ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಾಲಿವುಡ್ ನಟಿ
ಮುಂಬೈ, ಮಾ 28: ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಈಗ ಮತ್ತೊಂದು ಸುದ್ದಿ ಮಾಡಿದ್ದಾರೆ. ಈ ಬಾರಿ ಏನಪ್ಪಾಂದ್ರೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮುಂಬೈ ಆಗ್ನೇಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಅನ್ನುವುದೇ ಇಲ್ಲ. ಅದರಲ್ಲೂ ಪ್ರಮುಖವಾಗಿ ಮೆಟ್ರೋ ನಗರಗಳಲ್ಲಿ ಮಹಿಳೆಯರ ಸುರಕ್ಷಿತೆಯ ಬಗ್ಗೆ ಹೆಚ್ಚಿನ ಒತ್ತು ನೀಡಲು ಚುನಾವಣಾ ಕಣಕ್ಕೆ ಧುಮುಕುತ್ತಿದ್ದೇನೆಂದು ರಾಖಿ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಪ್ರಮುಖ ರಾಜಕೀಯ ಪಕ್ಷವೊಂದು ನನಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ನಾನು ಅವರ ಆಫರ್ ಅನ್ನು ತಿರಸ್ಕರಿಸಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಜಯಗಳಿಸುತ್ತೇನೆ ಎಂದು ರಾಖಿ ಸಾವಂತ್ ವಿಶ್ವಾಸದ ಮಾತನ್ನಾಡಿದ್ದಾರೆ.
ಮುಂಬೈ ಆಗ್ನೇಯ ಕ್ಷೇತ್ರದಲ್ಲಿ ರಾಖಿ ಸಾವಂತ್ ಅವರು ಕಾಂಗ್ರೆಸ್ಸಿನ ಗುರುದಾಸ್ ಕಾಮತ್, ಶಿವಸೇನೆಯ ಗಜಾನನ್ ಕೀರ್ತೀಕರ್, ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಮಹೇಶ್ ಮಂಜ್ರೇಕರ್ ಮತ್ತು ಆಮ್ ಆದ್ಮಿ ಪಕ್ಷದ ಮಾಯಾಂಕ್ ಗಾಂಧಿ ಅವರನ್ನು ಎದುರಿಸಲಿದ್ದಾರೆ.
ಸಿನಿಮಾ ಅಸೋಸಿಯೇಷನ್ ಚುನಾವಣೆಗೂ ರಾಖಿ ಸ್ಪರ್ಧಿಸಲಿದ್ದಾರೆ. ಮುಂದೆ ಓದಿ,,
ಸಿನಿಮಾ ಅಸೋಸಿಯೇಷನ್
ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ ಅಸೋಸಿಯೇಷನ್ (CINTAA) ಚುನಾವಣೆಗೆ ಕೂಡಾ ರಾಖಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಲಾವಿದರಿಗೆ ಸಿಗಬೇಕಾದ ಗೌರವ, ಕಲಾವಿದರ ಅಭಿವೃದ್ಧಿಗಾಗಿ ಶ್ರಮಿಸುವುದು ರಾಖಿ ಸಾವಂತ್ ಅಜೆಂಡಾ.
ಬಿಜೆಪಿಗೆ ಮತಹಾಕಿ ಅಂದಿದ್ದರು
ಈ ಹಿಂದೆ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದಾಗ ಬಿಜೆಪಿ ಕೈಹಿಡಿಯುವ ಸುಳಿವನ್ನು ರಾಖಿ ಸಾವಂತ್ ನೀಡಿದ್ದರು. ಬಿಜೆಪಿಗೆ ಮತ ನೀಡಿ, ಮೋದಿಯೇ ಪ್ರಧಾನಿ ಹುದ್ದೆಗೆ ಅತ್ಯಂತ ಸೂಕ್ತ ಆಯ್ಕೆ ಎಂದಿದ್ದರು.
ಬಿಜೆಪಿ ಕಚೇರಿಯಲ್ಲಿ ರಾಖಿ ಕಟ್ಟಿದ ಸಾವಂತ್
ದಿಢೀರನೇ ಬಿಜೆಪಿ ಕಚೇರಿಗೆ ಹಾಜರಾಗಿದ್ದ ಸಾವಂತ್, ರಾಜನಾಥ್ ಸಿಂಗ್ ಸಮಕ್ಷಮದಲ್ಲಿ ಅಲ್ಲಿದ್ದ ಮಾಜಿ ಸೈನಿಕರಿಗೆ ರಾಖಿ ಕಟ್ಟಿ ಸಂಭ್ರಮಿಸಿ ಎಲ್ಲರ ಜೊತೆ ಚಹಾ ಸೇವಿಸಿದ್ದರು.
ರಾಹುಲ್ ಮದುವೆಯಾಗಲು ಸಿದ್ದ
ರಾಹುಲ್ ಗಾಂಧಿ ಮದುವೆಯಾಗಲು ನಾನು ಸಿದ್ದ, ಆದರೆ ಒಂದು ಕಂಡಿಷನ್. ದೇಶದ ಪ್ರಧಾನಿ ಮಾತ್ರ ನರೇಂದ್ರ ಮೋದಿಯವರೇ ಆಗ ಬೇಕು ಎಂದು ರಾಖಿ ಸಾವಂತ್ ಹೇಳಿದ್ದರು.
ಕೇಜ್ರಿವಾಲ್ ಮೋಸ ಮಾಡಿದ್ರು
ದೆಹಲಿಯ ಜನತೆ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದರು. ಆದರೆ ಕೇಜ್ರಿವಾಲ್ ಅಧಿಕಾರ ನಡೆಸದೇ ಪಲಾಯನಗೈದರು ಎಂದು ರಾಖಿ ಲೇವಡಿ ಮಾಡಿದ್ದರು.