ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ!

By Staff
|
Google Oneindia Kannada News

Kuwait kannadigas celebrate Basava jayanti
ಅಕ್ಷಯ ತೃತೀಯದಂದು ಕುವೈಟ್ ನ ಕನ್ನಡಿಗರೆಲ್ಲರೂ ಸಂಭ್ರಮದಿಂದ ಬಸವಜಯಂತಿ ಆಚರಿಸಿದರು. ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ವಚನ ಗಾಯನ ಸಮಾರಂಭಕ್ಕೆ ಕಳೆ ನೀಡಿತ್ತು. ಕಾಯಕದಲ್ಲಿಯೇ ಕೈಲಾಸ ಕಾಣುವ ಕನ್ನಡಿಗರು ಕೈಲಾಸವಾಸಿಯನ್ನು, ಭಕ್ತಿ ಭಂಡಾರಿ ಬಸವಣ್ಣನನ್ನು ನೆನೆದ ಬಗೆ ವೈಶಿಷ್ಯಪೂರ್ಣವಾಗಿತ್ತು.

* ಸುಗುಣ ಮಹೇಶ್, ಕುವೈಟ್

ಕಾಯಕದಲ್ಲೇ ಕೈಲಾಸಕಾಣಬೇಕೆಂದುಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು ಅವರ ನುಡಿಮುತ್ತುಗಳನ್ನ ಅವರು ತಿಳಿಸಿದ ಹಾದಿಯನ್ನೊಮ್ಮೆ ನಾವು ಅರಿತು ಪೂಜಿಸೋಣವೆಂದು ಕೆಲವೇ ಕೆಲವು ಕುಟುಂಬಗಳು ಸೇರಿ ಬಸವಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆವು. ದೇವರು ಇದ್ದಾನೋ ಇಲ್ಲವೋ ತಿಳಿಯದು ದೇವರಂತಹ ಮಾನವರು ಇದ್ದೇ ಇದ್ದಾರೆ ಅಂತಹವರನ್ನು ಪೂಜಿಸುವುದರಲ್ಲಿ ಯಾವುದೇ ಕಟ್ಟುಪಾಡುಗಳು ಬೇಕಿಲ್ಲ.

27.04.09 ಅಕ್ಷಯತದಿಗೆಯಂದು ಬಸವಜಯಂತಿ. ನಾವೆಲ್ಲ ಸೇರಿ ಪುಟ್ಟದಾಗಿ ಮನೆಯಲ್ಲೇ ಈ ಕಾರ್ಯಕ್ರಮವನ್ನು ಆಚರಿಸಿದೆವು. ಸಂಜೆ ಸುಮಾರು 7 ಗಂಟೆಗೆ ಪ್ರಾರಂಭವಾಗಿದ್ದು ಅಣ್ಣನ ವಚನದಿಂದ. ಗಂಡಸರು ಹಾಗು ಹೆಂಗಸರಿಂದ ಸುಮಾರು 20 ವಚನ ಗಾಯನ ನೆರವೇರಿತು. ಈ ವಚನಗಳ ಗಾಯನದಿಂದ ತನ್ನದೆ ತನ್ಮಯತೆ ಮೂಡಿಸಿಬಿಟ್ಟಿತ್ತು.

ವಚನ ಗಾಯನಕ್ಕೆ ತಕ್ಕಂತೆ ತಾಳ ಮೇಳಗಳು ಸಹ ಸಜ್ಜಾಗಿ ನಿಂತಿದ್ದವು. ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ಗಾಯನಕ್ಕೆ ತಕ್ಕಂತೆ ಸಂಗೀತದ ಹೊಳೆ ಹರಿಸಿದರು...ಬಸವ ಜಯಂತಿ ವಚನ ಸಂಜೆಯಾಗಿ ಮೂಡಿತ್ತು. ವಚನ ಗಾಯನ, ಪೂಜೆ ಒಂದೇ ಆದರೆ ಹೇಗೆ? ವಚನಕಾರರನ್ನು ಮನನ ಮಾಡಲೇಬೇಕಲ್ಲವೇ? 12ನೇ ಶತಮಾನದ ವಚನಕಾರರು ಹತ್ತು ಹಲವಾರು ವಚನಗಳು ಹಾಗು ಬಸವಣ್ಣನವರ ಹುಟ್ಟೂರು, ಐಕ್ಯಸ್ಥಳ ಎಲ್ಲದರ ವಿವರಣೆಯನ್ನು ಬಿಂಬಿಸಲೆಂದು ಗೋಡೆಗಳ ಮೇಲೆಲ್ಲ ಒಂದು ಚಿತ್ರ ಲೋಕವನ್ನೇ ಸೃಷ್ಟಿಸಿದ್ದೆವು.

