ಯು.ಕೆ ಕನ್ನಡ ಬಳಗದ ಕನ್ನಡಿಗರು ಮಾರ್ಚ್12 ರಂದು ಈ ವರ್ಷದ ಯುಗಾದಿಯನ್ನು ನಾಟಿಂಗ್ ಹ್ಯಾಮ್ ನ ಬ್ರಾಮ್ಕೋಟ್ ಕ್ರೀಡಾ ಮತ್ತು ಸಮುದಾಯ ಭವನದಲ್ಲಿ ಬಹಳ ಸಂಭ್ರಮದಿಂದ ಆಚರಿಸಿದರು. ಮಾರ್ಚ್12 ರ ಬೆಳಿಗ್ಗೆ ಹಿತವಾದ ಬಿಸಿಲಿನಲ್ಲಿ ಸುಮಾರು 10ಗಂಟೆಗೆ ಕನ್ನಡ ಮಿತ್ರರೆಲ್ಲ ಆಗಮಿಸಲಾರಂಭಿಸಿದರು.12ಗಂಟೆಗೆ ಸಮಾರಂಭವು ಸರಸ್ವತಿ ಸ್ತುತಿಯೊಂದಿಗೆ ಪ್ರಾರಂಭವಾಯಿತು. ಸ್ಥಳೀಯ ಪಾರ್ಲಿಮೆಂಟ್ ಸದಸ್ಯ ಡಾ.ನಿಕ್ ಪಾಮರ್ ಅಂದಿನ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ಸಾಂಪ್ರದಾಯಿಕ ದೀಪ ಬೆಳಗಿ ಅಂದಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಪ್ರಸಕ್ತ ಕನ್ನಡ ಬಳಗದ ಅಧ್ಯಕ್ಷೆ ಡಾ.ಭಾನುಮತಿ ತಮ್ಮ ಭಾಷಣದಲ್ಲಿ ಯುಗಾದಿ ಹಬ್ಬದ ವಿಶಿಷ್ಟತೆಯನ್ನು ವಿವರಿಸಿದರಲ್ಲದೆ, ಕನ್ನಡ ಬಳಗದ ಮೂಲ ಉದ್ದೇಶಗಳನ್ನು ಮತ್ತು ಸಂಸ್ಥೆಯ 25 ವರ್ಷಗಳ ಸಾಧನೆಗಳನ್ನು ಒತ್ತಿ ಹೇಳಿದರು.
ಮುಖ್ಯ ಅತಿಥಿಗಳ ಭಾಷಣ ಮತ್ತು ಬೇವು ಬೆಲ್ಲಗಳ ಸೇವನೆಯೊಂದಿಗೆ ಬೆಳಗಿನ ಕಾರ್ಯಕ್ರಮಗಳು ಮುಗಿದವು. ಮಧ್ಯಾಹ್ನದ ಭರ್ಜರಿ ಭೋಜನದ ನಂತರ ಡಾ.ಭಾನುಮತಿಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮೊದಲಾಯಿತು. 2007-08 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ವರದಿಗಳನ್ನು ಬಳಗದ ಸದಸ್ಯರಿಗೆ ಓದಿ ತಿಳಿಸಲಾಯಿತು. ಈ ವರ್ಷ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಬಳಗದ ರಜತ ಮಹೋತ್ಸವದ ಕಾರ್ಯಕ್ರಮಗಳ ಬಗ್ಗೆ ಪೂರ್ಣ ನಿರೂಪಣೆಯನ್ನು ಡಾ.ಭಾನುಮತಿ ಮತ್ತು ಡಾ.ರಾಮಮೂರ್ತಿಯವರು ನಡೆಸಿಕೊಟ್ಟರು. ಸ್ಥಳೀಯ ಕಾರ್ಯಕಾರಿ ಸಮಿತಿ ಸದಸ್ಯರು ಬಹಳ ಉತ್ತಮವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಮ್ಮ ಯುವ ಕಲಾವಿದರು ಶಾಸ್ತ್ರಿಯ ಸಂಗೀತ, ಸುಗಮ ಸಂಗೀತ, ವಿವಿಧ ನೃತ್ಯಗಳು, ಕನ್ನಡ ಹಾಸ್ಯ ನಾಟಕ, ಹಾಸ್ಯ ಹರಟೆ, ಮತ್ತು ಮಧ್ಯದಲ್ಲಿ ಕನ್ನಡ ಕ್ವಿಜ್ ಕಾರ್ಯಕ್ರಮಗಳು ಬಹಳ ಸ್ವಾರಸ್ಯಪೂರ್ಣವಾಗಿದ್ದವು.
ಸಂಜೆ ಯಕ್ಷಗಾನ ಕಾರ್ಯಕ್ರಮ ಬಹಳ ಸೊಗಸಾಗಿದ್ದು ಪ್ರೇಕ್ಷಕರನ್ನುಕಲ್ಪನಾಲೋಕಕ್ಕೆ ಕರೆದೊಯ್ಯಿತು. ದಿನದ ಕಾರ್ಯಕ್ರಮಗಳೆಲ್ಲವನ್ನು ಕನ್ನಡದಲ್ಲಿ ಡಾ.ಮೋಹನ್ ಅರ್ಕನಾಥ್, ಶರಾವತಿ ಮತ್ತು ಅನ್ನಪೂರ್ಣ ಆನಂದ್ ಅವರು ಬಹಳ ಚೊಕ್ಕವಾಗಿ ನಿರೂಪಿಸಿದರು. ರಾತ್ರಿ ವಂದನಾರ್ಪಣೆಯೊಂದಿಗೆ ಈ ವರ್ಷದ ಯುಗಾದಿ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನೆರವೇರಿದವು.ರಾತ್ರಿಯ ಭರ್ಜರಿ ಊಟದನಂತರ ಬಳಗದ ಮಿತ್ರರೆಲ್ಲ ಸಂತೃಪ್ತರಾಗಿ ತಮ್ಮತಮ್ಮ ಊರುಗಳಿಗೆ ತೆರಳಿದರು.
















