ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡು ಕಂಡ ಶ್ರೇಷ್ಠ ವಿದ್ವಾಂಸ ರಂಗನಾಥ ಶರ್ಮ ಸ್ಮರಣೆ

By ರಾಮಚಂದ್ರ ಹೆಗ್ಡೆ, ಬೆಂಗಳೂರು
|
Google Oneindia Kannada News

ನಾಡು ಕಂಡ ಶ್ರೇಷ್ಠ ವಿದ್ವಾಂಸ ಮಹಾಮಹೋಪಾಧ್ಯಾಯ ಡಾ . ಎನ್ . ರಂಗನಾಥಶರ್ಮರು ಇನ್ನಿಲ್ಲ. ಎಂಬ ಸುದ್ದಿ ಕಣ್ಣಂಚು ಒದ್ದೆಯಾಗಿಸಿತು. ವಿದ್ವಾನ್ ರಂಗನಾಥ ಶರ್ಮರು ನಾಡು ಕಂಡ ಶ್ರೇಷ್ಠ ವಿದ್ವಾಂಸರು. ನಮ್ಮ ದೇಶದ ಅಗ್ರಮಾನ್ಯ ಸಂಸ್ಕೃತ ಮತ್ತು ಕನ್ನಡ ಪಂಡಿತರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರಿಗೆ ಸಮಾನರು ವಿರಳ. ವಾಲ್ಮೀಕಿ ರಾಮಾಯಣ, ಭಾಗವತ ಗಳನ್ನ ಕನ್ನಡಕ್ಕೆ ತಂದವರು ಅವರು.

ಕನ್ನಡದ ಮೇರು ವ್ಯಕ್ತಿತ್ವ ಡಿ . ವಿ. ಗುಂಡಪ್ಪ ಯವರ ಒಡನಾಡಿ. ಡಿ.ವಿ.ಗುಂಡಪ್ಪ ಮತ್ತು ರಂಗನಾಥ ಶರ್ಮಾ ಅವರದು ಅನ್ಯೋನ್ಯ ಸ್ನೇಹ ಸಂಬಂಧ. ಡಿ . ವಿ. ಜಿ ಯವರ 'ಮರುಳ ಮುನಿಯನ ಕಗ್ಗ' ವನ್ನು ನಾಡಿಗೆ ನೀಡಿದ ಕೀರ್ತಿ ಶರ್ಮರದು. ಮರುಳ ಮುನಿಯ ಪ್ರಕಟಗೊಂಡಿದ್ದು ಡಿವಿಜಿಯವರು ನಿಧನರಾದ ನಂತರ. ಡಿವಿಜಿ ಅವರ ಸಂಗ್ರಹದಲ್ಲಿದ್ದ ಮರುಳಮುನಿಯನನ್ನು ಪತ್ತೆ ಮಾಡಿ ಕನ್ನಡ ಲೋಕಕ್ಕೆ ನೀಡಿದ್ದು ಅವರ ಸುದೀರ್ಘ ಕಾಲದ ಒಡನಾಡಿಗಳಾಗಿದ್ದ ವಿದ್ವಾಂಸ ಎನ್.ರಂಗನಾಥ ಶರ್ಮರು. ಒಂದರ್ಥದಲ್ಲಿ ಮಂಕುತಿಮ್ಮನ ತಮ್ಮ ಅವರೇ.

ತಮ್ಮ ಬದುಕಿನ 97 ವಸಂತಗಳನ್ನು ಕಂಡಿದ್ದ ಶರ್ಮರಿಗೆ ಕಳೆದ ವರ್ಷ ಮೈಸೂರಿನ ನಮ್ಮ 'ಡಿ . ವಿ. ಜಿ ಬಳಗ' ದ ವತಿಯಿಂದ 'ಡಿ. ವಿ. ಜಿ ಪ್ರಶಸ್ತಿ' ನೀಡಿ ನಮ್ಮನ್ನು ನಾವು ಗೌರವಿಸಿಕೊಂಡಿದ್ದೆವು. ನಮ್ಮ 'ಸಮಾಜ ಸೇವಕರ ಸಮಿತಿ'ಯ ಚಟುವಟಿಕೆಗಳ ಬಗ್ಗೆ ಶರ್ಮರಿಗೆ ತುಂಬಾ ಪ್ರೀತಿಯಿತ್ತು.