ಪೂಜಾವಿಧಿ ವಿಧಾನಗಳು ಸಾಂಗವಾಗಿ ನೆರವೇರಿತು. ಕೊನೆಯಲ್ಲಿ ಅಣ್ಣನವರಿಗೆ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿಸಿದೆವು. ಇಷ್ಟೆಲ್ಲಾ ಆದ ನಂತರ ಪ್ರಸಾದ ಸೇವನೇ (ದಾಸೋಹ)ಆಗಲೇಬೇಕಲ್ಲವೆ... ಉತ್ತರ ಕರ್ನಾಟಕದ ಜೋಳದ ರೊಟ್ಟಿ (ಬಕರಿ) ಅದಕ್ಕೆ ಬೇಕಾದ ಎಣ್ಣಿಗಾಯಿ ಪಲ್ಯ, ಕಾರ ಚಟ್ನಿ, ಅದಕ್ಕೆ ಸೆಬ್ಬೆಯಂತೆ ತುಪ್ಪ, ಶೇಂಗಾ ಚಟ್ನಿ ಅದಕ್ಕೆ ಮೊಸರು, ಕಾಳಿನ ಪಲ್ಯ, ಹೋಳಿಗೆ(ಒಬ್ಬಟ್ಟು), ಸಾರು ಅನ್ನ, ಮೊಸರನ್ನ ಇನ್ನು ಹಲವು ಬಗೆ ಬಗೆಯ ಪದಾರ್ಥಗಳಿದ್ದವು. ಅವೆಲ್ಲವನ್ನು ಸವಿದು ಮನೆ ತಲುಪಲು ಅತುರಾತುರದ ತಯಾರಿಯಲ್ಲಿದ್ದರು ನಮ್ಮ ಸ್ನೇಹಿತರು ಏಕೆಂದರೆ ಬೆಳ್ಳಂಬೆಳ್ಳಿಗೆ ಎದ್ದು 7ಗಂಟೆಗೆಲ್ಲ ಕಚೇರಿಗೆ ತಲುಪಬೇಕಲ್ಲ. ಮತ್ತದೆ ಕಾಯಕದಲ್ಲಿ ಕೈಲಾಸ ಕಾಣಬೇಕಲ್ಲ...

ಊರಿಂದ ಬಂದ ಅಪ್ಪ ಅಮ್ಮಂದಿರೆಲ್ಲ ನಮ್ಮ ಆಚರಣೆ ಕಂಡು ಬಹಳ ಖುಷಿಯೊಂದಿಗೆ ನಮ್ಮೆಲ್ಲರಿಗೂ ಆಶೀರ್ವದಿಸಿದರು. ಅವರ ಅಶೀರ್ವಾದ ಚಿರಕಾಲ ಇಂತಹ ಕಾರ್ಯಕ್ರಮ ಜರುಗಿಸಲು ನೆರವಾಗುತ್ತದೆಂದು ಭಾವಿಸಿದ್ದೇವೆ.

ಅಂದು ಕೆಲಸದ ದಿನವಾದರೂ ಎಲ್ಲಾ ಸ್ನೇಹಿತರು ಅದು ಹೇಗೆ ಇರುವೆ ಸಾಲುಗಳು ಬಂದಂತೆ ಒಬ್ಬರಿಂದೊಬ್ಬರು ಸರಿ ಸಮಯಕ್ಕೆ ಬಂದುಬಿಟ್ಟರೋ ತಿಳಿಯದು. ಈ ಕಾರ್ಯಕ್ರಮಕ್ಕೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರುವಾರಿಗಳೇ ಸರಿ. ಕಾರ್ಯಕ್ರಮ ಆಯೋಜಿಸಿದ್ದ ಸ್ನೇಹಿತೆ ಡಾ.ವಿದ್ಯಾಪ್ರಭಾಕರ್ ಮತ್ತು ಪ್ರಭಾಕರ್ ಹಾಗು ಇವರಿಗೆ ಕೈ ಜೋಡಿಸಿದ ಎಲ್ಲಾ ಕುಟುಂಬ ವರ್ಗಗಳಿಗೂ ಧನ್ಯವಾದಗಳನ್ನು ಅರ್ಪಿಸಲೇ ಬೇಕು. ಹಾಗು ಸಮಾರಂಭಕ್ಕೆ ಮೆರುಗು ಕೊಟ್ಟ ಮಹಿಳೆಯರ ಹಾಗು ಗಂಡಸರ ಭಜನಾ ಮಂಡಳಿಯವರಿಗೆಲ್ಲ ವಂದನೆಗಳು.

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!

ಈ ವಚನದಹಾಗೆ ನಮಗೋ ಮರಳಲ್ಲಿ ಕನ್ನಡ ನುಡಿ, ಸಂಸ್ಕೃತಿಯ ಬಿಂಬಿಸುವ ಚಿಂತೆ! ನಮ್ಮೊರ ನೆನಪಲ್ಲಿ ದಿನ ಕಳೆವ ಚಿಂತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X