ಚಿಕಾಗೋ ಕನ್ನಡ ಕೂಟದಲ್ಲಿ 'ಚೈತ್ರದ ಯುಗಾದಿ'
ಚಿಕಾಗೋ ವಿದಾರಣ್ಯ ಕನ್ನಡ ಕೂಟ (ವಿ.ಕೆ.ಕೆ) 42 ವರ್ಷಗಳ ಹಿಂದೆ ಸ್ಥಾಪಿತವಾಗಿ, ನಿರಂತರವಾಗಿ ಚಿಕಾಗೋ ವಲಯದ ಕನ್ನಡಿಗರ ಮನ, ಮನೆಗಳಲ್ಲಿ ಹಾಸು ಹೊಕ್ಕಾಗಿದೆ. ಕನ್ನಡ ಕೂಟದ ವತಿಯಿಂದ, ಈ ಬಾರಿಯ ಯುಗಾದಿ ಹಬ್ಬವನ್ನು 'ಚೈತ್ರದ ಯುಗಾದಿ' ಹೆಸರಿನಲ್ಲಿ, ಲೆಮಾಂಟ್ ನಗರದ ರಾಮ ದೇವಸ್ಥಾನದ ಸಭಾಂಗಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಆಚರಿಸಲಾಯಿತು.
ಈ ವರ್ಷದ ತೀವ್ರ ಚಳಿಗಾಲ ಕಳೆದು ವಸಂತ ಋತುವಿನ ಅಗಮನವನ್ನು ಎಲ್ಲರೂ ಕಾದು ನೋಡುತ್ತಿರುವುದಕ್ಕೆ ಸಾಕ್ಷಿಯಾಗಿ ಸುಮಾರು 600ಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭೇಟಿ-ಕುಶಲೋಪಚಾರ, ಕಾಫಿ/ಟೀ, ತಿಂಡಿಯ ನಂತರ ದೇವಸ್ಥಾನದ ಅರ್ಚಕರು ಸಾಂಪ್ರದಾಯಿಕವಾಗಿ ಪೂಜೆ ನಡೆಸಿ, ನಂತರ 'ಪಂಚಾಂಗ ಶ್ರವಣ' ಕಾರ್ಯಕ್ರಮ ನಡೆಸಿ ಕೊಟ್ಟರು.
ಈ ಬಾರಿಯ ಕಾರ್ಯಕ್ರಮಕ್ಕೆ ವಿಶೇಷವಾಗಿ ಭಾರತದಿಂದ ಪದ್ಮಶ್ರೀ ಡಾ|| ಮಾಲತಿ ಹೊಳ್ಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ವಿ.ಕೆ.ಕೆ ಅಧ್ಯಕ್ಷರಾದ ಶ್ರೀಶ ಜಯಸೀತಾರಾಮ್ ಹಾಗೂ ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಹಾಜರಿದ್ದರು.
ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು ಆಗಿರುವ ಡಾ|| ಮಾಲತಿ ಹೊಳ್ಳ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 381 ಚಿನ್ನ, 24 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2003ರಲ್ಲಿ ಅಮೆರಿಕದಲ್ಲಿ ಮತ್ತು 2001ರಲ್ಲಿ ಇಂಗ್ಲೆಂಡಿನಲ್ಲಿ 'ವರ್ಷದ ಮಹಿಳೆ' ಪ್ರಶಸ್ತಿ ಗಳಿಸಿದ್ದಾರೆ. ಅಂಗವಿಕಲ ಮಕ್ಕಳ ಆಶ್ರಯ, ಆರೈಕೆಗಾಗಿ ಅವರು 'ಮಾತೃ ಪ್ರತಿಷ್ಠಾನ' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಅರ್ಜುನ, ಏಕಲವ್ಯ, ಆರ್ಯಭಟ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ನಂತರ ಪ್ರಾರ್ಥನೆ, ಅಮೆರಿಕ, ಭಾರತದ ರಾಷ್ಟ್ರಗೀತೆಗಳು ಮತ್ತು ಕರ್ನಾಟಕದ ನಾಡಗೀತೆಗಳನ್ನು ಹಾಡಲಾಯಿತು. ವಿ.ಕೆ.ಕೆ ಪ್ರಸಕ್ತ ವರ್ಷದ ಅಧ್ಯಕ್ಷ ಶ್ರೀಶ ಜಯಸೀತಾರಾಮ್ ಸ್ವಾಗತ ಭಾಷಣ ಮಾಡಿ, ನಂತರ ಸದರಿ ವರ್ಷದ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರನ್ನು ಪರಿಚಯ ಮಾಡಿದರು.
ಇದಾದ ನಂತರ ಕೂಟದ ಸದಸ್ಯರಿಂದ 'ಯುಗ ಯುಗಾದಿ ಕಳೆದರೂ', 'ಜಗಿಣಕ್ಕ ಜಗಿಣಕ್ಕ', ಭರತ ನಾಟ್ಯ ಶೈಲಿಯಲ್ಲಿ ಸಮೂಹ ನೃತ್ಯ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬಂತು. ಹಳೆಯ ಮತ್ತು ಹೊಸ ಕನ್ನಡ ಹಾಡುಗಳ ಸಂಗೀತ ಸಂಭಾಷಣೆ - 'ಗೀತ ಮಂಜರಿ' , 'ಸಿರಿಗನ್ನಡ' ಕನ್ನಡ ಶಾಲೆಯ ಮಕ್ಕಳ ಕಿರು ನಾಟಕ 'ಪ್ರೈಮ್ ಟೈಮು ರೈಮ್ ಟೈಮು' ಮತ್ತು ನೃತ್ಯ ನಾಟಕ 'ನವ ನವೀನ - ಹೊಸ ವರುಷಾ ಹೊಸ ಚಿಗುರು' ಸದಸ್ಯರನ್ನು ರಂಜಿಸಿತು.