Renowned Kannada and Sanskrit Scholar Ranganatha Sharma passes away

ನಮ್ಮ ಸಮಾಜ ಸೇವಕರ ಸಮಿತಿಯ ಚಟುವಟಿಕೆಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು ಅವರು. ನಾವು ಅವರ ಮನೆಗೆ ಹೋದಾಗಲೆಲ್ಲಾ ಹಲವು ಘಂಟೆಗಳ ಮಾತುಕತೆ, ತೊಂಭತ್ತು ತುಂಬಿದ್ದರೂ ನಮ್ಮಂತ ಕಿರಿಯರ ಜತೆ ಸದಾ ಪ್ರೀತಿಯಿಂದ ಅಕ್ಕರೆಯಿಂದ ಸಂಭಾಷಿಸುತ್ತಿದ್ದರು. ನಮ್ಮನ್ನು ಯಾವತ್ತೂ ಅವರು ಬರಿಗೈಯಲ್ಲಿ ಕಳಿಸಿದ್ದಿಲ್ಲ. ಅವರು ಮೈಸೂರಿಗೆ ಹೋದ ಮೇಲೂ ನಾವು ಭೇಟಿ ಮಾಡಲು ಹೋದಾಗ ಎಲ್ಲವನ್ನೂ ನೆನಪಿಟ್ಟುಕೊಂಡು ವಿಚಾರಿಸುತ್ತಿದ್ದರು. ಅವರನ್ನು ಕಳೆದುಕೊಂಡು ನಾವು ನಿಜಕ್ಕೂ ಬಡವಾಗಿದ್ದೇವೆ. ಮನೆಯ ಹಿರಿಯಜ್ಜ ನನ್ನು ಕಳೆದುಕೊಂಡಷ್ಟೇ ಸಂಕಟವಾಗುತ್ತಿದೆ. ಇಂತಹ ಒಬ್ಬ ಶ್ರೇಷ್ಠ ವಿದ್ವಾಂಸರನ್ನು, ಧೀಮಂತರನ್ನು ಕಳೆದುಕೊಂಡು ಕನ್ನಡನಾಡು ಬಡವಾಗಿದೆ. ಅಗಲಿದ ಹಿರಿಯ ಚೇತನಕೆ ಭಾವಪೂರ್ಣ ಅಶ್ರುತರ್ಪಣ.

ಅಂತಿಮ ನಮನ: ವಾಲ್ಮೀಕಿ ರಾಮಾಯಣ, ವಿಷ್ಣು ಪುರಾಣ, ಅಮರಕೋಶವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದ ಖ್ಯಾತ ಸಂಸ್ಕೃತ ವಿದ್ವಾಂಸ ಮಹಾಮಹೋಪಾಧ್ಯಾಯ ಡಾ.ವಿದ್ವಾನ್ ಎನ್.ರಂಗನಾಥ ಶರ್ಮ(98) ಶನಿವಾರ ಮುಂಜಾನೆ ನಿಧನ ಹೊಂದಿದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಪತ್ನಿ ಕೆಲವು ವರ್ಷಗಳ ಹಿಂದಷ್ಟೇ ನಿಧನರಾಗಿದ್ದರು. ಮೃತರ ಅಂತ್ಯಸಂಸ್ಕಾರ ಶನಿವಾರ ಮೈಸೂರಿನ ಗೋಕುಲಂ ಚಿರಶಾಂತಿಧಾಮದಲ್ಲಿ ನೆರವೇರಿಸಲಾಯಿತು.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನಡಹಳ್ಳಿಯ ಕೃಷಿ ಕುಟುಂಬದಲ್ಲಿ 1916ರಲ್ಲಿ ಜನಿಸಿದ ರಂಗನಾಥ ಶರ್ಮ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದರು. ಸುಮಾರು 40 ವರ್ಷ ಸಂಸ್ಕೃತ ವ್ಯಾಕರಣಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರ ಬೆಂಗಳೂರಲ್ಲಿದ್ದ ಅವರು, ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕೇಂದ್ರ ಸರ್ಕಾರದ ರಾಷ್ಟ್ರಪತಿ ಸನ್ಮಾನ, ಡಿವಿಜಿ ಸ್ಮಾರಕ ಸನ್ಮಾನ, ತಿರುಪತಿ ಸಂಸ್ಕೃತ ವಿಶ್ವವಿದ್ಯಾಲಯದ ಮಹಾಮಹೋಪಧ್ಯಾಯ ಪದವಿ, ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೆಟ್‌ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದರು.

English summary
Renowned Kannada and Sanskrit Scholar Mahamahopadyaya Dr. Vid. N. Ranganatha Sharma (98) passed away at his son’s residence in Kuvempunagar Mysore. Last rites were performed at Chirashanthidhama in Gokulam last day(Jan.25)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X