ದಕ್ಷಿಣ ಕೊರಿಯಾದಲ್ಲಿ ಹಾರಾಡಿದ ಕನ್ನಡ ಬಾವುಟ
ದಕ್ಷಿಣ ಕೊರಿಯಾದಲ್ಲಿ ನವೆಂಬರ್ 17ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿರುವ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ಒಂದು ರಂಗಮಂದಿರದಲ್ಲಿ ಈ ಕಾರ್ಯಕ್ರಮವನ್ನು 'ಕೊರಿಯ ಕನ್ನಡ ಕೂಟ' ಹಮ್ಮಿಕೊಂಡಿತ್ತು.
ಪ್ರೀತಿ ವರ್ಷದಂತೆ ಈ ವರ್ಷವು ಸುಮಾರು 50ಕ್ಕೂ ಹೆಚ್ಚು ಹೊರನಾಡ ಕನ್ನಡಿಗರು ಸೇರಿ ಕನ್ನಡ ರಾಜ್ಯೋತ್ಸವದಲ್ಲಿ ಸಡಗರದಿಂದ ಭಾಗವಹಿಸಿದರು. ಕನ್ನಡಿಗರು ದಕ್ಷಿಣ ಕೊರಿಯಾದ ವಿವಿಧ ಭಾಗಗಳಿಂದ ಸಿಯೋಲ್ ನಗರಕ್ಕೆ ಆಗಮಿಸಿ ಕನ್ನಡ ಬಾವುಟ ಹಾರಿಸಿ, ಕನ್ನಡ ಹಾಡುಗಳನ್ನು ಹೇಳಿ, ಕನ್ನಡ ನುಡಿಗಳನ್ನು ಆಡಿ ಸಂಭ್ರಮಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವರಾಜ್ ಬಲ್ಲಾಡ್ ರವರು ವಹಿಸಿಕೊಂಡಿದ್ದರು. ಬೆಳಿಗ್ಗೆ 11ಕ್ಕೆ ಶುರುವಾದ ಕಾರ್ಯಕ್ರಮಗಳು ಸಂಜೆ 5ರವರೆಗೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲಿಗೆ ಪ್ರಾರ್ಥನೆಯ ನಂತರ ಧ್ವಜಾರೋಹಣ ನಡೆಯಿತು. ಎಲ್ಲರೂ ಸೇರಿ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆಯನ್ನು ಭಾವತುಂಬಿ ಹಾಡಿದರು.
ಯುವರಾಜ್ ಬಲ್ಲಾಡ್ ಅವರು ಕನ್ನಡದ ಬಗ್ಗೆ ಹಿತವಚನಗಳನ್ನು ನುಡಿದರು. ಮಕ್ಕಳು ಹಾಡು ಮತ್ತು ನೃತ್ಯಗಳಿಂದ ಕನ್ನಡಿಗರ ಮನರಂಜನೆ ಗೊಳಿಸಿದರು. ಕೆಲವರು ನೃತ್ಯ, ಮೃದಂಗ ಮುಂತಾದ ಕಲೆಗಳಿಂದ ಪ್ರೇಕ್ಷಕರನ್ನು ಸಂತೋಷದ ಅಲೆಯಲ್ಲಿ ತೇಲಿಸಿದರು. ಮಕ್ಕಳು ಮಾಡಿದ ಪುಣ್ಯಕೋಟಿ ನೃತ್ಯನಾಟಕ ಪ್ರೇಕ್ಷಕರಿಗೆ ಮುದ ನೀಡಿತು. ಕನ್ನಡದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡಿಗರು ಉತ್ಸಾಹದಿಂದ ಸ್ಪರ್ಧಿಸಿದರು.
ಬಂದಿದ್ದ ಕನ್ನಡಿಗರೆಲ್ಲರಿಗೂ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಭೋಜನಾನಂತರ 3 ನಿಮಿಷ ಕನ್ನಡದಲ್ಲೇ ಮಾತಾಡುವ ಸ್ಪರ್ಧೆ, ಗಾದೆಗಳ ಬಗ್ಗೆ ಪ್ರಶ್ನಾವಳಿ ಮುಂತಾದ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಉತ್ಸಾಹದಿಂದ ಭಾಗವಹಿಸಿದರು. ಬಹುಮಾನ ವಿತರಣೆ ಹಾಗು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕೊರಿಯಾ ಕನ್ನಡ ಕೂಟ ಪ್ರತಿ ವರ್ಷ ಹೀಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತದೆ ಹಾಗು ನಾನಾ ವಿವಿಧ ಕಾರ್ಯಕ್ರಮಗಳನ್ನು (ಕೊರಿಯಾದ ವಿವಿಧ ಭಾಗಗಳಿಗೆ ಪ್ರವಾಸ, ಕ್ರಿಕೆಟ್ ಪಂದ್ಯಾವಳಿ ಇತ್ಯಾದಿ) ಹಮ್ಮಿಕೊಳ್ಳುತ್ತದೆ. ಆಸಕ್ತಿ ಇದ್ಹವರು [email protected] ಅಥವಾ "ಕೊರಿಯಾ ಕನ್ನಡ ಕೂಟ/korea kannada koota ಫೇಸ್ ಬುಕ್ ಗ್ರೂಪ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.