ಭ್ರಷ್ಟರ ವಿರುದ್ಧ ಪೊರಕೆ ಎತ್ತಿದ ಕೇಜ್ರಿವಾಲ್ 'ಹೀರೋ'!
ನವದೆಹಲಿ, ಡಿ. 8 : ದೆಹಲಿಯಲ್ಲಿ ಕಾಂಗ್ರೆಸ್ಸನ್ನು ಪೊರಕೆ ತೆಗೆದುಕೊಂಡು ಗುಡಿಸಿ ಹಾಕಿದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಕ್ಲೌಡ್ 9 ಮೇಲಿದ್ದಾರೆ. ಎಲ್ಲರ ನಿರೀಕ್ಷೆಗಳನ್ನು ತಿರುವುಮುರುವು ಮಾಡಿರುವ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಭ್ರಷ್ಟವಿರೋಧಿಗಳ ಮತ್ತು ಆಮ್ ಆದ್ಮಿ (ಸಾಮಾನ್ಯರ) ದೃಷ್ಟಿಯಲ್ಲಿ 'ಹೀರೋ' ಆಗಿ ಮೆರೆದಾಡುತ್ತಿದ್ದಾರೆ.
ಭಾರತೀಯ ಜನತಾ ಪಕ್ಷ 33 ಸ್ಥಾನಗಳನ್ನು ತನ್ನದಾಗಿಸಿಕೊಂಡು ಅತಿ ದೊಡ್ಡ ಪಕ್ಷ ಅನಿಸಿದ್ದರೆ, ಎಎಪಿ 27 ಸ್ಥಾನಗಳಲ್ಲಿ ಗೆದ್ದು 'ಪೊರಕೆ'ಯನ್ನು ಎತ್ತಿ ಹಿಡಿದಿದೆ. ಮೂರು ಸರಕಾರಗಳನ್ನು ರಚಿಸಿದ್ದ ಕಾಂಗ್ರೆಸ್ ಮಣ್ಣುಮುಕ್ಕಿದ್ದು ಕೇವಲ 8 ಸ್ಥಾನ ಮಾತ್ರ ಗಳಿಸಿದೆ. ಹಲವಾರು ಕಡೆಗಳಲ್ಲಿ ಪೊರಕೆಯನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಾರೆ. ಆದರೆ, ಎಎಪಿ ಪೊರಕೆಗೆ ಗೌರವ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ದೆಹಲಿಯಲ್ಲಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಧೂಳು ಕೂಡ ಉಳಿದಿಲ್ಲ. [ಪೊರಕೆ ಬೆಲೆ ದಿಢೀರ್ ಏರಿಕೆ]
ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್ ಅವರು, "ದೆಹಲಿಯಲ್ಲಿ ಯಾರು ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ಮುಖ್ಯವಲ್ಲ. ನಮ್ಮ ಗಮನವಿರುವುದು ದೇಶವನ್ನು ಹೇಗೆ ಮುನ್ನಡೆಸಬೇಕು ಎಂಬುದು" ಎಂದು ಹೇಳಿದ್ದು, "ಕೆಲ ಬಿಜೆಪಿ ನಾಯಕರು ನಮ್ಮ ಕೆಲ ನಾಯಕರನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾವು ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. [ಅರವಿಂದರನ್ನು ಆಶೀರ್ವದಿಸಿದ ಅಣ್ಣಾ ಹಜಾರೆ]
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು, 22 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಜಯವನ್ನು ಜನಸಾಮಾನ್ಯರಿಗೆ ಕೇಜ್ರಿವಾಲ್ ಅರ್ಪಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರೇ ಸಾಧಿಸಿರುವ ಜಯ ಇದಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಜಯದ ಹಿಂದೆ ಭ್ರಷ್ಟಾಚಾರವನ್ನು ವಿರೋಧಿಸುವ ಸಾವಿರಾರು ಜನರ ಕೈಯಿದೆ. ಕೆಲವರು ನಮ್ಮ ಪಕ್ಷಕ್ಕಾಗಿ ಕೆಲಸ ತೊರೆದು ಬಂದಿದ್ದಾರೆ. ಪಕ್ಷದ ಜಯಕ್ಕಾಗಿ ಬೆವರು ಸುರಿಸಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳು. ಈ ಸಮಯದಲ್ಲಿ ತಮ್ಮಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಬೇಕು ಎಂದು ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಸಂಜೆ ಹೇಳಿದರು.
ಶೀಲಾ ದೀಕ್ಷಿತ್ ವಿರುದ್ಧ ಯಾವುದೇ ವೈರತ್ವವಿಲ್ಲ. ನಮ್ಮ ಹೋರಾಟವೇನಿದ್ದರೂ ಭ್ರಷ್ಟಾಚಾರದ ವಿರುದ್ಧ ಮಾತ್ರ. ಇದು ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆ. ಇಡೀ ದೇಶದಾದ್ಯಂತ ಆಮ್ ಆದ್ಮಿ ಪಾರ್ಟಿ ಲೋಕಸಭೆಯಲ್ಲಿ ಸ್ಪರ್ಧಿಸಲಿದೆ ಎಂದು ಅವರು ಎಲ್ಲ ಪಕ್ಷಗಳಿಗೆ ಮುನ್ನೆಚ್ಚರಿಕೆ ನೀಡಿದರು.