ವಿ.ಕೆ.ಕೆ ವತಿಯಿಂದ ಇತ್ತೀಚೆಗೆ ಚಳಿಗಾಲದ ಒಲಿಂಪಿಯಾಡ್ ಸ್ಪರ್ಧೆಯ ಅಂಗವಾಗಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕೇರಂ, ಚೆಸ್, ಪಗಡೆ, ಚೌಕಾಬಾರ ಆಟಗಳನ್ನು ಹಾಗೂ ತೂಕ ಕಳೆದುಕೊಳ್ಳುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಡಾ|| ಮಾಲತಿ ಹೊಳ್ಳ ಅವರು ಎಲ್ಲಾ ವಿಂಟರ್ ಒಲಿಂಪಿಯಾಡ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ನಂತರ ಅವರ ಬದುಕಿನ ಅನುಭವಗಳನ್ನು ಆಧರಿಸಿ, ಉನ್ನತ ಗುರಿಗಳನ್ನು ಸಾಧಿಸುವ ಬಗ್ಗೆ ಸ್ಪೂರ್ತಿದಾಯಕ ಭಾಷಣ ನೀಡಿದರು.
'ಮುತ್ತು ಮುತ್ತು ನೀರ ಹನಿಯ' ನೃತ್ಯ ಗುಚ್ಚ, ಕಿರು ನಾಟಕ 'ಗರ್ವ ಭಂಗ', ಕಿರು ಸಂಗೀತ ಕಾರ್ಯಕ್ರಮ 'ದೇವ ಬಂದ, ಬೆಣ್ಣೆ ಕದ್ದ' ಮತ್ತು ಹಾಸ್ಯ ನಾಟಕ 'ದಂಡ ಪಿಂಡಗಳು' ಪ್ರೇಕ್ಷಕರ ಮನ ಗೆದ್ದವು. ಇದೇ ಸಂದರ್ಭದಲ್ಲಿ ವರ್ಷಕ್ಕೆ ಎರಡು ಬಾರಿ ಹೊರಬರುವ ವಿ.ಕೆ.ಕೆ. ಸಾಹಿತ್ಯ ಸಂಚಿಕೆ 'ಸಂಗಮ'ವನ್ನು ಬಿಡುಗಡೆ ಮಾಡಲಾಯಿತು.
ಯುಗಾದಿ ಹಬ್ಬದ ಸಂಕೇತವಾಗಿ ಮಕ್ಕಳಿಗೆ ಕಲಶ ಚಿತ್ರಬರಹ ಹಾಗೂ ಅಲಂಕಾರ ಸ್ಪರ್ಧೆಯನ್ನು ಏರ್ಪಾಡಿಸ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಸದಸ್ಯರೆಲ್ಲರಿಗೂ ಯುಗಾದಿ ಸಿಹಿ ಹೋಳಿಗೆ ಕೂಡಿದ ವಿಶೇಷ ಹಬ್ಬದ ಊಟದ ಏರ್ಪಾಡಾಗಿತ್ತು. .
ಅಂದು ಎಲ್ಲರೂ ಎದುರು ನೊಡುತ್ತಿದ್ದ ವಿಶೇಷ ಕಾರ್ಯಕ್ರಮ ನ್ಯೂಜೆಸಿ೯ಯಿಂದ ಬಂದಿದ್ದ ಜನಪ್ರಿಯ ಗಾಯಕಿ ವಸಂತ ಶಶಿ ಅವರ ಸಂಗೀತ ಸಂಜೆ. ಭಕ್ತಿಗೀತೆ, ಹಳೆಯ ಹಾಗೂ ಹೊಸ ಚಲನಚಿತ್ರ ಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಅವರು ಸುಮಧುರವಾಗಿ ಹಾಡಿ ರಸಿಕರ ಮನಸ್ಸನ್ನು ಗೆದ್ದರು. ಅವರ ಕೆಲವು ಹಾಡುಗಳಿಗೆ ಚಿಕಾಗೋದ ಖ್ಯಾತ ಶಾಸ್ತ್ರಿಯ ನರ್ತಕಿ ಆಶಾ ಆಚಾರ್ಯ ಅಡಿಗ ಹಾಗೂ ಮತ್ತೊಬ್ಬ ಪ್ರಸಿದ್ಧ ನರ್ತಕಿ, ಟಿವಿ ಧಾರಾವಾಹಿ ನಟಿ ಬೆಂಗಳೂರಿನ ಯಮುನಾ ಶ್ರೀನಿಧಿ ಅವರು ನರ್ತಿಸಿದರು. ಈ ಕಾರ್ಯಕ್ರಮ ವಿನೂತನವಾಗಿ ಮೂಡಿ ಬಂತು.
ವಿ.ಕೆ.ಕೆ. ಉಪಾಧ್ಯಕ್ಷರಾದ ಡಾ|| ರೋಹಿಣಿ ಉಡುಪ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯಕಾರಿ ಸಮಿತಿಯ ಮುರಳೀಧರ ಕಜೆ ಹಾಗೂ ನೀತಾ ಧನಂಜಯ ಅವರು ನಡೆಸಿಕೊಟ್ಟರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿದ್ಯಾರಣ್ಯ ಕನ್ನಡ ಕೂಟದ ಅಂತರ್ಜಾಲ ತಾಣ http://www.vkkil.org ಗೆ ಭೇಟಿ ನೀಡಿ.