ಗೃಹ ಖಾತೆ ಕಡತಗಳು ಬಿಚ್ಚಿಟ್ಟ ಇತಿಹಾಸ ತುಣುಕುಗಳು
ನವದೆಹಲಿ, ಜೂನ್ 24: ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದಲ್ಲಿ ಖಡಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರವು ಮೊದಲು ತನ್ನ 'ಗೃಹ'ವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಅಂದರೆ ಗೃಹ ಸಚಿವಾಲಯವು ತನ್ನ ಕಾಲಗರ್ಭದಲ್ಲಿ ಅಡಗಿಸಿಟ್ಟುಕೊಂಡು ಧೂಳುತಿನ್ನುತ್ತಿದ್ದ ಕಡತಗಳಿಗೆ ಮೋಕ್ಷ ಕಲ್ಪಿಸುತ್ತಿದೆ.
ಈ ಕಡತಯಜ್ಞ ಕಾರ್ಯದಿಂದ ಭೂತಕಾಲದ ಕೆಲ ಕುತೂಹಲಕಾರಿ ಸತ್ಯಗಳು ಹೊರಬಿದ್ದಿವೆ. ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ಬೇರೆ ಇಲಾಖೆಗಳಿಗೂ ಮಾದರಿಯಾಗುವಂತೆ ತಮ್ಮ ಸಚಿವಾಲಯದ ಅಧಿಕಾರಿಗಳ ಸಹಯೋಗದೊಂದಿಗೆ ಸುಮಾರು ಒಂದೂವರೆ ಲಕ್ಷ ಕಡತಗಳನ್ನು ಪರೀಕ್ಷಿಸಿ, ವಿಲೇವಾರಿ ಮಾಡಿದ್ದಾರೆ.
ನಾರ್ತ್ ಬ್ಲಾಕ್ ಕಚೇರಿಯಲ್ಲಿರುವ ಅಲ್ಮೇರಾಗಳಲ್ಲಿ ಕಟ್ಟುಬಿಚ್ಚದೆ ಅಡಗಿಕುಳಿತಿದ್ದ ಈ ಕಡತಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳು ಕೆಲ ಕುತೂಹಲಕಾರಿ ಚಾರಿತ್ರಿಕ ಅಂಶಗಳ ಮೇಲೂ ಬೆಳಕು ಚೆಲ್ಲಿದ್ದಾರೆ.
ಭಾರತದ ಮೊದಲ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ತಮ್ಮ ದೇಶಕ್ಕೆ ಮರಳುವಾಗ ಅವರಿಗೆ ಪ್ರವಾಸ ಭತ್ಯೆ ಮತ್ತು ದೈನಂದಿನ ಭತ್ಯೆಯಾಗಿ 64 ಸಾವಿರ ರೂ ಕೊಡಮಾಡಲಾಗಿತ್ತು. ಇಂದಿನ ದಿನಮಾನದಲ್ಲಿ ಅದು ಅನೇಕ ಕೋಟಿ ರೂ ಮೊತ್ತದ್ದಾಗುತ್ತದೆ.
ಕಡತಗಳನ್ನು ಕೆದಕಿದಾಗ ಬಹಿರಂಗವಾದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಪಿಂಚಣಿ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅದನ್ನು ಕೊನೆಗೆ ಸರಕಾರದ ವಿಪತ್ತು ನಿರ್ವಹಣಾ ನಿಧಿಗೆ ವರ್ಗಾಯಿಸಲಾಗಿತ್ತು.
ಅದೇ ರೀತಿ, ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮಗೆ ಸಂಬಳ ಬೇಡವೆಂದು ಅದನ್ನು ವಿಪತ್ತು ನಿರ್ವಹಣಾ ನಿಧಿಗೆ ಅರ್ಪಿಸುತ್ತಾರೆ.