ಕಾಂಗ್ರೆಸ್ ಕಾರ್ಯಕಾರಣಿಗೆ ಸಾಮೂಹಿಕ ರಾಜೀನಾಮೆ?
ನವದೆಹಲಿ, ಮೇ 19 : ಹದಿನಾರನೇ ಲೋಕಸಭೆ ಚುನಾವಣೆಯಲ್ಲಾದ ಹೀನಾಯ ಸೋಲಿಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನಷ್ಟೇ ಏಕೆ ಹೊಣೆಗಾರರನ್ನಾಗಿ ಮಾಡಬೇಕು? ಇದಕ್ಕೆ ನಾವೆಲ್ಲ ಹೊಣೆಗಾರರು ಎಂಬ ತೀರ್ಮಾನಕ್ಕೆ ಬಂದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
1999ರ ಮಹಾಚುನಾವಣೆಯಲ್ಲಿ ಏಕಾಂಗಿಯಾಗಿ 209 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2014ರ ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನು ಮಾತ್ರ ಗೆಲ್ಲಲು ಶಕ್ಯವಾಗಿದ್ದು, ಮುಖ ಎತ್ತಲಾರದಂತೆ ಹೀನಾಯ ಸೋಲನ್ನು ಅನುಭವಿಸಿದೆ. ಸೋಲನ್ನು ಒಪ್ಪಿಕೊಂಡರೂ, ಗೆದ್ದವರನ್ನು ಅಭಿನಂದಿಸಲು ನಿರಾಕರಿಸಿರುವ ಕಾಂಗ್ರೆಸ್ ನಾಯಕರ ಧೋರಣೆ ಟೀಕೆಗೆ ಒಳಗಾಗಿದೆ. [ಇವರಿಬ್ಬರಿಗೇನಾಗಿತ್ತು?]
ಸೋಲಿನ ಹೊಣೆ ಹೊತ್ತು ಆತ್ಮವಿಮರ್ಶೆಗೆ ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಸುದ್ದಿಯಾಗಿತ್ತು. ಇದನ್ನು ಕಾರ್ಯಕಾರಣಿ ಸದಸ್ಯರು ಸಾರಾಸಗಟಾಗಿ ನಿರಾಕರಿಸಿ, ರಾಜೀನಾಮೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಆದರೆ, ಇದೀಗ ಬಂದಿರುವ ಸುದ್ದಿಯೇನೆಂದರೆ, ಸೋಮವಾರ ಸಂಜೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಎಲ್ಲ 34 ಸದಸ್ಯರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ ಎಂಬುದು. ಇದರ ನಿಖರತೆ ಸಿಡಬ್ಲ್ಯೂಸಿ ಸಭೆ ನಡೆದ ನಂತರವಷ್ಟೇ ತಿಳಿದುಬರಲಿದೆ. [ಸೋನಿಯಾ ರಾಹುಲ್ ರಾಜೀನಾಮೆ?]
"ಸೋನಿಯಾ ಮತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಸಂಘಟಿತ ಸೋಲು. ಇದಕ್ಕೆ ನಾವೆಲ್ಲ ಜವಾಬ್ದಾರರು. ನಾನು ಕೂಡ ಅಷ್ಟೇ ಜವಾಬ್ದಾರ" ಎಂದು ಕಾಂಗ್ರೆಸ್ ಪಕ್ಷದ ನಾಯಕ ಮತ್ತು ವಕ್ತಾರ ಮನೀಷ್ ತಿವಾರಿ ಅವರು ಹೇಳಿದ್ದಾರೆ.
"ರಾಹುಲ್ ಗಾಂಧಿ ಅವರನ್ನು ಮಾತ್ರ ಮೌಲ್ಯಮಾಪನ ಮಾಡುವುದು ಸರಿಯಲ್ಲ. ಇನ್ನು ಆರೇ ತಿಂಗಳಲ್ಲಿ ಮತ್ತೆ ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ ನಾವೆಲ್ಲ ಸೇರಿ ಕಾರ್ಯತಂತ್ರ ರೂಪಿಸಬೇಕು. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕು" ಎಂದು ರೇಣುಕಾ ಚೌಧರಿ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
ಈ ನಡುವೆ, ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿರುವ ಪ್ರಿಯಾಂಕಾ ಗಾಂಧಿ ವಧ್ರಾ ಅವರನ್ನು ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಮಾಡಬೇಕು ಮತ್ತು ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ವಾಕ್ಚಾತುರ್ಯದಲ್ಲಿ ರಾಹುಲ್ ಗಿಂತ ಪ್ರಬಲವಾಗಿರುವ ಪ್ರಿಯಾಂಕಾ ತನ್ನ ಅಣ್ಣನ ಬೆಳವಣಿಗೆಗೆ ಅಡ್ಡಬರುವ ಸಾಧ್ಯತೆಗಳು ತೀರ ಕಡಿಮೆ ಎನ್ನಲಾಗಿದೆ.