ಕೆರೆಮನೆ ಶಿವಾನಂದ ಹೆಗಡೆ ಅವರ ಸಂದರ್ಶನ
ಸಿಂಗಪುರದ ಎಸ್ಪ್ಲನೇಡ್ನ ತೆರೆದ ಸಭಾಂಗಣದಲ್ಲಿ "ಕಲಾ-ಉತ್ಸವ 2012"ದ ಪ್ರಯುಕ್ತ ಒಟ್ಟು 8 ಯಕ್ಷಗಾನ ಕಿರುಪ್ರಸಂಗದ ಪ್ರದರ್ಶನಗಳನ್ನು ನೀಡಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಜೊತೆ ಒಂದು ಕಿರು-ಸಂದರ್ಶನ ನಡೆಸುವ ಭಾಗ್ಯ ನನಗೆ ದೊರೆತಿತ್ತು. ಈ ಸಂದರ್ಶನದ ತುಣುಕುಗಳು.
ಪ್ರಶ್ನೆ: ನಮಸ್ಕಾರ. ನೀವು ಸಿಂಗಪುರಕ್ಕೆ ಬಂದದ್ದು ಹೇಗೆ? ನಿಮ್ಮನ್ನು ಕಲಾ ಉತ್ಸವಕ್ಕೆ ಕರೆಸಿದ್ದು ಯಾರು?
ಹೆಗಡೆ: ಎಸ್ಪ್ಲನೇಡ್ನ ಅರವಿಂದ್ ಕುಮಾರಸ್ವಾಮಿ ಅವರು ನಮ್ಮ ತಂಡ 2011 ಡಿಸೆಂಬರ್ನಲ್ಲಿ ಚೆನ್ನೈನಲ್ಲಿ ನಡೆಸಿಕೊಟ್ಟ ಯಕ್ಷಗಾನವನ್ನು ನೋಡಿ ಮೆಚ್ಚಿದ್ದರು. ಅವರೇ ನಮ್ಮನ್ನು ಸಂಪರ್ಕಿಸಿ, ಕಲಾ-ಉತ್ಸವ 2012ರಲ್ಲಿ ನಮ್ಮ ಕಾರ್ಯಕ್ರಮವನ್ನು ನೀಡಬೇಕೆಂದು ಕೋರಿಕೊಂಡರು.
ಪ್ರಶ್ನೆ: ಕಳೆದ ಮೂರು ದಿನಗಳಿಂದ ನೀವು ಇಲ್ಲಿ ಯಕ್ಷಗಾನವನ್ನು ಮಾಡಿದ್ದೀರಿ. ಕನ್ನಡಿಗರಿಗೆ ಹಾಗೂ ಬಹುತೇಕ ಭಾರತೀಯರಿಗೆ ಯಕ್ಷಗಾನ ಕಲೆ ಗೊತ್ತಿದೆ. ಈ ಕಲೆ ಗೊತ್ತಿಲ್ಲದವರ ಪ್ರತಿಕ್ರಿಯೆ ಹೇಗಿತ್ತು?
ಹೆಗಡೆ: ಹೌದು, ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಜಪಾನ್ ಮತ್ತು ಚೈನಾದಿಂದ ಬಂದ ಕೆಲವು ಪ್ರವಾಸಿಗಳು ಯಕ್ಷಗಾನವನ್ನು ಇಷ್ಟಪಟ್ಟಿದ್ದಾರೆ. ಇವತ್ತು ಒಬ್ಬರು ಬಂದು "ಈ ಕಾರ್ಯಕ್ರಮ ಕನಿಷ್ಟ ಒಂದೂವರೆಯಿಂದ ಎರಡು ಘಂಟೆಗಳ ಕಾಲ ಅವಕಾಶ ಕೊಡಬೇಕು" ಎಂದರು. ಚೈನಾದಲ್ಲಿ ಬೀಜಿಂಗ್ ಒಪೆರಾ ನೋಡಿ, ಈ ಕಲಾ ಸಂಪ್ರದಾಯದ ಬಗ್ಗೆ ತಿಳಿದಿರುವ ಇಲ್ಲಿನ ಧ್ವನಿ ಮತ್ತು ಬೆಳಕು ತಾಂತ್ರಿಕರು "ಯಕ್ಷಗಾನ ಜನರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಬಹಳ ಪ್ರಬಲವಾದ ಮಾಧ್ಯಮ" ಎಂದು ಹೇಳಿದರು.