ವಾದ್ರಾಗೂ ಇನ್ನು ಸಾಮಾನ್ಯರಂತೆ ಭದ್ರತಾ ತಪಾಸಣೆ
ನವದೆಹಲಿ, ಮೇ 22: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಇನ್ಮುಂದೆ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯರಂತೆ ಭದ್ರತಾ ತಪಾಸಣೆಗೆ ಒಳಪಡಬೇಕಾಗುತ್ತದೆ. ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸಬಾರದೆಂಬ ನಿಯಮವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೆ ತಂದಿತ್ತು.
ಆದರೆ ಕಾಂಗ್ರೆಸ್ ಕೊಡಮಾಡಿದ್ದ ಈ ವಿಶೇಷ ಸೌಲಭ್ಯವನ್ನು ಸದ್ಯದಲ್ಲೇ ಅಧಿಕಾರವಹಿಸಿಕೊಳ್ಳಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ವಾಪಸ್ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳ ಪ್ರಕಾರ ಹೊಸ ಸರಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆಯಿದೆ.
ರಾಬರ್ಟ್ ವಾದ್ರಾ ಅವರನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸಬಾರದೆಂಬ ನಿಯಮದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ರಾಬರ್ಟ್ ವಾದ್ರಾಗೆ ಈ ವಿಶೇಷ ಸೌಲಭ್ಯ ನೀಡರುವುದು ಸರ್ವತಾ ಸಾಧುವಲ್ಲವೆಂದು ಹಿರಿಯ ಅಧಿಕಾರಿಗಳೇ ಅನೇಕ ಬಾರಿ ಹೇಳಿದ್ದಾರೆ.
ಈ ಸಂಬಂಧ ಯಾವ ಆಧಾರದ ಮೇಲೆ ವಾದ್ರಾಗೆ ಈ ವೀಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾಗಿದ್ದ ಯಾವುದೇ ಅರ್ಜಿಗೂ ಹಿಂದಿನ ಸರಕಾರ ಉತ್ತರ ನೀಡಿರಲಿಲ್ಲ.