ಭ್ರಷ್ಟಾಚಾರ: ರಾಹುಲ್- ಸೋನಿಯಾಗೆ ಕೋರ್ಟ್ ಬುಲಾವ್
ನವದೆಹಲಿ, ಜೂನ್ 26- ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ದೆಹಲಿಯ ಪಟಿಯಾಲ ಕೋರ್ಟ್ ಗುರುವಾರ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣ ಸಂಬಂಧ ಆಗಸ್ಟ್ 7 ರೊಳಗೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಸೂಚಿಸಿದೆ.
'ನ್ಯಾಷನಲ್ ಹೆರಾಲ್ಡ್' ಪತ್ರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸುಬ್ರಮಣ್ಯ ಸ್ವಾಮಿ ಅವರು ದೂರು ದಾಖಲಿಸಿದ್ದು, ತತ್ಸಂಬಂಧ ಅಮ್ಮ-ಮಗ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಕೋರ್ಟ್ ಬುಲಾವ್ ನೀಡಿದೆ. ಇವರಿಬ್ಬರ ಜತೆಗೆ ಮೊತಿಲಾಲ್ ವೊರಾ ಮತ್ತು ಸ್ಯಾಮ್ ಪಿತ್ರೋಡ ಸೇರಿದಂತೆ ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ಇತರೆ ಐವರು ಕಾಂಗ್ರೆಸ್ ನಾಯಕರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ಆಸ್ತಿ ಕಬಳಿಸಲು ಅಮ್ಮ-ಮಗ ಯತ್ನಿಸಿದ್ದಾರೆ ಎಂಬುದು ಆರೋಪದ ತಿರುಳು. ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸೇರಿದ ಸುಮಾರು 1,600 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಸುಬ್ರಮಣ್ಯ ಸ್ವಾಮಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾ. ಗೋಮತಿ ಮನೋಕಾ ಅವರು, ಪ್ರಮುಖ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಪತ್ತೆಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಲ್ಲಾ ಆರೋಪಿಗಳಿಗೂ ಕೋರ್ಟ್ ಸೂಚಿಸುತ್ತದೆ ಎಂದು ಆದೇಶಿಸಿದ್ದಾರೆ.
ಸೋನಿಯಾ ಮತ್ತು ರಾಹುಲ್ 'ಯಂಗ್ ಇಂಡಿಯನ್' ಹೆಸರಿನ ಖಾಸಗಿ ಕಂಪನಿಯಲ್ಲಿ ತಲಾ ಶೇ. 38ರಷ್ಟು ಷೇರು ಹೊಂದಿದ್ದಾರೆ. ಆ ಕಂಪನಿಯ ಮೂಲಕ ಹೆರಾಲ್ಡ್ ಮಾತೃ ಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್ ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆಯೂ ಆಗಿದೆ' ಎಂದು ಸ್ವಾಮಿ ದೂರಿದ್ದಾರೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯು ನ್ಯಾಷನಲ್ ಹೆರಾಲ್ಡ್ ಮತ್ತು ಖ್ವಾಮಿ ಅವಾಜ್ ನ್ಯೂಸ್ ಪೇಪರ್ ಸೇರಿದಂತೆ ದಿಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಅನೇಕ ಬೆಲೆಬಾಳುವ ರಿಯಲ್ ಎಸ್ಟೇಟ್ ಆಸ್ತಿಯನ್ನು ಹೊಂದಿದೆ.