ಮೈಸೂರುː ದಣಿದವರಿಗೆ ನೀರು ಕೊಟ್ಟ ಧನ್ಯತೆ
ಮೈಸೂರು, ಅ. 13 : ನಾಡಹಬ್ಬ ದಸರಾಕ್ಕೆ ತೆರೆ ಬಿದ್ದಿದೆ. ಆದರೆ ದಸರಾವನ್ನು ಮತ್ತಷ್ಟು ಚೆಂದಗಾಣಿಸಿದ, ಜನರಿಗೆ ಭದ್ರತೆ ಒದಗಿಸಿದ ಕಲಾವಿದರು ಮತ್ತು ಪೊಲೀಸರ ಬಾಯಾರಿಕೆ ತೀರಿಸಿದ ಸಂಸ್ಥೆ ಬಗ್ಗೆ ಹೇಳಲೇಬೇಕು. ಎಸ್ ಪಿಐ ಸಮೂಹ ಸಂಸ್ಥೆ ಕಲಾವಿದರ, ಪೊಲೀಸರ ದಾಹ ತಣಿಸಲು ನಿರಂತರವಾಗಿ ಶ್ರಮಿಸಿತ್ತು.
ಜಂಬೂಸವಾರಿ ಉದ್ದಕ್ಕೂ ಎಸ್ ಪಿಐ ಸಂಸ್ಥೆಯ ಉದ್ಯೋಗಿಗಳು ನಿರಂತರವಾಗಿ ಕುಡಿಯುವ ನೀರು ಒದಗಿಸಿದರು. ಕೆಆರ್ ವೃತ್ತ ಮತ್ತು ಬನ್ನಿ ಮಂಟಪದ ನಡುವೆ ಹತ್ತು ಕಡೆ ನೀರಿನ ಚಾವಡಿ ನಿರ್ಮಿಸಲಾಗಿತ್ತು. ಬನ್ನಿ ಮಂಟಪದ ಒಳಗಡೆಯೂ ಕರ್ತವ್ಯ ನಿರತ ಪೊಲೀಸರಿಗೆ ನಿರಂತರವಾಗಿ ನೀರು ಒದಗಿಸಲಾಯಿತು. ಕಲಾವಿದರು, ಸ್ತಬ್ಧ ಚಿತ್ರದ ಜತೆ ಸಂಚರಿಸುವವರು, ಪೊಲೀಸರು, ಭದ್ರತಾ ಸಿಬ್ಬಂದಿ ಹೀಗೆ ಎಲ್ಲರ ದಾಹ ತೀರಿಸಲು ಎಸ್ ಪಿಐ ಶ್ರಮಿಸಿತು.[ಬಂದರು ನಗರಿಯಲ್ಲೊಂದು ಬಿಪಿಒ ಕಂಪನಿ]
8 ಸಾವಿರ ನೀರಿನ ಬಾಟಲ್ ಗಳು, 20 ಲೀಟರ್ ನ ಐದು ನೂರು ಕ್ಯಾನ್ ಗಳು ಮತ್ತು 8 ಸಾವಿರ ಬಟರ್ ಮಿಲ್ಕ್ ಪ್ಯಾಕೆಟ್ ಗಳನ್ನು ಹಂಚಲಾಯಿತು. ಎಸ್ ಪಿಐ ಸಮೂಹ ಸಂಸ್ಥೆ ನಿರಂತರವಾಗಿ ಎರಡನೇ ವರ್ಷ ಈ ಸೇವೆ ಒದಗಿಸಿದೆ. ಅಲ್ಲದೇ ಮಹಾರಾಜಾ ಕಾಲೇಜಿನಲ್ಲಿ ದಸರಾ ಪ್ರದರ್ಶನಕ್ಕೆ ತರಬೇತಿ ಪಡೆಯುತ್ತಿದ್ದ ಕಲಾವಿದರಿಗೆ ಮತ್ತು ಪೊಲೀಸರಿಗೆ ನೀರು, ಹಾಲು ಮತ್ತಿತರ ವಸ್ತುಗಳನ್ನು ನಿರಂತರವಾಗಿ ಒದಗಿಸಿದೆ.[ಮೈಸೂರಿನ ಎಸ್ಪಿಐ ತೆಕ್ಕೆಗೆ ನ್ಯೂಜೆರ್ಸಿ ಕಂಪನಿ]
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಸಿದ್ ಮುಖರ್ಜಿ, ಜನರ ಸೇವೆಗೆ ಒಂದು ಅವಕಾಶ ಕಲ್ಪಿಸಿಕೊಟ್ಟ ಮೈಸೂರು ಪೊಲೀಸರಿಗೆ ಅಭಿನಂದನೆ ಸಲ್ಲಿಸಿತ್ತೇನೆ. ನಮ್ಮ ಸೇವೆ ನಿಜವಾಗಿಯೂ ತೃಪ್ತಿ ನೀಡಿದೆ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಇರಾದೆ ಇದೆ ಎಂದು ಹೇಳಿದರು.