ಉಡುಪಿ: ಮುಖ್ಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ
ಉಡುಪಿ,ಜು.31: ವಿಬ್ಗಯಾರ್ ಅತ್ಯಾಚಾರ ಪ್ರಕರಣದ ಬಳಿಕ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ, ಇತ್ತ ಉಡುಪಿಯ ಹೆಬ್ರಿ ಸಮೀಪದ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ.
ಶಿವಪುರದ ಪ್ರೌಢಶಾಲೆಯ ಗಣಿತ ಬೋಧಿಸುತ್ತಿದ್ದ ಶಿಕ್ಷಕ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಿಕ್ಷಕ ವೆಂಕಟರಮಣ ಕಲ್ಕೂರನನ್ನು ಹಬ್ರಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಸ್ಪೆಶಲ್ ಕ್ಲಾಸ್ ಮಾಡುವ ನೆಪದಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎಂದು ಹೇಳಲಾಗಿದೆ. ಶಿಕ್ಷಕನ ಕಿರುಕುಳದ ಬಗ್ಗೆ ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.[ಅ- ಅತ್ಯಾಚಾರ, ಆ-ಆತ್ಮರಕ್ಷಣೆ, ಇ-ಇರಿದುಬಿಡು...]
ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಹಿಂದಿ ಶಿಕ್ಷಕಿ ಹಾಗೂ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.[ರೇಪ್ ವಿರೋಧಿ ಬೆಂಗಳೂರು ಬಂದ್ ಗೆ ಶುಭಮಂಗಳ!!]
ಈ ಹಿಂದೆ ಕುಂದಾಪುರ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಈತ ಅಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ, ಬಳಿಕ ಹೆಬ್ರಿಯ ಶಿವಪುರ ಪ್ರೌಢಶಾಲೆಗೆ 2013ರಲ್ಲಿ ವರ್ಗಾವಣೆಯಾಗಿದ್ದ. ವರ್ಗಾವಣೆಯಾಗಿದ್ದರೂ ಶಿಕ್ಷಕ ವೆಂಕಟರಮಣ ಕಲ್ಕೂರ ತನ್ನ ಹಳೇ ಚಾಲಿಯನ್ನು ಮುಂದುವರೆಸಿದ್ದ. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆಸಿದ್ದಾರೆ.[ಬೆಂಗಳೂರು ಬಂದ್: ಕರವೇ ನಾರಾಯಣ ಗೌಡ ಏಕಿಲ್ಲ?]
ಅಮಾನತು ಆದೇಶ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರ ಅವರು ಶಿಕ್ಷಕ ವೆಂಕಟರಮಣ ಕಲ್ಕೂರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.