ಈ ನಡುವೆ ಟ್ವಿಟ್ಟರಿನಲ್ಲಿ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಪ್ರಶಂಸೆಯ ಸುರಿಮಳೆ ಸುರಿಯುತ್ತಿದೆ. [ದೆಹಲಿ ಚುನಾವಣೆ ಫಲಿತಾಂಶ]
ಪೊರಕೆಗೆ ಗೌರವ ಸ್ಥಾನ ಕಲ್ಪಿಸಿದ ಅರವಿಂದ್
ಸಾಮಾಜಿಕ ಚಳವಳಿಗಾರ ಅಣ್ಣಾ ಹಜಾರೆ ಇಚ್ಛೆಯ ವಿರುದ್ಧ ಪಕ್ಷ ಸ್ಥಾಪಿಸಿದ ಅರವಿಂದ್ ಕೇಜ್ರಿವಾಲ್ ತಾವು ಮಾಡಿದ್ದು ಸರಿ ಎಂದು ಸಾಬೀತುಪಡಿಸಿದ್ದಾರೆ. ಎಎಪಿ ಗೆಲುವು ಅಣ್ಣಾ ಹಜಾರೆ ಅವರನ್ನು ಕೂಡ ಅಚ್ಚರಿ ಮೂಡಿಸಿದೆ.
ಜನರೇ ಪಕ್ಷವನ್ನು ಬದಲಿಸುತ್ತಾರೆ
ಹಣದುಬ್ಬರ ಮತ್ತು ಭ್ರಷ್ಟಾಚಾರದಿಂದಾಗಿ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ಪ್ರಾಮಾಣಿಕತೆಯ ಆಧಾರದ ಮೇಲೆ ಮೊದಲ ಬಾರಿ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿದೆ. ರಾಜಕೀಯ ಪಕ್ಷಗಳು ಬದಲಾಗದಿದ್ದರೆ, ಜನರೇ ಸರಕಾರಗಳನ್ನು ಬದಲಿಸುತ್ತಾರೆ ಎಂದಿದ್ದಾರೆ ಅರವಿಂದ್.
Array |
ಎಎಪಿಗೆ ಫ್ಲೈಯಿಂಗ್ ಸಿಖ್ ಅಭಿನಂದನೆ
ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿರುವ ಕ್ರೀಡಾಪಟು ಮಿಲ್ಕಾ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ ಅವರ ಚುನಾವಣಾ ಸಾಧನೆಯನ್ನು ಕೊಂಡಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ್ದಕ್ಕೆ ಆಮ್ ಆದ್ಮಿ ಪಕ್ಷವನ್ನು ಅವರು ಶ್ಲಾಘಿಸಿದ್ದಾರೆ.
|
ಎಎಪಿಯನ್ನು ಕೊಂಡಾಡಿದ ದಿವ್ಯಾ ಸ್ಪಂದನಾ
ಕರ್ನಾಟಕದ ಕಾಂಗ್ರೆಸ್ ಸಂಸದೆ, ಖ್ಯಾತ ಚಿತ್ರನಟಿ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರು ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸಾಧನೆಯನ್ನು ಶ್ಲಾಘಿಸಿದ್ದಾರೆ. ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ವಿಜಯ ಸಾಧಿಸಿದ್ದಕ್ಕೆ ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಇದೇ ನಿಜವಾದ ರಾಜಕಾರಣಿಯ ಲಕ್ಷಣವಲ್ಲವೆ?
|
ಪೂನಂ ಪಾಂಡೆ ಹೊಸ ಹಾಡು
ದೆಹಲಿಯಲ್ಲಿ ಆಮ್ಮ ಆದ್ಮಿ ಪಾರ್ಟಿ (ಪೊರಕೆ ಲಾಂಛನ) ವಿಜಯದ ನಂತರ ಶ್ರೀಸಾಮಾನ್ಯರು ಲುಂಗಿ ಲುಂಗಿ ಡಾನ್ಸ್ ನಂತರ ಝಾಡು (ಪೊರಕೆ) ಡಾನ್ಸ್ ಝಾಡು ಜಾನ್ಸ್ ಹಾಡು ಹಾಡುತ್ತಿದ್ದಾರೆ.
|
ಕೇಜ್ರಿವಾಲ್ ಅಭಿನಂದಿಸಿದ ರಾಜೀವ್ ಚಂದ್ರಶೇಖರ್
ದೆಹಲಿಯಲ್ಲಿ ಶೀಲಾ ದೀಕ್ಷಿತ್ ಮೇಲೆ ಅರವಿಂದ್ ಕೇಜ್ರಿವಾಲ್ (10 ಸಾವಿರ ಮತಗಳ ಅಂತರದಿಂದ) ಜಯ ಸಾಧಿಸಿರುವುದು ಭಾರತ ಇಂದಿನ ದಿನಗಳಲ್ಲಿ ಎಲ್ಲಿದೆ ಎಂಬುದರ ಸಂಕೇತ.
