ಧ್ವನಿ ಪ್ರತಿಷ್ಠಾನದಿಂದ ಕನ್ನಡ ವಿಜಯೋತ್ಸವ
ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಹಲ್ಮಿಡಿ ಶಾಸನದಿಂದ ಇತ್ತೀಚಿನ ದಶಕಗಳವರೆಗಿನ ಸಾಹಿತ್ಯಿಕ ಬೆಳವಣಿಗೆಯ ಕಾಲಘಟ್ಟದ ಸ್ಥೂಲ ಪರಿಚಯವನ್ನು ಸಭಿಕರ ಮುಂದಿರಿಸಿದರು. ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ದೊರೆಯುವಲ್ಲಿ ಅವಿರತ ಶ್ರಮ ವಹಿಸಿದ ದೇ.ಜ.ಗೌ., ಪಾ.ಪು., ಚಿದಾನಂದ ಮೂರ್ತಿಯವರಂಥ ಹಿರಿಯ ಚೇತನಗಳು ಹಾಗೂ ಎಲ್ಲಾ ಹೋರಾಟಗಾರರ ಶ್ರಮವನ್ನು ಉಲ್ಲೇಖಿಸಿ ಸರ್ವರಿಗೂ ಯು.ಎ.ಇ.ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿ ಅಶೋಕ ಶೆಟ್ಟಿಯವರು ಕನ್ನಡಿಗರು ಪ್ರಾಂತೀಯ ಬೇಧವನ್ನು ಮರೆತು ಒಂದಾಗಬೇಕೆಂಬ ಸಂದೇಶವನ್ನು ಯು.ಎ.ಇ. ಕನ್ನಡಿಗರಿಗೆ ನೀಡಿದರು. ಕನ್ನಡದ ಹಲವು ಶ್ರೇಷ್ಠ ಲೇಖಕರ ಕೃತಿಗಳನ್ನು ಕೊಂಕಣಿಗೆ ಅನುವಾದಿಸಿರುವ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕ್ರತ ಲೇಖಕ ಮೆಲ್ವಿನ್ ರೊಡ್ರಿಗಾಸ್ ಹಾಗೂ ರಂಗಭೂಮಿ ಹಾಗೂ ಕಿರುತೆರೆಯ ಹಾಸ್ಯ ಕಲಾವಿದ ಅವಿಥಾಸ್ ಅಡೊಲಫಸ್ ಅವರು ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಕವಿ ಗೋಷ್ಠಿಯಲ್ಲಿ ಕವಿಗಳಾದ ಗೋಪಿನಾಥ್ ರಾವ್, ನಳಿನಿ ಸೋಮಯಾಜಿ, ಪ್ರಕಾಶ್ ರಾವ್ ಪಯ್ಯಾರ್, ಅರ್ಶದ್ ಹುಸ್ಸೆನ್, ಮೆಲ್ವಿನ್ ರೊಡ್ರಿಗಾಸ್, ಯೂಸುಫ್ ಮಾಸ್ತರ್, ರಾಬರ್ಟ್ ಉದ್ಯಾವರ್, ರೋಶನ್ ಅರ್ಥರ್ ಪಿರೇರ, ಪಿಯುಸ್ ಜೇಮ್ಸ್ ಅವರು ಸ್ವರಚಿತ ಕವನಗಳನ್ನು ವಾಚಿಸಿದರು.
ಕರ್ನಾಟಕದಿಂದ ಅಗಮಿಸಿದ್ದ ಹಾಸ್ಯ ಕಲಾವಿದ ಅವಿಥಾಸ್ ಅಡೊಲಫಸ್ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನಿತ್ತು ಸಭೆಯಲ್ಲಿ ಸನ್ಮಾನಿಸಲಾಯಿತು. ಬಿ.ಜಿ.ಮೋಹನದಾಸ್, ಜಯರಾಮ್ ಸೋಮಯಾಜಿ, ಮಧುಸೂದನ್ ಮುಂತಾದ ಗಣ್ಯರು ಶಾಸ್ತ್ರಿಯ ಸ್ಥಾನಮಾನ ದೊರೆತ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಸಭೆಯಲ್ಲಿ ಇತ್ತೀಚಿಗೆ ಉಗ್ರರ ದಾಳಿಯಿಂದ ಮುಂಬಯಿಯಲ್ಲಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆಯನ್ನು ನಡೆಯಿಸಲಾಯಿತು.
ನಿವೇದಿತಾ ಅರವಿಂದ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಮಧುಸೂದನ್ ಅವರ ವಂದನೆಯೊಂದಿಗೆ ಮುಕ್ತಾಯಗೊಂಡಿತು.