ಕುಮಟೆಯ 'ಕಿಂದರಜೋಗಿ' ಚಿತ್ತಾಲರ ನೆನಪು
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಹನೇಹಳ್ಳಿಯವರಾದ ಚಿತ್ತಾಲರು ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ರಾಸಾಯನಿಕ ತಂತ್ರಜ್ಞ(ಪಾಲಿಮರ್ ಟೆಕ್ನಾಲಜಿ)ರಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದರು, ಕಥೆ, ಕಾದಂಬರಿಗಳಲ್ಲದೆ ವಿಜ್ಞಾನ ಬರಹಗಳು, ಚುಟುಕು ಕಥೆಗಳ ಬರವಣಿಗೆಗಳ ಮೂಲಕ ಕನ್ನಡಿಗರ ಮನ ಮುಟ್ಟಿದ್ದರು.
ಚಿತ್ತಾಲರ 'ಶಿಕಾರಿ' ಕಾದಂಬರಿ ಜನಪ್ರಿಯತೆ ಜತೆಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿತು. ಇದೆ ಹೆಸರಿನಲ್ಲಿ ಸಿರೀಯಲ್ ಕೂಡಾ ಬಂದಿತ್ತು. ಅವಿನಾಶ್ ಅವರು ಪ್ರಧಾನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು.
ಚಿತ್ತಾಲರ ಮನೆ ಭಾಷೆ ಕೊಂಕಣಿ ಹಾಗೂ ಮರಾಠಿ ಆದರೆ, ಹುಟ್ಟೂರು ಹನೇಹಳ್ಳಿ ಚಿತ್ತಾಲರ ನೆಚ್ಚಿನ ತಾಣವಾಗಿತ್ತು. ಹನೇಹಳ್ಳಿ, ಕುಮಟಾ, ಧಾರವಾಡ, ಮುಂಬೈಗಳಲ್ಲಿ ವ್ಯಾಸಂಗ ಮಾಡಿದ ಚಿತ್ತಾಲರು ಮುಂಬೈನಲ್ಲಿ ವೃತ್ತಿ ಕಂಡುಕೊಂಡರು. ಅಣ್ಣ ಕವಿ ಗಂಗಾಧರ ಚಿತ್ತಾಲ, ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿ ಅವರ ಸಾಹಿತ್ಯ ಪ್ರಭಾವ ಚಿತ್ತಾಲರನ್ನು ಕಥೆ ಬರೆಯಲು ಪ್ರೇರಿಪಿಸಿತು.
1949ರಲ್ಲಿ ಬರೆದ ಬೊಮ್ಮಿಯ ಹುಲ್ಲು ಹೊರೆ, ಕುಮಟೆಗೆ ಬಂದಾ ಕಿಂದರಜೋಗಿ ಸೇರಿದ ಅನೇಕ ಕಥಾ ಸಂಕಲನ ಜತೆಗೆ ಪುರುಷೋತ್ತಮ, ಶಿಕಾರಿ ಸೇರಿದಂತೆ ಹಲವು ಕಾದಂಬರಿಗಳನ್ನು ವಿಮರ್ಶೆ ಕೃತಿಗಳನ್ನು ನೀಡಿದ್ದಾರೆ.
ಇವರ 'ಕಥೆಯಾದಳು ಹುಡುಗಿ' ಎಂಬ ಕೃತಿಗೆ 1983ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. 'ಶಿಕಾರಿ' ಕಾದಂಬರಿಗೆ 1979 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ದೊರೆತಿದೆ. 2002 ಸಾಲಿನ 'ನಿರಂಜನ ಪ್ರಶಸ್ತಿ' ದೊರೆತಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಮಹಾರಾಷ್ಟ್ರ ಸರ್ಕಾರದ ಸನ್ಮಾನ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳೂ ಲಭಿಸಿವೆ. [ಒಂದು ಹಳೆ ಪತ್ರ: ಚಿತ್ತಾಪಹಾರಿ ಕತೆಗಳ ಚಿತ್ತಾಲರಿಗೆ...]