ಮೈಸೂರು ಚಿನ್ನದ ಅಂಬಾರಿಗೆ 15 ಕೋಟಿ ರೂ. ವಿಮೆ
ಮೈಸೂರು, ಸೆ. 30 : ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಗೆ 15 ಕೋಟಿ ರೂ.ಗಳ ವಿಮೆ ಮಾಡಿಸಲಾಗಿದೆ. ನ್ಯೂ ಇಂಡಿಯಾ ಇನ್ಷೊರೆನ್ಸ್ ಕಂಪನಿಯೊಂದಿಗೆ ಮೈಸೂರು ಜಿಲ್ಲಾಡಳಿತ ವಿಮೆ ಕುರಿತ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.
ಮಂಗಳವಾರ ಮೈಸೂರು ಜಿಲ್ಲಾಡಳಿತ ನ್ಯೂ ಇಂಡಿಯಾ ಇನ್ಷೊರೆನ್ಸ್ ಕಂಪನಿಯೊಂದಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ವಿಮೆ ಮಾಡಿಸಿರುವ ಒಪ್ಪಂದಕ್ಕೆ ಸಹಿ ಹಾಕಿ, ಪ್ರೀಮಿಯಮ್ ಮೊತ್ತವನ್ನು ಪಾವತಿ ಮಾಡಿದೆ. ಒಟ್ಟು 15.05 ಕೋಟಿ ರೂ. ಮೊತ್ತದ ವಿಮೆ ಇದಾಗಿದೆ. [ಮೈಸೂರು ದಸರಾ ಚಿತ್ರಗಳು]
750 ಕೆಜಿ ತೂಕದ ಚಿನ್ನದ ಅಂಬಾರಿ ಮೈಸೂರು ದಸರಾದ ಕೊನೆಯ ದಿನದ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿರುತ್ತದೆ. ಚಿನ್ನದ ಅಂಬಾರಿ ಮೇಲೆ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಇಟ್ಟು ಬನ್ನಿಮಂಟಪದ ತನಕ ಮೆರವಣಿಗೆ ಮಾಡಲಾಗುತ್ತದೆ. ಈ ಜಂಬೂ ಸವಾರಿ ಮಾರ್ಗದಲ್ಲಿ ಲಕ್ಷಾಂತರ ಮಂದಿ ಸೇರಿರುತ್ತಾರೆ. [ಜನಧನ ಯೋಜನೆಯಡಿ ಜೀವ ವಿಮಾ ಸೌಲಭ್ಯ]
ಜಂಬೂ ಸವಾರಿ ವೇಳೆ ಏನಾದರು ಅವಘಡಗಳು ಸಂಭವಿಸಿದರೆ ಪ್ರಾಣಹಾನಿ, ಆಸ್ತಿಪಾಸ್ತಿಹಾನಿ ಉಂಟಾದರೆ ಎಂಬ ಕಾರಣದಿಂದಾಗಿ ಪ್ರತಿ ವರ್ಷ ಜಿಲ್ಲಾಡಳಿತ ಅಂಬಾರಿಗೆ ವಿಮೆ ಮಾಡಿಸುತ್ತದೆ. ಕಳೆದ ವರ್ಷ 9 ಕೋಟಿ ರೂ.ಗಳಿಗೆ ವಿಮೆ ಮಾಡಿಸಲಾಗಿತ್ತು. ಈ ಬಾರಿ ಅದು 15 ಕೋಟಿಗೆ ಏರಿಕೆಯಾಗಿದೆ. ಜಂಬೂ ಸವಾರಿ ದಿನ ಮಾತ್ರ ಅಂಬಾರಿಯನ್ನು ಅರಮನೆಯಿಂದ ಹೊರಗೆ ತರಲಾಗುತ್ತದೆ.