ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿಮಾನ

By Staff
|
Google Oneindia Kannada News

Sukumar S. Raghuram
* ಸುಕುಮಾರ್ ಎಸ್. ರಘುರಾಮ್, ಬೇಏರಿಯಾ

ಗೋಪುರದ ನೆತ್ತಿಯನು ಮುತ್ತಿಡುವ ತವಕದಲಿ
ಒಟ್ಟಿನಲಿ ಗತ್ತಿನಲಿ ಹುಟ್ಟಿಬನ್ನಿ

ಚಕ್ರವ್ಯೂಹವ ಬಡಿದು ಸ್ವರ್ಣಕಮಲವ ಮೆರೆದು
ಕೇಸರಿಗೆ ಕೇಸರಿಯ ತೊಡಿಸಬನ್ನಿ

ಸಿಂಧುವಿನ ಬೆತ್ತಲಲಿ ಸರಸತಿಯ ಕತ್ತಲಲಿ
ಗಂಗೆ ಯಮುನೆಯ ಜೋಡಿ ಛಲದಿ ಬನ್ನಿ

ಗೋಪಿಯರ ರಕ್ಷಿಸಲು ಕಂಸರನು ಶಿಕ್ಷಿಸಲು
ಸದ್ದಿನಲಿ ಮತ್ತಿನಲಿ ಸಿಡಿದು ಬನ್ನಿ

ತಿಂಗಳಿನ ನೆನಪಿನಲಿ ಮಂಗಳನ ಕನಸಿನಲಿ
ಸಿಂಧೂರ ಸೇತುವನು ಕಟ್ಟಬನ್ನಿ

ಗಾಂಧಾರ ದೇಶವನು ಶಕುನಿಯರ ಕುಹಕವನು
ಕಿತ್ತೊಗೆವ ವೀರರನು ಬೆಳೆಸಬನ್ನಿ

ಇಂದಿರನ ಚಂದಿರನ ಸಮಸಮದಿ ನಡೆನಡೆದು
ಮೇನಕೆಯ ರೋಹಿಣಿಯ ಗೆದ್ದು ಬನ್ನಿ

ತೇಜಸ್ವಿ ರಸ ಹೀರಿ ಪಾಂಚಜನ್ಯವ ಮೀರಿ
ಅಭ್ಯುದಯದಮೃತವ ಕುಡಿಯಬನ್ನಿ

ಹಂಪೆ ಹಳೆಬೀಡಾದಿ ಸೋಮೇಶ್ವರದ ಗೋರಿ
ಮರುಹುಟ್ಟು ಪಡೆಯಲಿವೆ ದಿಟ್ಟ ಬನ್ನಿ

ಕೈಲಾಸ ಗಂಗೋತ್ರಿ ಮಥುರೆ ದ್ವಾರಕೆ ವಿಂಧ್ಯೆ
ಕಾವೇರಿಯರ ಸೊಬಗ ನೋಡಬನ್ನಿ

ಗುಡಿಗಳಿಗೆ ಗಡಿಗಳಿಗೆ ರಣಕಹಳೆ ಶೃಂಗಾರ
ಭೀಮಾರ್ಜುನರೆ ಮತ್ತೆ ಎದ್ದು ಬನ್ನಿ

ಸರಯುವಿನ ಸಿರಿಗಳಿಗೆ ಬೆಂಕಿ ತಟ್ಟುವ ಮೊದಲೆ
ರಾಮರಾಜ್ಯದ ವಿಜಯ ಸಾರಿ ಬನ್ನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X