
ದುಬೈ: ಧ್ವನಿ ಪ್ರತಿಷ್ಠಾನದ 27ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ- "ರಂಗ ಸಿರಿ-2012" ಇಲ್ಲಿನ ಎಮೇರೆಟ್ಸ್ ಥಿಯೇಟರ್ಸ್ ಸಭಾಗೃಹದಲ್ಲಿ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2012ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ಕನ್ನಡ ರಂಗಕರ್ಮಿ ಹಾಗೂ ಪ್ರಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರು ವಹಿಸಿದ್ದರು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿ ಸ್ವೀಕರಿಸಿದ ಮುಖ್ಯಮಂತ್ರಿ ಚಂದ್ರು ಅವರು, ಧ್ವನಿ ವಿದೇಶಿ ಮಣ್ಣಿನಲ್ಲಿ ನಡೆಸುವ ಕನ್ನಡ ಕೆಲಸವನ್ನು ಶ್ಲಾಘಿಸಿ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ತಮ್ಮ ನಾಡು ನುಡಿಯ ಕೊಂಡಿ ಕಳಚದಂತೆ ನೋಡಿಕೊಂಡು ಮಕ್ಕಳಲ್ಲಿ ತಾಯಿನಾಡಿನ ಬಗ್ಗೆ ಪ್ರಿತಿಹುಟ್ಟಿಸಬಹುದೆಂದು ಆಭಿಪ್ರಾಯಪಟ್ಟರು. ತಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ವಹಿಸಿದ ಮೇಲೆ ಸುಮಾರು ನಾಲ್ಕು ದೇಶದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ತರಗತಿ ನಡೆಸುವಂತೆ ಪ್ರೋತ್ಸಾಹಿಸಿ, ಪ್ರಾಧಿಕಾರದ ಸಹಕಾರದೊಂದಿಗೆ ನಡೆಸುತ್ತಾ ಬರುತ್ತಿರುವುದನ್ನು ಸಭೆಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಡಾ.ನಲ್ಲೂರು ಪ್ರಸಾದ್ ಅವರು, ಪ್ರಕಾಶ್ ರಾವ್ ಪಯ್ಯಾರ್ ಅವರು ಕಟ್ಟಿ ಬೆಳೆಸಿದ ’ಧ್ವನಿ’ ಸತತ 27 ವರ್ಷಗಳಿಂದ ಹೊರನಾಡಿನಲ್ಲಿ ಕನ್ನಡ ಕೆಲಸ ನಡೆಸುತ್ತಾ ಬಂದಿರುವದು ಸಂತೋಷದ ವಿಷಯ. ಧ್ವನಿ ಇನ್ನಷ್ಟು ಕನ್ನಡದ ಕೆಲಸ ನಡೆಸುತ್ತಾ ಬರಲಿ ಎಂದು ಹರಸಿದರು. ಡಾ. ನಲ್ಲೂರು ಅವರನ್ನು ಯು.ಇ.ಎ.ಕನ್ನಡಿಗರ ಪರವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಯು.ಎ.ಇ.ಯಲ್ಲಿ ಭಾರತೀಯ ರಾಯಭಾರಿ ಯಾಗಿರುವ ಕನ್ನಡಿಗ ಎಂ.ಕೆ.ಲೋಕೇಶ್ ಅವರು ಆಗಮಿಸಿದ್ದರು. ಸಮಾರಂಭದ ಪ್ರಮುಖ ಪ್ರಾಯೋಜಕರಾದ ಫಾರ್ಚುನ್ ಗ್ರೌಪ್ ಆಫ್ ಹೋಟೆಲ್ಸ್ ನ ಗ್ರೂಪ್ ಮ್ಯಾನೆಜಿಂಗ್ ಡೈರೆಕ್ಟರ್ ರವೀಶ್ ಗೌಡ, ಅರಬ್ ಉಡುಪಿ ಗ್ರೂಪ್ ಆಫ್ ರೇಸ್ಟೊರೆಂಟ್ ನ ಮಾಲೀಕ ಶೇಕರ್ ಬಿ.ಶೆಟ್ಟಿ, ಚಿಲ್ಲಿ ವಿಲ್ಲಿ ಗ್ರೂಪ್ ನ ಆಡಳಿತ ನಿರ್ದೇಶಕ ಸತೀಶ್ ವೆಂಕಟರಮಣ, ಸ್ಪ್ರೇಟೆಕ್ ಗ್ರೂಪ್ಸ್ ಆಡಳಿತ ನಿರ್ದೇಶಕ ರಾಮಚಂದ್ರ ಹೆಗ್ಡೆ ಹಾಗೂ ಮದನ್ ಗೌಡ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸರ್ವೋತ್ತಮ ಶೆಟ್ಟಿ ಅವರು ನಿರ್ವಹಿಸಿದರು. ಸಂಗೀತ ರಾಜೇಶ್ ಮತ್ತು ಅನನ್ಯ ಶ್ರಿಧರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಅರ್ಥರ್ ಪಿರೇರ ಅವರಾ ವಂದನೆಯೊಂದಿಗೆ ಮುಕ್ತಾಯಗೊಂಡಿತು.



