|
ಎರಡು ಬಗೆಯ ಮತದಾರರು
ದೆಹಲಿಯಲ್ಲಿ ಎರಡು ಬಗೆಯ ಮತದಾರರಿದ್ದಾರೆ. ಕಾಂಗ್ರೆಸ್ ಆಡಳಿತದ ವಿರುದ್ಧ ಸಿಟ್ಟಿಗೆದ್ದವರು ಬಿಜೆಪಿಗೆ ಮತ ಹಾಕಿದ್ದಾರೆ. ತೀವ್ರವಾಗಿ ಸಿಟ್ಟಿಗೆದ್ದವರು ಎಎಪಿಗೆ ಮತ ಹಾಗಿದ್ದಾರೆ.
|
ಅರವಿಂದ್ ಮುಮಂ ಆಗದಿದ್ರೂ ಪರವಾಗಿಲ್ಲ
ಕೇಜ್ರಿವಾಲ್ ಅವರು ಈ ಬಾರಿ ಮುಖ್ಯಮಂತ್ರಿ ಆಗದಿದ್ರೂ ಪರವಾಗಿಲ್ಲ. ಅವರಿಗೆ ನಮ್ಮ ಬೆಂಬಲ ಎಂದಿಗೂ ಇರುತ್ತದೆ.
|
ಅರವಿಂದ್ ನಿಜವಾದ ಹೀರೋ
ಈ ಚುನಾವಣೆಯ ಕಥೆ ಏನು ಹೇಳುತ್ತದೆಂದರೆ ಅರವಿಂದ್ ಕೇಜ್ರಿವಾಲ್ ಅವರೇ ನಿಜವಾದ ಹೀರೋ. ಒಪ್ತೀರಾ?
|
ಯುವಕರನ್ನು ಈ ಗೆಲುವು ಉತ್ತೇಜಿಸಲಿದೆ
ಆಮ್ ಆದ್ಮಿ ಪಕ್ಷದ ಗೆಲುವಿನಿಂದಾಗಿ, ಇಷ್ಟು ವರ್ಷ ಕೇವಲ ಹಿರಿಯರ ಕಾರ್ಯಕ್ಷೇತ್ರವಾಗಿದ್ದ ರಾಜಕೀಯಕ್ಕೆ ಯುವಕರ ದಂಡು ಹರಿದುಬರಲಿದೆ.
|
ಅರವಿಂದ್ ಕಲಿಸಿದ ಪಾಠ
ಕೇವಲ ಹಣ ಮತ್ತು ಮದ್ಯ ಸರಬರಾಜು ಮಾಡಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅರವಿಂದ್ ತೋರಿಸಿದ್ದಾರೆ. ಇದು ಎಲ್ಲ ಪಕ್ಷಗಳಿಗೆ ಅವರು ಕಲಿಸಿದ ಪಾಠ.
|
ಪ್ರೀತಿಶ್ ನಂದಿ ಟ್ವೀಟ್
ಎಎಪಿಗೆ ಸ್ವಾಗತ. ಅರವಿಂದ್ ಕೇಜ್ರಿವಾಲ್ ತಾವು ಏನೆಂದು ಸಾಬೀತುಪಡಿಸಿದ್ದಾರೆ. ಬದಲಾವಣೆಗಾಗಿ ಭಾರತ ತಹತಹಿಸುತ್ತಿದೆ.
|
ಸಚಿನ್ ಕೂಡ ಮೊದಲ ಪಂದ್ಯದಲ್ಲಿ ಇಷ್ಟು ಗಳಿಸಿರಲಿಲ್ಲ
ಸಚಿನ್ ತೆಂಡೂಲ್ಕರ್ ತನ್ನ ಮೊದಲ ಪಂದ್ಯದಲ್ಲಿ ಗಳಿಸಿದ್ದು ಕೇವಲ 15 ರನ್. ವೆಲ್ ಡನ್ ಎಎಪಿ.
|
ಆಲ್ ದಿ ಬೆಸ್ಟ್ ಅಂದ ಕಪಿಲ್ ಸಿಬಲ್
ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆಗಳು. ಆಲ್ ದಿ ಬೆಸ್ಟ್.
|
ಎಎಪಿ ಬಗ್ಗೆ ನನ್ನ ಕಲ್ಪನೆ ತಪ್ಪಾಗಿತ್ತು
ದೆಹಲಿಯಲ್ಲಿ 14 ಸೀಟ್ ಎಎಪಿ ಗೆಲ್ಲುತ್ತದೆಂದು ಅಂದುಕೊಂಡಿದ್ದೆ. ನನ್ನ ಕಲ್ಪನೆ ತಪ್ಪಾಗಿತ್ತು. ಕಾಂಗ್ರೆಸ್ ಅಧಿಕ ಸ್ಥಾನ ಗೆಲ್ಲುತ್ತದೆಂದುಕೊಂಡಿದ್ದೆ. ಆ ಕಲ್ಪನೆಯೂ ತಪ್ಪಾಗಿದೆ.