ವಿವಾದ ಸೃಷ್ಟಿಸಿರುವ ಪ್ರತಾಪ್, ಉಗ್ರ ಹಫೀಜ್ ಭೇಟಿ
ನವದೆಹಲಿ, ಜು. 14 : ಯೋಗಗುರು ಬಾಬಾ ರಾಮದೇವ್ ಅವರ ನಿಕಟವರ್ತಿ, ಹವ್ಯಾಸಿ ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು 2008 ನವೆಂಬರ್ 11ರಂದು ನಡೆದ ಮುಂಬೈ ದಾಳಿಯ ರೂವಾರಿ, ಜಮಾತ್-ಉದ್-ದವಾ ಉಗ್ರ ಸಂಘಟನೆಯ ನಾಯಕ ಹಫೀಜ್ ಮೊಹಮ್ಮದ್ ಸಯೀದ್ ಅವರನ್ನು ಭೇಟಿಯಾಗಿರುವುದು ಭಾರೀ ವಿವಾದ ಸೃಷ್ಟಿಸಿದೆ.
ವೇದ್ ಪ್ರತಾಪ್ ವೈದಿಕ್ ಅವರೇ ತಾವು ಹಫೀಜ್ ಅವರನ್ನು ಜುಲೈ 2ರಂದು ಪಾಕಿಸ್ತಾನದ ಲಾಹೋರ್ ನಲ್ಲಿ ಭೇಟಿಯಾಗಿರುವುದಾಗಿ ಹೇಳಿದ್ದು, ಇಬ್ಬರೂ ಮಾತುಕತೆ ನಡೆಸುತ್ತಿರುವ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತಿ ಅಪಾಯಕಾರಿ ಮನುಷ್ಯ ಎಂದು ಹಫೀಜ್ ಹೇಳಿಕೆ ನೀಡಿದ್ದಾನೆ.
ಶಾಂತಿ ಸಂಶೋಧನಾ ಸಂಸ್ಥೆ ಆಹ್ವಾನದ ಮೇರೆಗೆ ನಿಯೋಗದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ವೇದ್ ಪ್ರತಾಪ್ ವೈದಿಕ್ ಅವರು ಹಫೀಜ್ ನನ್ನು ಭೇಟಿಯಾಗಿರುವುದು ಬಾಬಾ ರಾಮದೇವ್ ಅವರನ್ನು ಮಾತ್ರವಲ್ಲ, ಬಿಜೆಪಿ ಸರಕಾರವನ್ನೂ ಮುಜುಗರಕ್ಕೆ ಸಿಲುಕಿಸಿದೆ. ಪ್ರತಾಪ್ ಅವರು ಓರ್ವ ಪತ್ರಕರ್ತನಾಗಿ ಹಫೀಜ್ ಅವರನ್ನು ಭೇಟಿಯಾಗಿದ್ದಾರೆ ಎಂದು ಬಾಬಾ ರಾಮದೇವ್ ಈ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತ, ಅಮೆರಿಕ, ಯುನೈಟೆಡ್ ಕಿಂಗಡಂ, ಯುರೋಪ್ ಯೂನಿಯನ್, ರಷ್ಯಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಿಂದ ನಿಷೇಧಕ್ಕೊಳಗಾಗಿರುವ, ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯೊಡನೆ ಸಂಪರ್ಕ ಹೊಂದಿರುವ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ ಹಫೀಜ್ ಸಯೀದ್. ಈತನ ತಲೆಗೆ 10 ಮಿಲಿಯನ್ ಡಾಲರ್ ಬಹುಮಾನವನ್ನು ಅಮೆರಿಕ ಕಟ್ಟಿದೆ.
ಇಂಥ ಉಗ್ರನನ್ನು ವೇದ್ ಪ್ರತಾಪ್ ವೈದಿಕ್ ಅವರು ಭೇಟಿಯಾಗಿರುವುದು ತೀವ್ರ ಟೀಕೆಗೊಳಗಾಗಿದೆ. ಭಾರತದ ವಿರುದ್ಧ ಯುದ್ಧ ಸಾರಿರುವ ಇಂಥ ಉಗ್ರನನ್ನು ಭೇಟಿಯಾಗುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಈ ಭೇಟಿಯ ಕುರಿತು ಭಾರತೀಯ ಜನತಾ ಪಕ್ಷ ತನ್ನ ಸ್ಪಷ್ಟನೆ ನೀಡಬೇಕೆಂದು ದುಂಬಾಲು ಬಿದ್ದಿದೆ.
|
ವೈದಿಕ್, ಬಾಬಾ ರಾಮದೇವ್ ಇಬ್ಬರನ್ನೂ ಬಂಧಿಸಿ
ಪಾಕ್ ಉಗ್ರ ಹಫೀಜ್ ಸಯೀದ್ ನನ್ನು ಭೇಟಿಯಾದ ವೇದ್ ಪ್ರತಾಪ್ ವೈದಿಕ್ ಮತ್ತು ಅವರನ್ನು ಬೆಂಬಲಿಸಿದ ಬಾಬಾ ರಾಮದೇವ್ ಇಬ್ಬರನ್ನೂ ಬಂಧಿಸಿ.
|
ಉಮಾ ಭಾರತಿ ನೋ ಕಾಮೆಂಟ್ಸ್
ನಾನು ಬಿಜೆಪಿಯ ವಕ್ತಾರೆ ಅಲ್ಲದ್ದರಿಂದ ಈ ಭೇಟಿಯ ಕುರಿತು ನಾನೇನೂ ಕಾಮೆಂಟ್ ಮಾಡಲಾರೆ ಎಂದಿದ್ದಾರೆ ಬಿಜೆಪಿ ನಾಯಕಿ ಉಮಾ ಭಾರತಿ.
|
ಇಂಥ ವಿದ್ಯಮಾನ ಹಿಂದೆಂದೂ ನಡೆದಿಲ್ಲ
ಸರಕಾರಕ್ಕೆ ಹತ್ತಿರವಾಗಿರುವ ವ್ಯಕ್ತಿ ಭಯೋತ್ಪಾದಕನನ್ನು ಭೇಟಿಯಾದ ವಿದ್ಯಮಾನ ಹಿಂದೆಂದೂ ನಡೆದಿಲ್ಲ ಎಂದು ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಕಿಡಿಕಾರಿದ್ದಾರೆ.
|
ಇದರ ಹಿಂದಿರುವ ಉದ್ದೇಶವೇನು ಅರ್ಥವಾಗುತ್ತಿಲ್ಲ
ಹಫೀಜ್ ನಂಥ ಉಗ್ರನನ್ನು ವೇದ್ ಪ್ರತಾಪ್ ವೈದಿಕ್ ಭೇಟಿಯಾಗಿದ್ದರ ಹಿಂದಿರುವ ಉದ್ದೇಶವೇನು ಅರ್ಥವಾಗುತ್ತಿಲ್ಲ.