನ ಅದ್ಭುತ ಎಂಬ ಖ್ಯಾತಿ ಗಳಿಸಿರುವ ಗೋಲ್ಡನ್ ಗೇಟ್ ಬ್ರಿಜ್ ಮೇಲೆ ಸಾಗಿ, ಒಗ್ಗಟ್ಟು ಪ್ರದರ್ಶಿಸಿದರು. ಚಿಕ್ಕಮಕ್ಕಳು ಕೂಡ ಕನ್ನಡದಲ್ಲಿ ಜೈಕಾರ ಹೇಳುತ್ತ ಸಾಗಿದರು.
ಈ ಪಾದಯಾತ್ರೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ - ಬೆಂಗಳೂರು ಸಿಸ್ಟರ್ ಸಿಟಿ ಸಮಿತಿಯ ಸಹ ಅಧ್ಯಕ್ಷ ಜೇಮ್ಸ್ ಹರ್ಲಿ, ಭಾರತೀಯ ರಾಯಭಾರಿ ಕಚೇರಿಯ ಎನ್ ಪಾರ್ಥಸಾರಧಿ, ಕೆಜೆ ಶ್ರೀನಿವಾಸ, ಅಕ್ಕ ಸಮ್ಮೇಳನ ಸಲಹಾ ಸಮಿತಿವತಿಯಿಂದ ಬಿ.ವಿ. ಜಗದೀಶ್ ಮತ್ತು ಅಲಮೇಲು ಅಯ್ಯಂಗಾರ್ ಭಾಗವಹಿಸಿದ್ದರು. [ದಲಿತ ಕಲಾವಿದರ ಅಮೆರಿಕ ಪ್ರವಾಸಕ್ಕೆ ಗ್ರೀನ್ ಸಿಗ್ನಲ್]
ಇವರಲ್ಲದೆ, ಅಕ್ಕ ಸಂಚಾಲಕ ಸುರೇಶ್ ಬಾಬು, ಸಹಸಂಚಾಲಕ ರಘು ಹರ್ಲೂರ, ಕೋಶಾಧಿಕಾರಿ ಸದಾನಂದ ಹೆಬ್ಬಾಳ್, ಕಾರ್ಯದರ್ಶಿ ಅರವಿಂದ್ ಚಿನ್ಯಾ, ಮಾರ್ಕೆಟಿಂಗ್ ಚೇರ್ಮನ್ ಕಿಶೋರ್ ರಾವ್, ಕಾರ್ಯಕ್ರಮ ನಿರ್ವಾಹಕ ರಾಘ ಮುದ್ದಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ರಾಜ್ ಬಣಕಾರ್ ಮತ್ತು ಪ್ರಚಾರ ಸಮಿತಿಯ ಇತರ ಸದಸ್ಯರು, ಕೆಕೆಎನ್ಸಿ ಅಧ್ಯಕ್ಷ ಮತ್ತು ಅಕ್ಕ ಸಹಕಾರ್ಯದರ್ಶಿ ಧನಂಜಯ ಕೆಂಗಯ್ಯ ಕೂಡ ಹಾಜರಿದ್ದರು.
ವಿಡಿಯೋ
:
8ನೇ
ಅಕ್ಕ
ಸಮ್ಮೇಳನ,
ಕ್ಯಾಲಿಫೋರ್ನಿಯಾ