ನ್ಯೂಜೆರ್ಸಿಯಲ್ಲಿ ದೀಪಾವಳಿ ಹಾಗು ಕನ್ನಡಡಿಂಡಿಮ
ಕಾರ್ಯಕ್ರಮದ ಮೊದಲಿಗೆ ನ್ಯೂಜೆರ್ಸಿಯ ಗಾನಕೋಗಿಲೆ ವಸಂತಾ ಶಶಿ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಲೇಖಕ ಆ.ನ. ಪ್ರಹ್ಲಾದ್ ಅವರ ರಚಿತ ಕರುನಾಡ ತಾಯೆ ಭುವನೇಶ್ವರಿ, ಸಿರಿನಾಡ ಕಾಯೆ ರಾಜರಾಜೇಶ್ವರಿ ಗೀತೆಯನ್ನ ಬಹಳ ಇಂಪಾಗಿ ಹಾಡಿದರು. ದೀಪವು ನಿನ್ನದೆ ಮತ್ತು ದೀಪ ನಿನ್ನ ತಾಪಕಾಗಿ ಬತ್ತಿ ಉರಿಯತೊಡಗಿದೆ ಗೀತೆಗಳನ್ನು ಹಾಡಿ ದೀಪಾವಳಿ ಹಬ್ಬಕ್ಕೂ ಮೆರುಗು ನೀಡಿದರು.
ಅಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಓಮ್ ಧ್ವನಿ ಸುರಳಿ (ಸುರೇಶ್ ವಾಡ್ಕರ್ ಹಾಗು ವಸಂತಾ ಶಶಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ವಿವಿಧ ದೇವತೆಗಳ ಶ್ಲೋಕಗಳ ಮಂತ್ರ ಪಟಣೆ) ಲೋಕಾರ್ಪಣೆ ಮಾಡಲಾಯಿತು. ನ್ಯೂಜೆರ್ಸಿಯ ಎಫ್. ಎಂ ರೇಡಿಯೋ ಮೂಲಕ ಕನ್ನಡಿಗರ ಮನೆಮಾತಾಗಿರುವ ಕರ್ನಾಟಕ ರಾಮಕೃಷ್ಣ ಆಶ್ರಮದಿಂದ ಆಗಮಿಸಿರುವ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರ ಉಪನ್ಯಾಸ ಹಾಗು ಪರಸ್ಪರ ಪ್ರಶ್ನೋತ್ತರ ಕಾರ್ಯಕ್ರಮ ಕೇಳುಗರ ಮನಮುದಗೊಳಿಸಿತು.
ವಸಂತಾ ಶಶಿ, ಶ್ಯಾಮ್ ಸುಂದರ್, ಜಯಶ್ರಿ ಕುನ್ನತ್ತುರ್ ಹಾಗು ನಳಿನಿ ಕುಕ್ಕೆ ಅವರ ತಂಡ ರಾಷ್ಟ್ರಕವಿ ಕುವೆಂಪು ಅವರ ರಚಿತ ಜಯಭಾರತ ಜನನಿಯ ತನುಜಾತೆ ಹಾಗು ನಿಸಾರ್ ಅಹ್ಮದ್ ಅವರ ರಚಿತ ನಿತ್ಯೋತ್ಸವ ತಾಯಿ ನಿತ್ಯೋತ್ಸವ ಹಾಡಿತು. ಹಾಡಿನ ಜೊತೆಗೆ, ಕರ್ನಾಟಕದ ವೈಭವದ ವಿಡಿಯೋ ಚಿತ್ರಣ ಬಹಳ ಸೊಗಸಾಗಿ ಮೂಡಿಬಂದಿತು.
