ಗಾಲಿ ರೆಡ್ಡಿ ಆಪ್ತ, ಸಿಬಿಐ ನಿರ್ದೇಶಕರ ಭೇಟಿ ಏಕೆ?
ನವದೆಹಲಿ, ಸೆ.15: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕಾಲದೂಡುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತ ವಕೀಲರೊಬ್ಬರು ಸಿಬಿಐ ನಿರ್ದೇಶಕರನ್ನು ಭೇಟಿ ಮಾಡಿದ್ದು ಈಗ ಚರ್ಚಾಸ್ಪದ ವಿಷಯವಾಗಿದೆ.
ಸಿಬಿಐ ಬಂಧನದಲ್ಲಿರುವ ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಮಾಜಿ ವಕೀಲ ರಾಘವಾಚಾರ್ಯುಲು ಅವರು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾರನ್ನು ಕಳೆದ 54 ಬಾರಿ ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಈ ವಿಷಯವನ್ನು ರಂಜಿತ್ ಸಿನ್ಹಾ ಅವರ ಮನೆಯ ಸಂದರ್ಶಕರ ಪುಸ್ತಕವೇ ಸಾರುತ್ತಿದೆ. [ಗಾಲಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು]
2ಜಿ ಹಗರಣದ ಆರೋಪಿಗಳು, ಕಲ್ಲಿದ್ದಲು ಪ್ರಕರಣದ ಆರೋಪಿ ಉದ್ಯಮಿಗಳು ರಂಜಿತ್ ಸಿನ್ಹಾ ಅವರ ಮನೆಗೆ ಭೇಟಿ ನೀಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮ್ಮ ಮನೆಯ ಸಂದರ್ಶಕರ ಹಾಜರಾತಿ ಪುಸ್ತಕದ ವಿವರವನ್ನು ಕೋರ್ಟಿಗೆ ಸಿನ್ಹಾ ಸಲ್ಲಿಸಿದ್ದರು. ಇದರಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಪರ ಹಿಂದೊಮ್ಮೆ ವಾದಿಸಿದ್ದ ಆಪ್ತ ವಕೀಲ ರಾಘವಾಚಾರ್ಯುಲು ಅವರ ಹೆಸರು ಎದ್ದು ಕಾಣಿಸಿದೆ.
ಕಲ್ಲಿದ್ದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೂಡ ಸಿನ್ಹಾ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ರೆಡ್ಡಿ ಪರ ವಕೀಲರು ಅವರನ್ನು ಇಷ್ಟೊಂದು ಬಾರಿ ಏಕೆ ಭೇಟಿ ಮಾಡಿದ್ದರು ಎಂಬುದು ಅನುಮಾನಗಳಿಗೆ ಕಾರಣವಾಗಿದೆ.
ರಾಘವಾಚಾರ್ಯುಲು ಪ್ರತಿಕ್ರಿಯೆ ಏನು?
ರಂಜಿತ್ ಸಿನ್ಹಾ ಅವರ ಮನೆಗೆ ಪದೇಪದೇ ಹೋಗುತ್ತಿದ್ದ ವಿಚಾರವನ್ನು ಸ್ವತಃ ರಾಘವಾಚಾರ್ಯುಲು ಅವರೇ ಖಚಿತಪಡಿಸಿದ್ದಾರೆ. ರಂಜಿತ್ ಸಿನ್ಹಾ ಅವರ ಕುಟುಂಬಕ್ಕೆ ನಾನು ಸ್ನೇಹಿತ. ಅವರ ಪತ್ನಿ ಹಾಗೂ ಮಗಳು ನನ್ನ ಅಧ್ಯಾತ್ಮಿಕ ಶಿಷ್ಯಂದಿರು.
