ಅಡಿಲೇಡ್ ಕನ್ನಡಿಗರ ಸಂಭ್ರಮದ ರಾಜ್ಯೋತ್ಸವ
ಸಮಾರಂಭವನ್ನು ನಡೆಸಿಕೊಡಲು ಗೀತಾ ಪ್ರಸಾದ್, ಪ್ರಶಾಂತಿ, ರಮ್ಯ ಮತ್ತು ಸೌಮ್ಯ ಸಜ್ಜಾಗಿ ಬಂದಿದ್ದರು. ರಾಜ್ಯೋತ್ಸವ ಕಾರ್ಯಕ್ರಮವನ್ನು ಕೃಷ್ಣ ಪ್ರಸಾದ್ ಮತ್ತು ಅವರ ವೃಂದದವರಿಂದ 'ಭಾರತ ಜನನಿಯ ತನುಜಾತೆ' ಗಾಯನದಿಂದ ಶುರುವಾಯಿತು. ಆನಂತರ ಈ ಸಮಾರಂಭವನ್ನು ವಿಕ್ರಂ ಮದನ್ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವೈಭವ್ ನ 'ಇದೇ ನಾಡು ಇದೇ ಭಾಷೆ'ಯಿಂದ ಶುರುವಾದ ಕಾರ್ಯಕ್ರಮ ಸುಮಾರು ಎರಡೂವರೆ ತಾಸು ಅಮೋಘವಾಗಿ ಸಾಗಿತು. ಮಂಜುನಾಥ್ ಹುಲಿ, ಅಧ್ಯಕ್ಷರು, ಕನ್ನಡ ಸಂಘ, ಎಲ್ಲರಿಗೂ ಸ್ವಾಗತ ಕೋರಿದರು.
ಸಂಘದ ಕಾರ್ಯದರ್ಶಿ ರಘು ಲಿಂಗಪ್ಪ ಮತ್ತು ಸಂಗಡಿಗರು (ಅರ್ಜುನ್, ರೋಹನ್, ಆದಿಲ್, ಲಕ್ಷ್ಯ, ಶೀಲ ಜಗದೀಶ್, ಶೀಲ ಪ್ರಸಾದ್, ಸುನಿಲ್ ಕೃಷ್ಣಮೂರ್ತಿ, ವೈಜಯಂತಿ ಕಟ್ಟಿ, ರತ್ನ ಅರುಣ್) - ಮುತ್ತುರಾಜ ಕಾಲಿಟ್ಟ ಸೈಡು ಬಿಡಲೇ- ರಾಜ್ ದಿ ಶೋ ಮ್ಯಾನ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿ ಎಲ್ಲ ಸಭಿಕರ ಕರತಾಡನ ಶಿಳ್ಳೆ ಗಿಟ್ಟಿಸಿಗೊಂಡರು. ಪ್ರೇಮಲೋಕ ಚಿತ್ರದ 'ಲೋಕವೆ ಹೇಳಿದ ಮಾತಿದು' ಹಾಡಿಗೆ 5 ಜೊತೆ ಜೋಡಿಗಳಾದ ರೂಪ, ಮೋಹನ್, ಶೀಲ ಪ್ರಸಾದ್, ವೈಜಯಂತಿ ಕಟ್ಟಿ, ರತ್ನ ಅರುಣ್ ಹಾಗೂ ಸಂಧ್ಯಾ ಮಂಜುನಾಥ್ ಉತ್ತಮವಾಗಿ ನರ್ತಿಸಿದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಪವಿತ್ರ ಶ್ರೀಪಾದ್ ಅವರ ಭರತನಾಟ್ಯ ಹಾಗೂ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ರಾಯರ್ ಸಹೋದರಿಯರಾದ ಪ್ರಗತಿ ಹಾಗೂ ಜಾಗೃತಿ ಅವರು ಕನ್ನಡ ನಾಡಿನ ಹಿರಿಮೆಯ ಬಗ್ಗೆ ಮಾಡಿದ ನೃತ್ಯ ಬಹಳ ಸೊಗಸಾಗಿ ಮೂಡಿ ಬಂದಿತು. ಅಡಿಲೇಡ್ ಕಿಲಾಡಿಗಳಾದ ಸುನಿಲ್ ಆನೇಕಲ್ ಹಾಗೂ ಮಂಜುನಾಥ್ ಹುಲಿ ಅವರ ಯುಗಳ ಗೀತೆ ಎಲ್ಲರನ್ನು ರಂಜಿಸಿತು. ಸುನಿಲ್, ಮಂಜು ಹಾಗೂ ಜಯಂತ್ ರವರು ಜನಪ್ರಿಯ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಹಾಡುಗಳನ್ನು ಕರೋಕೆ ಮೂಲಕ ಹಾಡಿ ಚಪ್ಪಾಳೆಗೆ ಪಾತ್ರರಾದರು.
ಮುಬಾರಕ್ ಮತ್ತು ಅವರ ಮಕ್ಕಳು ಸತ್ಯ ಹರಿಶ್ಚಂದ್ರ ಈಗ ಭೂಮಿಗೆ ಬಂದರೆ ಹೇಗಿರುತ್ತೆ ಅಂತ ಒಂದು ಲಘು ಹಾಸ್ಯ ಪ್ರಹಸನವನ್ನು ಚಿಕ್ಕದಾಗಿ ಚೊಕ್ಕವಾಗಿ ನಡೆಸಿಕೊಟ್ಟರು. ಅರುಣ್ ನಾಯ್ಡು ಅವರ ಐತ್ತಲಕಡಿ ಹಾಡಿನ ನೃತ್ಯ ಸಂಯೋಜನೆಗೆ ಅರ್ಜುನ್, ಲಕ್ಷಯ್, ರೋಹನ್ ಮತ್ತು ಅಶ್ವಿನಿ ಮಾಡಿದ ನರ್ತನ ಸಭಿಕರನ್ನೂ ನರ್ತಿಸುವಂತೆ ಮಾಡಿತು. ಆನಂತರ ನಿರೀಕ್ಷ ಮತ್ತು ಸರಸ್ವತಿ 'ಯಂಚೆ ಕುಅನ್ಚಿನ ಲೆಇ ಲೆಇ' ಅಂತ ಸಿಂಗಪೋರ್ ಗೆ ಕರಕೊಂಡು ಹೋಗಿಬಿಟ್ಟರು ತಮ್ಮ ನಾಟ್ಯದಲ್ಲಿ.
ಚಂದ್ರಶೇಖರ್ ರವರು ಎಲ್ಲ ಚಿಣ್ಣರಿಗೆ ನೆನಪಿನ ಫಲಕಗಳನ್ನು ವಿತರಣೆ ಮಾಡಿದರು. 5 ವರ್ಷ ಸೇವೆ ಸಲ್ಲಿಸಿದ ಎಲ್ಲ ಎಕ್ಸಿಕ್ಯೂಟಿವ್ ಸದಸ್ಯರಲ್ಲಿ, ಲಾಟರಿ ಮುಖಾಂತರ ವಿನುತ ರಘು ಅವರನ್ನು ವಿಜಯಿ ಎಂದು ಘೋಷಿಸಿ ಅವರು ಬೆಂಗಳೂರಿಗೆ ಹೋಗಿ ಬರಲು ಉಮೇಶ್ ಹಾಗೂ ವಿದ್ಯಾ ನಾಗಸಂದ್ರ ಅವರು ಮಲೇಶಿಯನ್ ಏರ್ ಲೈನ್ಸ್ ನ ರಿಟರ್ನ್ ಏರ್ ಟಿಕೆಟ್ ಕೊಟ್ಟರು.