
ಉತ್ತರ ಕರ್ನಾಟಕದಲ್ಲಿ 2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಕಂಗೆಟ್ಟ ಜನರ ನೆರವಿಗೆ ಧನ, ಧಾನ್ಯ, ವಸ್ತ್ರ, ವಾಸಗೃಹಗಳ ಮಹಾಪೂರ ಹರಿದುಬಂದುದು ನಿಮಗೆ ಗೊತ್ತಿದೆ. ನೆರವುಗಳ ಈ ಪ್ರವಾಹಕ್ಕೆ ಅನಿವಾಸಿ ಕನ್ನಡಿಗರ ಪರವಾಗಿ ಅಕ್ಕ ತನ್ನ ಅಳಿಲು ಕಾಣಿಕೆಯನ್ನು ಸಲ್ಲಿಸಿದೆ. ಕರ್ನಾಟಕ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಅಕ್ಕ ವತಿಯಿಂದ ಇತ್ತೀಚೆಗೆ 25 ಲಕ್ಷ ರೂಪಾಯಿ ನಿಧಿ ಸಮರ್ಪಿಸಲಾಗಿದೆ.
ಅಕ್ಕ ಟ್ರಸ್ಟಿ ಅಮರ್ ನಾಥ್ ಗೌಡ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಿಯೋಗ ನಿಧಿ ಚೆಕ್ಕನ್ನು ಬಿಎಸ್ ಯಡಿಯೂರಪ್ಪ ಅವರಿಗೆ ನೀಡಿತು. ನಿಯೋಗದಲ್ಲಿ ಅಕ್ಕದ ಟ್ರಸ್ಟಿಗಳು ಮತ್ತು ಪದಾಧಿಕಾರಿಗಳಾದ ಹಳೇಕೋಟೆ ವಿಶ್ವಾಮಿತ್ರ, ಬಸವರಾಜ್ ಶಿವಣ್ಣ, ಯಮುನಾ ಶ್ರೀನಿಧಿ, ಬೆನ್ ಚಿಕ್ಕಸ್ವಾಮಿ, ಶರತ್ ಭಂಡಾರಿ, ಹರೀಶ್ ನಾಯ್ಡು ಮತ್ತು ನ್ಯೂ ಜೆರ್ಸಿಯಲ್ಲಿ ಸೆಪ್ಟೆಂಬರ್ 3ರಿಂದ 5ರವರೆಗೆ ಜರುಗುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಭಾರತೀಯ ಸಮಿತಿ ಸದಸ್ಯರು ಇದ್ದರು ಎಂದು ಅಕ್ಕ ಕಾರ್ಯದರ್ಶಿ ದಯಾಶಂಕರ ಅಡಪ ತಿಳಿಸಿದ್ದಾರೆ.




