ಸಿನ್ಹಾ ಅವರ ಪುತ್ರ ರುದ್ರಾಕ್ಷ ಸಿನ್ಹಾ ನನ್ನ ಬಳಿಯೇ ಕೆಲಸ ಮಾಡುತ್ತಿದ್ದರು. ಅವರಿಗೆ ಎನ್ಎಂಡಿಸಿಯಲ್ಲಿ ಸಹಾಯಕ ಕಾನೂನು ವ್ಯವಸ್ಥಾಪಕ ಹುದ್ದೆ ಕೊಡಿಸುವಲ್ಲೂ ನೆರವಾಗಿದ್ದೇನೆ. ಹಲವಾರು ಬಾರಿ ನಾನು ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ನನ್ನ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಡಿ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟಿನಲ್ಲಿ ವಿಚಾರಣೆ
2ಜಿ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಆರೋಪಿಗಳನ್ನು ಸಿನ್ಹಾ ತಮ್ಮ ನಿವಾಸದಲ್ಲಿ ಹಲವು ಬಾರಿ ಭೇಟಿಯಾಗಿದ್ದರು ಎಂಬ ದಾವೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಒಳಪಡುತ್ತಿರುವ ಸಮಯದಲ್ಲಿಯೇ ರಾಘವಾಚಾರ್ಯುಲು ಭೇಟಿ ಬಹಿರಂಗವಾಗಿರುವುದು ಮಹತ್ವದೆನಿಸಿದೆ.
ಈ ಎಲ್ಲಾ ಪ್ರಕರಣದಲ್ಲಿ ತಮ್ಮ ಪ್ರಭಾವ ಬೀರಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ರಂಜಿತ್ ಸಿನ್ಹಾ ವಿರುದ್ಧ ಎನ್ ಜಿಒವೊಂದು ದೂರು ದಾಖಲಿಸಿದೆ.ರಾಘವಾಚಾರ್ಯುಲು ಭೇಟಿಗೆ ಇನ್ನಷ್ಟು ಪುರಾವೆ ಸಿಕ್ಕಿದೆ
ಸಿನ್ಹಾ ಅವರ ಮನೆಯ ಕಾವಲಿಗಿದ್ದ ಪೊಲೀಸರು ರಾಘವಾಚಾರ್ಯುಲು ಅವರ ಹೆಸರು ಉದ್ದವಿದ್ದ ಕಾರಣಕ್ಕೆ 'ರಾಘವನ್' ಎಂದಷ್ಟೇ ನಮೂದಿಸಿದ್ದರು. ಸಿನ್ಹಾ ಅವರ ಮನೆ ಕಾವಲಿನ ಸಿಬ್ಬಂದಿ 'ರಾಘವನ್' ಹೆಸರಿನ ಮುಂದೆ ಅವರು ಬರುತ್ತಿದ್ದ ಕಾರಿನ ನೋಂದಣಿ ಸಂಖ್ಯೆಯನ್ನೂ ಬರೆದಿದ್ದರು. ಟಯೋಟಾ ಇನ್ನೋವಾ ಕಾರಿನಲ್ಲಿ 'ಎಪಿ-09-ಸಿಜಿ-1007' ಬರುತ್ತಿದ್ದರು. ಅವರ ಭೇಟಿಯ ವಿವಾದಿತ ಅವಧಿಯಲ್ಲೇ ಹೈಕೋರ್ಟ್ನಲ್ಲಿ ಸಿಬಿಐನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕವಾಗಿದ್ದರು ಎಂದು ತಿಳಿದು ಬಂದಿದೆ.
ರೆಡ್ಡಿ ಜಾಮೀನಿಗೆ ಡೀಲ್ ನಡೆದಿದ್ದು ಗೊತ್ತಲ್ಲ
ಈ ಹಿಂದೆ ಜನಾರ್ದನ ರೆಡ್ಡಿ ಜಾಮೀನಿಗೆ ರೂ. 20 ಕೋಟಿಗೆ ಒಪ್ಪಂದವಾಗಿತ್ತು ಎಂಬ ಸತ್ಯವನ್ನು ಅವರ ಸೋದರ ಸೋಮಶೇಖರ ರೆಡ್ಡಿ ಅವರೇ ಬಾಯ್ಬಿಟ್ಟಿದ್ದರು.
