ಇನ್ನು ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್ ಮಾತ್ರ?
ಬುಧವಾರ ಕಿರೀಟ್ ಪಾರೀಖ್ ಸಮಿತಿ ಡೀಸೆಲ್, ಪೆಟ್ರೋಲ್, ಎಲ್ ಪಿಜಿ ಮತ್ತು ಸೀಮೆಎಣ್ಣೆ ಬೆಲೆ ಏರಿಕೆ ಮಾಡುವ ಕುರಿತ ತನ್ನ ವರದಿಯನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರಿಗೆ ನೀಡಿದೆ. ವರದಿಯಲ್ಲಿ ಜನರ ಜೇಬಿಗೆ ಕತ್ತರಿ ಹಾಕುವಂತಹ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.
ವೀರಪ್ಪ ಮೊಯ್ಲಿ ಅವರಿಗೆ ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಪಾರೀಖ್, ತಮ್ಮ ನೇತೃತ್ವದ ಸಮಿತಿಯ ಮಾಡಿರುವ ಬೆಲೆ ಏರಿಕೆ ಶಿಫಾರಸುಗಳ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು. ಸಮಿತಿ ಸಬ್ಸಿಡಿ ಯುಕ್ತ ಅಡುಗೆ ಅನಿಲ ಸಿಲಿಂಡರ್ಗಳ ಈಗಿನ ವಾರ್ಷಿಕ 9ರ ಕೋಟಾವನ್ನು 6ಕ್ಕೆ ಇಳಿಸಲು ಶಿಫಾರಸು ಮಾಡಿದೆ ಎಂದು ಹೇಳಿದರು.
ಡೀಸೆಲ್ ದರವನ್ನು ಲೀಟರ್ಗೆ ತಕ್ಷಣದಿಂದ 5 ರೂ., ಸೀಮೆ ಎಣ್ಣೆ ದರವನ್ನು ಲೀಟರ್ಗೆ 4 ರೂ., ಎಲ್ಪಿಜಿ ಸಿಲಿಂಡರ್ಗಳ ದರವನ್ನು 250 ರೂ.ಗಳಷ್ಟು ಹೆಚ್ಚಿಲಸು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದರು. ಅಡುಗೆ ಅನಿಲ ಮತ್ತು ಡೀಸೆಲ್ ದರಗಳನ್ನು ನಿಗದಿಗೊಳಿಸುವ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ತಜ್ಞರಿಗೆ ವಹಿಸುವಂತೆಯೂ ಸಮಿತಿ ಹೇಳಿದೆ.
ಕೇಂದ್ರ ಸರ್ಕಾರದ ಮೇಲಿನ ಸಬ್ಸಿಡಿಯ ಹೊರೆ ಕಡಿಮೆ ಮಾಡಲು ಕೂಡಲೆ ಡೀಸೆಲ್ ಮತ್ತು ಎಲ್ಪಿಜಿ ಸಿಲಂಡರ್ಗಳ ಬೆಲೆ ಏರಿಕೆ ಮಾಡುವಂತೆ ಸಮಿತಿ ಶಿಫಾರಸ್ಸಿನಲ್ಲಿ ತಿಳಿಸಿದೆ. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹತ್ತಿರವಿರುವುದರಿಂದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತದೆಯೇ ಎಂದು ಕಾದು ನೋಡಬೇಕು.(ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ)