ಬಿಸಿಯೂಟದ ಜೊತೆ ಮಕ್ಕಳಿಗೆ ತಣ್ಣಗಿನ ಮಜ್ಜಿಗೆ!
ನವದೆಹಲಿ, ಜೂ. 11 : ದೇಶದ ಸರಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪೌಷ್ಟಿಕತೆಯಿಂದ ಕೂಡಿದ ಬಿಸಿಯೂಟದ ಜೊತೆಗೆ, ಸ್ವಾಸ್ಥ್ಯ ಹೆಚ್ಚಿಸಲೆಂದು ತಣ್ಣಗಿನ ಮಜ್ಜಿಗೆಯನ್ನೂ ನೀಡಬೇಕೆಂಬ ಪ್ರಸ್ತಾವನೆಯನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಮುಂದಿಟ್ಟಿದ್ದಾರೆ.
ಮಕ್ಕಳಲ್ಲಿ ಬರುತ್ತಿರುವ ಆಮಶಂಕೆ ರೋಗವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎಂದು ಅವರು ಹೇಳಿದ್ದು, ಬಿಸಿಯೂಟದ ಜೊತೆಗೆ ಕಡ್ಡಾಯವಾಗಿ ತಣ್ಣಗಿನ ಮಜ್ಜಿಗೆಯನ್ನೂ ಮಕ್ಕಳಿಗೆ ನೀಡಿದರೆ ಸರಕಾರದ ಬೊಕ್ಕಸಕ್ಕೆ ತಗಲುವ ಖರ್ಚುವೆಚ್ಚವನ್ನು ಲೆಕ್ಕ ಹಾಕಬೇಕೆಂದು ಶಿಕ್ಷಣ ಇಲಾಖೆಗೆ ಆದೇಶ ನೀಡಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಮಜ್ಜಿಗೆಯನ್ನು ನೀಡುವುದರ ಜೊತೆ ಇನ್ನೂ ಎರಡು ಮಹತ್ವಾಕಾಂಕ್ಷೆಯ ಯೋಜನೆಯನ್ನು ಸ್ಮೃತಿ ಅವರು ಹಾಕಿಕೊಂಡಿದ್ದಾರೆ. ಅವೇನೆಂದರೆ, ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಮಾದರಿ ಶಾಲೆಯನ್ನು ತೆರೆಯುವುದು ಮತ್ತು ಶನಿವಾರದಂದು ಕ್ರೀಡಾದಿನವನ್ನಾಗಿ ಘೋಷಿಸುವುದು.
ದೇಶದಾದ್ಯಂತ 12.65 ಲಕ್ಷ ಸರಕಾರಿ ಶಾಲೆಗಳಲ್ಲಿ 12 ಕೋಟಿಗೂ ಅಧಿಕ ಬಡ ಮಕ್ಕಳು ಬಿಸಿಯೂಟದ ಫಲಾನುಭವಿಯಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶದಿಂದ ಮತ್ತು ಬಡವಿದ್ಯಾರ್ಥಿಗಳಿಗೆ ಪೌಷ್ಟಿಕವಾದ ಆಹಾರ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸಂಸ್ಥೆಗಳು ಈ ಯೋಜನೆಗೆ ಆಧಾರವಾಗಿ ನಿಂತಿವೆ.
ಜಿಲ್ಲಾ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ಆರಂಭಿಸಬೇಕೆಂಬ ಯೋಜನೆಯನ್ನು ಯುಪಿಎ ಸರಕಾರ ಹಾಕಿಕೊಂಡಿತ್ತು. ಆದರೆ, ಅದು ಜಾರಿಗೆ ಬರಲೇ ಇಲ್ಲ. ಈಗ, ಸ್ಮೃತಿ ಇರಾನಿ ಈ ಯೋಜನೆಗೆ ಮತ್ತೆ ಚಾಲನೆ ನೀಡಿದ್ದಾರೆ. ಈ ಶಾಲೆ ಆರಂಭಿಸಲು ತಗಲುವ ವೆಚ್ಚದ ಲೆಕ್ಕ ಹಾಕಲು ನವೋದಯ ವಿದ್ಯಾಲಯ ಸಂಘಟನೆಗೆ ವಹಿಸಲಾಗಿದೆ.
ಕರ್ನಾಟಕದಲ್ಲಿ 2001-02ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸಲಾಯಿತು. 1ರಿಂದ 8ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿರುವ ಊಟಕ್ಕಾಗಿ ಕೇಂದ್ರ ಸರಕಾರ ಹಣ ಒದಗಿಸುತ್ತಿದ್ದರೆ, 9 ಮತ್ತು 10ನೇ ತರಗತಿಯ ಮಕ್ಕಳಿಗೆ ನೀಡುತ್ತಿರುವ ಊಟದ ವೆಚ್ಚವನ್ನು ಸರಕಾರಿ ಶಾಲೆಗಳೇ ಭರಿಸುತ್ತಿವೆ.
ವಾರದಲ್ಲಿ ಬುಧವಾರ ಹೊರತುಪಡಿಸಿ ಐದು ದಿನ ಬಿಸಿಯೂಟವನ್ನು ಕರ್ನಾಟಕದಲ್ಲಿ ಬಡಿಸಲಾಗುತ್ತಿದೆ. ಸೋಮವಾರ, ಮಂಗಳವಾರ, ಗುರುವಾರ ಅನ್ನ ಮತ್ತು ಸಾಂಬಾರ್ ನೀಡಲಾಗುತ್ತಿದ್ದರೆ, ಶುಕ್ರವಾರ ಬಿಸಿಬೇಳೆ ಭಾತ್ ಮತ್ತು ಶನಿವಾರ ತರಕಾರಿಯಿಂದ ಕೂಡಿದ ಉಪ್ಪಿಟ್ಟು ನೀಡಲಾಗುತ್ತಿದೆ. [ಮಾಹಿತಿ]
ಬಿಸಿಯೂಟದ ಹೊರತಾಗಿ ಪ್ರತಿ ಆರು ತಿಂಗಳಿಗೊಮ್ಮೆ ಎರಡು ವಿಟಮಿನ್ ಎ ಮಾತ್ರೆಯನ್ನು, ಪ್ರತಿವರ್ಷ 36 ವಾರಗಳ ಕಾಲ ಪ್ರತಿ ವಾರ 3 ಕಬ್ಬಿಣ ಮತ್ತು ಫಾಲಿಕ್ ಆಸಿಡ್ ಇರುವ ಮಾತ್ರೆ, ಪ್ರತಿ ಆರು ತಿಂಗಳಿಗೊಮ್ಮೆ ಹೊಟ್ಟೆಯಲ್ಲಿನ ಹುಳ ನಿವಾರಿಸುವ ಅಲ್ಬೆಂಡಜೋಲ್ ಮಾತ್ರೆಯನ್ನು ನೀಡಲಾಗುತ್ತಿದೆ.