ಶಿವಮೊಗ್ಗದಲ್ಲಿ ಗೆಲುವು ನನ್ನದು : ಯಡಿಯೂರಪ್ಪ ಸಂದರ್ಶನ
ಶಿವಮೊಗ್ಗ, ಏ.11 : "ಶಿವಮೊಗ್ಗದಲ್ಲಿ ಗೆಲುವು ನನ್ನದು, ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ, ಸಿನಿಮಾ ನಟರು ಕ್ಷೇತ್ರದಲ್ಲಿ ಬಂದು ಪ್ರಚಾರ ನಡೆಸುವುದು ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ" ಎಂದು ಮಾಜಿ ಸಿಎಂ ಮತ್ತು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ಬಿರುಸಿನ ಪ್ರಚಾರದ ನಡುವೆಯೂ ಬಿಎಸ್ ಯಡಿಯೂರಪ್ಪ ಶಿವಮೊಗ್ಗದ ವಿನೋಬನಗರದಲ್ಲಿರುವ ತಮ್ಮ ನಿವಾಸದಲ್ಲಿ ಒನ್ ಇಂಡಿಯಾ ಕನ್ನಡಕ್ಕೆ ವಿಶೇಷ ಸಂದರ್ಶನ ನೀಡಿದರು. ಪ್ರಚಾರ, ಎದುರಾಳಿಗಳು, ಮುಂದಿನ ಯೋಜನೆ ಮುಂತಾದವುಗಳ ಕುರಿತು ಮಾತನಾಡಿದರು. ಶಿವಮೊಗ್ಗದಲ್ಲಿ ಗೆಲುವು ನನ್ನದು ಎಂದರು.
ಕ್ಷೇತ್ರದಲ್ಲಿ ತಾವು ಚುನಾವಣೆ ಸ್ಪರ್ಧಿಸಲು ವರಿಷ್ಠ ನಿರ್ಧಾರ ಕಾರಣ ಎಂದು ಮಾತು ಆರಂಭಿಸಿದ ಯಡಿಯೂರಪ್ಪ, ಕೆಜೆಪಿ ಕುರಿತ ಹಳೆಯ ವಿಷಯಗಳನ್ನು ಕೆದಕಬೇಡಿ ಎಂದು ಕಡ್ಡಿಮುರಿದಂತೆ ಹೇಳಿದರು. ಪಕ್ಷ ತೊರೆದ ಬೆಂಬಲಿಗರಿಗೆ ಒಳ್ಳೆಯದಾಗಲಿ ಎಂದು ಅವರು, ಸಿಎಂ ಸಿದ್ದರಾಮಯ್ಯ ಅವರ 10 ತಿಂಗಳ ಆಡಳಿತಕ್ಕೆ ಕೊಟ್ಟ ಅಂಕ ಶೂನ್ಯ. ಯಡಿಯೂರಪ್ಪ ಸಂದರ್ಶನದಲ್ಲಿ ಹೇಳಿದ್ದಿಷ್ಟು...
ಯಡಿಯೂರಪ್ಪ : 2009ರ ಚುನಾವಣೆಯಲ್ಲಿ ಸಂಸದರಾರಿ ಆಯ್ಕೆಯಾದ ನಂತರ ಬಿ.ವೈ.ರಾಘವೇಂದ್ರ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷದ ಹಿರಿಯ ನಾಯಕರು ನನಗೆ ಕಣಕ್ಕಿಳಿಯಬೇಕೆಂದು ಒತ್ತಾಯ ಮಾಡಿದ್ದರಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇದು ಪಕ್ಷದ ವರಿಷ್ಠ ನಾಯಕರು ತೆಗೆದುಕೊಂಡ ತೀರ್ಮಾನ.
ಪ್ರಶ್ನೆ : ಶಿವಮೊಗ್ಗದ ಚುನಾವಣೆ ಬಂಗಾರಪ್ಪ-ಯಡಿಯೂರಪ್ಪ ಕುಟುಂಬದ ಹೋರಾಟವೇ?
ಯಡಿಯೂರಪ್ಪ: ಖಂಡಿತ ಇಲ್ಲ. ನೋಡಿ, ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತರು. ಶಿಕಾರಿಪುರದಲ್ಲಿ ನನ್ನ ವಿರುದ್ಧ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು. ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಇದು ಕುಟುಂಬದ ಪ್ರತಿಷ್ಠೆ ಅಥವ ಹೋರಾಟವಲ್ಲ. [ಯಡಿಯೂರಪ್ಪ ಪ್ರಚಾರದ ಚಿತ್ರಗಳನ್ನು ನೋಡಿ]
ಪ್ರಶ್ನೆ : ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಅಧಿಕಾರವಿಲ್ಲ, ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂಬ ಮಾತುಗಳಿವೆ?
ಯಡಿಯೂರಪ್ಪ : ಯಾರು ಹೇಳಿದ್ದು ಇದನ್ನು, ನಾನು ಕೇಂದ್ರದಲ್ಲಿ ಸಚಿವನಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗುತ್ತಾರೆ. ನಾನು ಸಂಸದನಾಗಿ ಆಯ್ಕೆಯಾದ ನಂತರ ಪಕ್ಷ ನೀಡುವ ಕೆಲಸ ಮಾಡುತ್ತೇನೆ. ನನಗೆ ಅಧಿಕಾರದ ದಾಹ ಇಲ್ಲ. ಅಟಲ್ ಬಿಹಾರಿ ವಾಜಪೇಯಿ ಕೇಂದ್ರ ಸಚಿವರಾಗಿ ಎಂದು ಹೇಳಿದ್ದರು. ಆದರೆ, ನಾನು ನಿರಾಕರಿಸಿದ್ದೆ.