ಹಳ್ಳಿ ಹಕ್ಕಿ ಹಾಡಿನ ವಿಶ್ವನಾಥರ ಧ್ವನಿಯಲ್ಲಿ ನಡುಕ!
ಮೈಸೂರು, ಏಪ್ರಿಲ್ 22: 'ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳುವೆ. ಅದರಲ್ಲಿ ಯಾವುದೇ ಅನುಮಾನ ಬೇಡ ' ಎಂದು ಕಳೆದ ವಾರ ತುಂಬು ಆತ್ಮವಿಶ್ವಾಸದಿಂದ ನುಡಿದಿದ್ದ ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್ಸಿನ ಎಚ್ ವಿಶ್ವನಾಥ್ ಅವರು ಫಲಿತಾಂಶಕ್ಕೆ ದಿನಗಣನೆ ಶುರುವಾಗಿರುವಾಗ ಅಧೀರರಾದಂತೆ ಕಂಡುಬರುತ್ತಿದ್ದಾರೆ.
'ಜಂಭದ ಕೋಳಿ ಪ್ರತಾಪ್ ಫಲಿತಾಂಶ ದಿನ ಬೆತ್ತಲು' ಎಂದು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದ ವಿಶ್ವನಾಥ್ ಅವರು ಇದೀಗ ರಾಗ ಬದಲಿಸಿದ್ದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
'ಆದರೆ ಯಾರು ಏನೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರೂ ಮೇ 16ರಂದು ಮತ ಪೆಟ್ಟಿಗೆ ತೆರೆದಾಗ ಬಂಡವಾಳ ಗೊತ್ತಾಗುತ್ತದೆ' ಎಂದು ತಮ್ಮ ಗೆಲುವಿನ ಸುಳಿವು ನೀಡಿದ್ದಾರೆ. 'ಈ ಬಾರಿಯ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಅಷ್ಟಾಗಿ ನಡೆಯಲಿಲ್ಲ. ಆದರೆ, ಎಲ್ಲ ಕಡೆ ಹಣ ತಣ್ಣಗೆ ಹರಿದಿದೆ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಶಾಂತಿಯುತ ಮತದಾನ ನಡೆದಿದೆ. ಮುಂದಿನ ಚುನಾವಣೆಗಳಲ್ಲಿ ಹಣ ಹರಿಯುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು' ಎಂದು ಹೇಳಿದರು. ನಮ್ಮ ರಾಜ್ಯದಲ್ಲಿ ಚುನಾವಣೆ ಮುಗಿದಿದೆ.
ಪ್ರವೀಣ್ ಬಾಯ್ ತೊಗಡಿಯಾ ಹೇಳಿಕೆ ಬಗ್ಗೆ ಗಮನ ಸೆಳೆದ ವಿಶ್ವನಾಥ್, ತೊಗಡಿಯಾ ನೀಡಿದ್ದಾರೆನ್ನಲಾದ ಹೇಳಿಕೆಯನ್ನು ವಿರೋಧಿಸುವೆ. ಅವರ ಕೈ-ಕಾಲು ಮುರಿದು ದೇಶದಿಂದ ಹೊರಹಾಕಿ ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.