ರಿಯಲ್ಎಸ್ಟೇಟ್ ಉದ್ಯಮಿ ಯಾದಗಿರಿರಾವ್ ಅವರ ಮೂಲಕ ಪರಿಚತರಾದ ನ್ಯಾಯಾಧೀಶ ಟಿ.ವಿ. ಚಲಪತಿರಾವ್ ಅವರು ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರ ಮೇಲೆ ಪ್ರಭಾವ ಬೀರಿ ಜಾಮೀನು ಕೊಡಿಸುವ ಡೀಲ್ ಆಗಿತ್ತು.
ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಜಾಮೀನು ಕೊಡಿಸಿದ್ದಾಗಿ ಯಾದಗಿರಿರಾವ್ ಹೇಳಿದ್ದನ್ನು ನಂಬಿಕೊಂಡು ಪಟ್ಟಾಭಿರಾಮರಾವ್ಗೆ ರೂ. 5 ಕೋಟಿ, ಚಲಪತಿರಾವ್ಗೆ ರೂ. 5 ಕೋಟಿ, ರೂ. ತಮಗೆ 5 ಕೋಟಿ, ನ್ಯಾಯಾಲಯದ ಖರ್ಚಿಗೆ ರೂ. 5 ಕೋಟಿ ಹಣ ಕೊಡಲು ಒಪ್ಪಂದ ಮಾಡಿಕೊಂಡಿದ್ದೆವು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದರು.
ಗಾಲಿ ರೆಡ್ಡಿಗೆ ಇನ್ನೂ ಜೈಲೇ ಗಟ್ಟಿ
ಎಎಂಸಿ (ಅಸೋಸಿಯೇಟೆಡ್ ಮೈನಿಂಗ್ ಕಂಪನಿ) ಹಾಗೂ ಡೆಕ್ಕನ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಇತ್ತೀಚೆಗೆ ಶುಭ ಸುದ್ದಿ ಸಿಕ್ಕಿತ್ತು.
ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಈ ಹಿಂದೆ ಓಎಂಸಿ ಪ್ರಕರಣದಲ್ಲಿ ಗಾಲಿ ರೆಡ್ಡಿ ಪಡೆದಿದ್ದ ಜಾಮೀನನ್ನು ನಾಂಪಲ್ಲಿ ಸಿಬಿಐ ಕೋರ್ಟ್ ಆದೇಶ ನೀಡಿತ್ತು. ಒಟ್ಟಾರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರೂ ಚಂಚಲಗುಡ ಜೈಲು ಬಾಗಿಲು ರೆಡ್ಡಿಗಾಗಿ ಸದಾ ತೆರೆದಿರುತ್ತದೆ. ಜಾಮೀನು ಪಡೆದರೂ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ರೆಡ್ಡಿ ಅವರದ್ದಾಗಿದೆ.[ವಿವರ ಇಲ್ಲಿ ಓದಿ]
ರಾಘವಾಚಾರ್ಯುಲು ಸ್ಪಷ್ಟಪಡಿಸಿದ್ದಾರೆ
ಜನಾರ್ದನರೆಡ್ಡಿಗೆ ಅನ್ಯಾಯವಾಗಿದ್ದರೆ ಕಾನೂನು ಮೂಲಕ ಹೋರಾಟ ನಡೆಸಿ ನ್ಯಾಯ ಒದಗಿಸಲಾಗುವುದು. ಈಗಾಗಲೇ ಅವರ ಮೇಲೆ ದಾಖಲಾಗಿರುವ ಪ್ರಕರಣಗಳಿಗೆ ನ್ಯಾಯಾಲಯ ತಡೆಯಾಜ್ಞೆ ಮತ್ತು ಜಾಮೀನು ನೀಡಿದೆ. ವಿವಾದವು ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಾಘವಾಚಾರ್ಯುಲು ಸ್ಪಷ್ಟಪಡಿಸಿದ್ದಾರೆ.