ಅಮೇರಿಕೆಯಲ್ಲಿ ಎಲ್ಲೂ ಕೇಳರಿಯದ ಇಂದಿನ ಸ್ಕ್ಯೆಪ್ಟೆಕ್ನಾಲಜಿ ಉಪಯೋಗಿಸಿಕೊಂಡು ಮೊಟ್ಟ ಮೊದಲಬಾರಿಗೆ ಕರ್ನಾಟಕದಿಂದ ನೇರ ಪ್ರಸಾರ ಕಾರ್ಯಕ್ರಮವಾಗಿ ಮೂಡಿಬಂದಿತು. ಡಾ. ರಾಜ್ ಕುಮಾರ ಅವರ ಜೀವನ ಚರಿತ್ರೆ ಪುಸ್ತಕದ ಮುಖಾಂತರ ಹಾಗು ಸುಮಾರು 8 ಸಾವಿರಕ್ಕೂ ಹೆಚ್ಚು ಕನ್ನಡ ಪದಬಂಧಗಳನ್ನ ನೀಡಿ ಚಿರಪರಿಚಿತರಾಗಿರುವ ಲೇಖಕ ಆ.ನ. ಪ್ರಹ್ಲಾದ್ ಅವರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ್ಯೂಜೆರ್ಸಿಯ ಕನ್ನಡಿಗರೆಲ್ಲರಿಗೂ ಶುಭ ಹಾರೈಸಿದರು. ಹರಟೆ ಕಾರ್ಯಕ್ರಮದಿಂದ ವಿಶ್ವದಾದ್ಯಂತ ಚಿರಪರಿಚಿತರಾಗಿರುವ ರಿಚರ್ಡ್ ಲೂಯಿಸ್ ಅವರು ಕೂಡ ಕರ್ನಾಟಕದಿಂದ ನೇರವಾಗಿ ಹಾಸ್ಯರಾತ್ರಿ ಕಾರ್ಯಕ್ರಮವನ್ನ ನೀಡಿ ಅಂದು ನೆರೆದಿದ್ದ ನ್ಯೂಜೆರ್ಸಿ ಹಾಗು ಸುತ್ತಮುತ್ತಲಿನ ಅಮೇರಿಕನ್ನಡಿಗರನ್ನೆಲ್ಲಾ ತಮ್ಮ ವಿಶಿಷ್ಟ ವಿನೋದಾವಳಿ ಮುಖಾಂತರ ರಂಜಿಸಿದರು.
ಎಲ್ಲಾ ತಾಯಂದಿರು ಮನೆಯಲ್ಲಿ ಮಾಡಿ ತಂದಿದ್ದ ಕರ್ನಾಟಕದ ಹಬ್ಬದೂಟ (ಬಿಸಿಬೇಳೆಬಾತ್, ಪುಳಿಯೊಗರೆ, ಬೂದಗುಂಬಳ ಕೂಟು, ಎಲ್ಲಾ ತರಕಾರಿ ಹುಳಿ, ಬೆಂಡೆ ಗೊಜ್ಜು, ಬೀನ್ಸ್ ಪಲ್ಯ, ಮೈಸೂರು ರಸಂ, ಅನ್ನ, ಚಪಾತಿ, ಸಂಡಿಗೆ, ಮೊಸರು ಬಜ್ಜಿ, ಜಿಲೇಬಿ, ರಸಮಲೈ, ಇತ್ಯಾದಿ) ಬಹಳ ರುಚಿಕರವಾಗಿತ್ತು.
ದೀಪಾವಳಿಯ ಪ್ರಯುಕ್ತ ವಸಂತಾ ಶಶಿಯವರು ಇಂಪಾಗಿ ಹಾಡಿದ ದೀಪ ನಿನ್ನ ತಾಪಕಾಗಿ (ನವಂಬರ್ ನಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿರುವ ದ್ವನಿ ಸುರಳಿಯಿಂದ ಅಯ್ದ ಗೀತೆ) ಹಾಡಿನ ಇಣುಕು ನೋಟಕ್ಕೆ ಇಲ್ಲಿ ಕ್ಲಿಕ್ಕಿಸಿ.