ಬಿಜೆಪಿ ಆಫರ್ ರಿಜೆಕ್ಟ್ ಮಾಡಿದ ಶಿವಸೇನಾ
ಮುಂಬೈ, ಸೆ.15: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಹಾಗೂ ಶಿವಸೇನಾ ನಡುವೆ ಜಟಾಪಟಿ ಮುಂದುವರೆದಿದೆ. ಉಭಯ ಪಕ್ಷಗಳು ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಒಳ್ಳೆಯದು ಎಂಬ ಬಿಜೆಪಿ ಆಫರನ್ನು ಶಿವಸೇನೆ ತಳ್ಳಿ ಹಾಕಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂದಾಗಿದ್ದಾರೆ.
ಅಕ್ಟೋಬರ್ 15ರ ಮಹಾರಾಷ್ಟ್ರ ಮತ ಸಮರಕ್ಕಾಗಿ 25 ವರ್ಷಗಳ ಮೈತ್ರಿಯನ್ನು ಬಲಿ ಕೊಡಲು ಎರಡು ಮುಂದಾಗಿರುವುದು ವಿಪಕ್ಷಗಳಿಗೆ ಸಂತಸ ತಂದಿದೆ. ಆದರೆ, ಶಿವಸೇನಾ ಹಾಗೂ ಬಿಜೆಪಿ ಕೊನೆ ಕ್ಷಣದಲ್ಲಿ ತನ್ನ ವರಸೆ ಬದಲಾಯಿಸುವ ಎಲ್ಲಾ ಲಕ್ಷಣಗಳಿವೆ. ರಾಜ್ಯದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಸೇನೆ-ಬಿಜೆಪಿ ತಲಾ 135 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ಉಳಿದ 18 ಕ್ಷೇತ್ರಗಳನ್ನು ಇನ್ನೊಂದು ಮೈತ್ರಿಪಕ್ಷಕ್ಕೆ ನೀಡಬೇಕು ಎಂಬ ಸಲಹೆ ಕೇಳಿ ಬಂದಿತ್ತು. ಆದರೆ ಶಿವಸೇನಾ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. [ಆರೆಸ್ಸೆಸ್ ಗೆ ಮುಂಬೈ ಚಿಂತೆ ಯಾಕೆ?: ಶಿವಸೇನೆ]
ಬದಲಿಗೆ 2009ರಲ್ಲಿ ನೀಡಲಾಗಿದ್ದ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲಾಗುವುದು. ನಮಗೆ ಹೆಚ್ಚಿನ ಸ್ಥಾನ ಬೇಕೆಂದು ಪಟ್ಟುಹಿಡಿದಿದೆ. ಹೀಗೆ ಎರಡು ಪಕ್ಷಗಳು ತಮ್ಮ ತಮ್ಮ ಪಟ್ಟುಗಳನ್ನು ಸಡಿಲಿಸದಿರುವುದರಿಂದ ಮೈತ್ರಿಕೂಟ ಯಾವುದೇ ವೇಳೆ ಮುರಿದುಬೀಳುವ ಸಂಭವ ಹೆಚ್ಚಿದೆ. 2009ರಲ್ಲಿ ಶಿವಸೇನಾ 169 ಕ್ಷೇತ್ರ ಹಾಗೂ ಬಿಜೆಪಿ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.
ನಾನೇ ಸಿಎಂ ಎಂದ ಉದ್ದವ್
ಸೀಟು ಹಂಚಿಕೆ ಕುರಿತಂತೆ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಜತೆ ಮಾತುಕತೆ ನಡೆಸಲಾಗುವುದು. ಸ್ಥಳೀಯ ನಾಯಕರು ಚುನಾವಣೆ ಗೆಲ್ಲುವುದನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ಕೆಲಸ ಮಾಡಬೇಕು. ಅನಗತ್ಯ ಹೇಳಿಕೆ ನೀಡಬಾರದೆಂದು ಮುಖಂಡರಿಗೆ ಸೂಚನೆ ಅಮಿತ್ ಶಾ ಸೂಚಿಸಿದ್ದಾರೆ. ಈ ನಡುವೆ ಮಹಾರಾಷ್ಟ್ರದ ಸಿಎಂ ಆಗುವುದು ನನ್ನ ಕನಸು ಎಂದು ಉದ್ದವ್ ಠಾಕ್ರೆ ಘೋಷಿಸಿರುವುದು ಬಿಜೆಪಿಗೆ ತಲೆನೋವಾಗಿದೆ.
ಅಮಿತ್ ಶಾ ಎಂಟ್ರಿ
ಮೈತ್ರಿಕೂಟದಲ್ಲಿ ಬಿಕ್ಕಟ್ಟು ಎದುರಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎರಡೂ ಪಕ್ಷಗಳಿಗೂ ಸಮಾನ ಆದ್ಯತೆ ನೀಡಲಾಗುವುದು. ಸದ್ಯಕ್ಕೆ ನಮ್ಮಲ್ಲಿ ಯಾವುದೇ ಒಡಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಅಲ್ಲಿಯವರೆಗೂ ಎರಡೂ ಪಕ್ಷಗಳು ಕಾಂಗ್ರೆಸ್-ಎನ್ ಸಿಪಿ ದುರಾಡಳಿತದ ವಿರುದ್ಧ ಹೋರಾಟ ನಡೆಸಿ ಅಧಿಕಾರ ಗದ್ದುಗೆ ಹಿಡಿಯುವುದೇ ತಮ್ಮ ಮೂಲ ಉದ್ದೇಶ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ
2009ರಲ್ಲಿ ಶಿವಸೇನೆ 169 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 44 ಸ್ಥಾನ ಗೆದ್ದಿತ್ತು. ಅದೇ ರೀತಿ ಬಿಜೆಪಿ 119 ಸ್ಥಾನಗಳಲ್ಲಿ ಸ್ಪರ್ಧಿಸಿ 46 ಕ್ಷೇತ್ರಗಳಲ್ಲಿ ವಿಜೇತರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 23 ಸ್ಥಾನಗಳನ್ನು ಹಾಗೂ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದರಿಂದ ಹೆಚ್ಚು ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಇನ್ನಷ್ಟು ಮಿತ್ರಪಕ್ಷಗಳಿವೆ
ಶಿವಸೇನಾ ಹಾಗೂ ಬಿಜೆಪಿ ಜೊತೆಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ರಾಮದಾಸ್ ಅತಾವಳೆ ಬಣ) ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಶಿವ ಸಂಗ್ರಾಮ್ ಪಕ್ಷ ಕೈ ಜೋಡಿಸಿವೆ. ಈ ಮೈತ್ರಿ ಕೂಟಕ್ಕೆ ಮಹಾಯುತಿ ಎಂದು ಹೆಸರಿಸಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 48 ಕ್ಷೇತ್ರಗಳ ಪೈಕಿ 42 ಸ್ಥಾನ ಗೆದ್ದಿದ್ದವು.